ಬಿ.ಶಂಕರಾನಂದರು ಹಳ್ಳಿಗಳಿಂದ ದೆಹಲಿಯವರೆಗೆ ಹಚ್ಚಹಸಿರು

KannadaprabhaNewsNetwork |  
Published : Jun 01, 2025, 01:53 AM IST
ಬೆಳಗಾವಿ ಕ್ಲಬ್‌ ರಸ್ತೆಗೆ ಬಿ.ಶಂಕರಾನಂದ ನಾಮಕರಣ ಮಾಡಲಾಯಿತು | Kannada Prabha

ಸಾರಾಂಶ

ಮಾಜಿ ಕೇಂದ್ರ ಸಚಿವ, ದಿ.ಬಿ.ಶಂಕರಾನಂದರು 7 ಬಾರಿ ಸಂಸದರಾಗಿ ಪ್ರತಿನಿಧಿಸಿದ ಚಿಕ್ಕೋಡಿ ಲೋಕಸಭೆ ಕ್ಷೇತ್ರದಿಂದ ಚಿಕ್ಕ ವಯಸ್ಸಿನಲ್ಲಿಯೇ ಸಂಸದೆಯಾಗಿ ಆಯ್ಕೆಯಾಗಿದ್ದು ನನ್ನ ಸೌಭಾಗ್ಯ ಎಂದು ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಮಾಜಿ ಕೇಂದ್ರ ಸಚಿವ, ದಿ.ಬಿ.ಶಂಕರಾನಂದರು 7 ಬಾರಿ ಸಂಸದರಾಗಿ ಪ್ರತಿನಿಧಿಸಿದ ಚಿಕ್ಕೋಡಿ ಲೋಕಸಭೆ ಕ್ಷೇತ್ರದಿಂದ ಚಿಕ್ಕ ವಯಸ್ಸಿನಲ್ಲಿಯೇ ಸಂಸದೆಯಾಗಿ ಆಯ್ಕೆಯಾಗಿದ್ದು ನನ್ನ ಸೌಭಾಗ್ಯ ಎಂದು ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಹೇಳಿದರು.

ನಗರದ ಕ್ಲಬ್ ರಸ್ತೆಯಲ್ಲಿ ಹಮ್ಮಿಕೊಂಡಿದ್ದ ಮಾಜಿ ಕೇಂದ್ರ ಸಚಿವ ಬಿ.ಶಂಕರಾನಂದ ಅವರ ಜನ್ಮಶತಮಾನೋತ್ಸವ ಅಂಗವಾಗಿ ಕ್ಲಬ್ ರಸ್ತೆಗೆ ಬಿ. ಶಂಕರಾನಂದರ ಹೆಸರು ಮರು ನಾಮಕರಣ ಮತ್ತು ಪ್ರತಿಮೆ ಸ್ಥಾಪನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದಿ.ಬಿ.ಶಂಕರಾನಂದರ ವ್ಯಕ್ತಿತ್ವ ಅವರ ಪರಿಚಯ ಇಂದಿಗೂ ಬೆಳಗಾವಿಯ ಜಿಲ್ಲೆಯ ಹಳ್ಳಿಗಳಿಂದ ದೆಹಲಿಯವರೆಗೂ ಹಚ್ಚಹಸಿರಾಗಿದೆ. ಚಿಕ್ಕೋಡಿ ಲೋಕಸಭೆ ಕ್ಷೇತ್ರವನ್ನು ಇಂದಿಗೂ ಅವರ ಹೆಸರಿನಲ್ಲಿ ದೆಹಲಿಯಲ್ಲಿ ಗುರುತಿಸಲಾಗುತ್ತದೆ ಎಂದು ತಿಳಿಸಿದರು.ಕೆ.ಎಲ್.ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಮಾತನಾಡಿ, ಮಾಜಿ ಕೇಂದ್ರ ಸಚಿವ ಬಿ. ಶಂಕರಾನಂದ ಅವರು ಬೆಳಗಾವಿ ಜಿಲ್ಲೆಯಲ್ಲಿ ಹುಟ್ಟಿ, ಬೆಳಗಾವಿಯ ಕೀರ್ತಿಯನ್ನು ಇಡೀ ದೇಶದ ಮಟ್ಟದಲ್ಲಿ ಬೆಳಗಿದ ಹೆಮ್ಮೆಯ ಸುಪುತ್ರ. ಬಿ.ಶಂಕರಾನಂದ ಅವರದ್ದು ಸರಳ ಸಜ್ಜನಿಕೆಯ ವ್ಯಕ್ತಿತ್ವ. ಅವರೆಂದು ತಮ್ಮ ಅಧಿಕಾರವನ್ನು ದುರುಪಯೋಗ ಪಡೆಸಿಕೊಳ್ಳಲಿಲ್ಲ. ತಮ್ಮ ರಾಜಕೀಯ ಜೀವನದಲ್ಲಿ ಯಾರಿಗೂ ತೊಂದರೆ ಕೊಡಲಿಲ್ಲ. ಹಲವು ಯೋಜನೆಗಳನ್ನು ಬೆಳಗಾವಿಗೆ ತಂದ ಕೀರ್ತಿ ಅವರಿಗೆ ಸಲ್ಲುತ್ತದೆ. ನನ್ನನ್ನು ಕೂಡ ರಾಜಕೀಯಕ್ಕೆ ಗುರುತಿಸಿದ್ದು ಬಿ. ಶಂಕರಾನಂದ ಅವರು ಎಂದರು. ಶಾಸಕ ಅಭಯ ಪಾಟೀಲ್ ಮಾತನಾಡಿ, ಬಿ.ಶಂಕರಾನಂದ ಸಿಎಂ ಆಗಲಿಲ್ಲ. ಆದರೆ, ಹಲವರನ್ನು ಮುಖ್ಯಮಂತ್ರಿಗಳಾಗಲೂ ಅವಕಾಶ ಮಾಡಿಕೊಟ್ಟವರು. ಅವರ ಜನ್ಮಶತಮಾನೋತ್ಸವ ಕಾರ್ಯಕ್ರಮ ಅಂಗವಾಗಿ ರಸ್ತೆ ಮರು ನಾಮಕರಣ ಮತ್ತು ಪ್ರತಿಮೆ ನಿರ್ಮಾಣಕ್ಕೆ ಪಕ್ಷಭೇದ ಮರೆತು ಕೈ ಜೋಡಿಸಿದ್ದೇವೆ ಎಂದು ತಿಳಿಸಿದರು.ಮಾಜಿ ಸಂಸದ ರಮೇಶ ಕತ್ತಿ ಮಾತನಾಡಿ, ಬೆಳಗಾವಿ ಜಿಲ್ಲೆಯನ್ನು ದೇಶಕ್ಕೆ ತೋರಿಸಿ ಕೊಟ್ಟಿದ್ದು ಬಿ.ಶಂಕರಾನಂದ. ಅವರು ತಮ್ಮ 35 ವರ್ಷಗಳ ಅಧಿಕಾರದ ಅವಧಿಯಲ್ಲಿ ಮೌಲ್ಯಾಧಾರಿತ ರಾಜಕೀಯವನ್ನೇ ಮಾಡಿದರು. ಸರ್ವ ಧರ್ಮದವರನ್ನು ಬೆಳೆಸಿದರು. ಹೀಗಾಗಿ ಅವರ ಕುಟುಂಬಸ್ಥರು ರಾಜಕೀಯಕ್ಕೆ ಬರಬೇಕೆಂದು ಜನರ ಆಸೆ ಇದೆ. ಆ ಆಸೆಯನ್ನು ಅವರ ಸುಪುತ್ರ ಪ್ರದೀಪ್ ಕಣಗಲಿ ಈಡೇರಿಸಬೇಕು ಎಂದು ಸಲಹೆ ನೀಡಿದರು.ಪ್ರದೀಪ್ ಕಣಗಲಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಸಕ ಆಸೀಫ್‌ (ರಾಜು) ಸೇಠ್‌ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಮೇಯರ್‌ ಮಂಗೇಶ್ ಪವಾರ್, ಉಪಮೇಯರ್‌ ವಾಣಿ ಜೋಷಿ, ಮಾಜಿ ಶಾಸಕ ಫಿರೋಜ್ ಸೇಠ್, ಮಾಜಿ ಮಹಾಪೌರ ಸವೀತಾ ಕಾಂಬಳೆ, ನಗರಸೇವಕ ಸಂದೀಪ್ ಜೀರಗ್ಯಾಳ, ಡಿ.ಎಸ್‌ ನಾಯಕ, ಚಂದ್ರಮ್ಮ ಕಣಗಲಿ ಸೇರಿದಂತೆ ವಿವಿಧ ಗಣ್ಯರು ಹಾಗೂ ಬಿ.ಶಂಕರಾನಂದ ಅವರ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಾವೇರಿ 33 ಹಳ್ಳಿಗಳಲ್ಲಿ ಪ್ರತಿ ದಿನ ಸಂಜೆ 7- 9 ಗಂಟೆವರೆಗೆ ಮೊಬೈಲ್‌, ಟಿವಿ ಬಂದ್‌
ಗೃಹಲಕ್ಷ್ಮೀಯರಿಗೆ ಗುಡ್ ನ್ಯೂಸ್ ಕೊಟ್ರು ಸಚಿವೆ ಲಕ್ಷ್ಮೀ