---------ಕನ್ನಡಪ್ರಭ ವಾರ್ತೆ ಸುತ್ತೂರುಜೀವನದ ಪ್ರತಿಯೊಂದು ಕ್ಷಣವೂ ಅಮೂಲ್ಯ ಎಂದು ಮೈಸೂರು ಜಿಲ್ಲಾ ವಿಶೇಷ ಚೇತನ ಕಲ್ಯಾಣಾಧಿಕಾರಿ ಕೆ.ಎಸ್. ರಾಘವೇಂದ್ರ ಹೇಳಿದರು.ಸುತ್ತೂರು ಶ್ರೀ ಕ್ಷೇತ್ರದಲ್ಲಿ ಆಯುರ್ವೇದ, ವಾಕ್-ಶ್ರವಣ, ನರ್ಸಿಂಗ್ ವಿದ್ಯಾರ್ಥಿಗಳ ಶಿಬಿರದ ಸಮಾರೋಪದಲ್ಲಿ ಅವರು ಮಾತನಾಡಿದರು.ಜೀವನವು ತುಂಬಾ ಚಿಕ್ಕದಾಗಿದ್ದು, ಅರ್ಥಪೂರ್ಣವಾಗಿ ಬದುಕಬೇಕು. ಮಾನವೀಯತೆ ಮತ್ತು ಮೌಲ್ಯಗಳು ಬದುಕಿನ ಭಾಗವಾಗಬೇಕು. ಸಮಯದ ಸದ್ಬಳಕೆಯಿಂದ ಯಶಸ್ಸನ್ನು ಪಡೆಯಬಹುದು. ಉತ್ತಮ ವಿಚಾರಗಳನ್ನು ಬೇರೆಯವರಿಗೆ ವರ್ಗಾಯಿಸಬೇಕು. ಶ್ರೀ ಸುತ್ತೂರು ಮಠವು ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಸದಾ ಶ್ರಮಿಸುತ್ತಿದೆ ಎಂದರು. ಜೆಎಸ್ಎಸ್ ಆಯುರ್ವೇದ ವೈದ್ಯಕೀಯ ವಿದ್ಯಾಲಯದ ಪಂಚಕರ್ಮ ವಿಭಾಗದ ಮುಖ್ಯಸ್ಥ ಡಾ. ವೀಣಾ ಜಿ. ರಾವ್ರವರು ವಿದ್ಯಾರ್ಥಿಗಳು ಸರಳ ಜೀವನ, ಮಿತ ಆಹಾರ ಮತ್ತು ಸಮಯ ಪ್ರಜ್ಞೆಗಳನ್ನು ಮೈಗೂಡಿಸಿಕೊಳ್ಳಬೇಕು. ಕೃತಕ ಬುದ್ಧಿಶಕ್ತಿಯು ವೈದ್ಯರು ನಿರ್ವಹಿಸುವ ಅನೇಕ ಕಾರ್ಯಗಳನ್ನು ನಿರ್ವಹಿಸುತ್ತದೆ. ಆದರೆ ಪ್ರೀತಿ, ದಯೆ ಕರುಣೆ ಮತ್ತು ಭಾವನೆಗಳನ್ನು ಅದು ನೀಡಲು ಸಾಧ್ಯವಿಲ್ಲ ಎಂದು ಹೇಳಿದರು. ದಿಶಾ ಭಾರತಿ ಸಂಸ್ಥೆಯ ನಿರ್ದೇಶಕಿ ಲಾವಣ್ಯ ರಾಧಾಕೃಷ್ಣ ಅವರು ಸ್ವಯಂ ತಿಳುವಳಿಕೆ ಬಹಳ ಮುಖ್ಯ. ನ್ಯೂನತೆಗಳನ್ನು ಸರಿಪಡಿಸಿಕೊಂಡು ಧನಾತ್ಮಕ ಚಿಂತನೆಗಳ ಮೂಲಕ ಬದುಕುವುದನ್ನು ಕಲಿಯಬೇಕು. ಪ್ರತಿಯೊಬ್ಬರಲ್ಲಿಯೂ ಭಿನ್ನ ಭಿನ್ನ ಪ್ರತಿಭೆಗಳಿರುತ್ತವೆ. ಕ್ರೀಡೆ, ಕಲೆ, ವಿಜ್ಞಾನ ಮೊದಲಾದ ಕ್ಷೇತ್ರಗಳಲ್ಲಿ ಇವುಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ತಿಳಿಸಿದರು.ಯೋಗ ಮತ್ತು ಧ್ಯಾನ ತರಬೇತುದಾರರಾದ ರಾಧಿಕ ಪಾರ್ಥಸಾರಥಿ ಮಾತನಾಡಿ, ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಸ್ಥಿರತೆ ಹೊಂದಿರಬೇಕು. ಮಾನಸಿಕ ಮತ್ತು ದೈಹಿಕ ಒತ್ತಡವಿಲ್ಲದೆ ಗುರಿ ಸಾಧಿಸುವ ಮಾರ್ಗವನ್ನು ಕಂಡುಕೊಳ್ಳಬೇಕು. ಕಲಿಕೆಯಲ್ಲಿ ಉತ್ಸಾಹವಿರಬೇಕು. ಬದುಕಿನಲ್ಲಿ ಎದುರಾಗುವ ಸಮಸ್ಯೆಗಳನ್ನು ಸ್ವೀಕರಿಸಿ ಮುನ್ನಡೆಯುವ ಗುಣವನ್ನು ಬೆಳೆಸಿಕೊಳ್ಳಬೇಕು ಎಂದರು. ಪವಿತ್ರ ಬಸವರಾಜ್ ತೋಟದ್, ವಿಘ್ನೇಶ್ವರ್ ಜಿ. ಹೆಗ್ಗಡೆ, ಬಿ.ಎಸ್. ಸಾನಿಕ, ಆರ್.ಕೆ. ಸೋಮನಾಥ್, ಎನ್.ಎಲ್. ಕುಸುಮಶ್ರೀ, ಎಂ. ಪ್ರಿಶಾ ತಿಮ್ಮಯ್ಯ ಮತ್ತು ಆರ್. ರೋಷಿಣಿ ಸಂತೋಷ್ ಬಾಬು ಅನಿಸಿಕೆಯನ್ನು ಹಂಚಿಕೊಂಡರು.ಎಂ.ಎಲ್. ರಾಜೇಂದ್ರ ಪ್ರಸಾದ್ ಶಿಬಿರದ ವರದಿ ಮಂಡಿಸಿದರು. ಬಿ.ಕೆ. ವಿನಯ್ ಕುಮಾರ್ ಪ್ರಾರ್ಥಿಸಿದರು. ಆರ್. ಕಾವ್ಯಶ್ರೀ ಸ್ವಾಗತಿಸಿದರು. ಎಸ್. ಅನುಷಾ ವಂದಿಸಿದರು. ಎಂ.ಎನ್. ರಾಜೇಶ್ವರಿ ನಿರೂಪಿಸಿದರು.