ಹಸಿರು ಕ್ರಾಂತಿಗೆ ಮುನ್ನುಡಿ ಬರೆದ ಬಾಬು ಜಗಜೀವನ್‍ರಾಮ್‍

KannadaprabhaNewsNetwork | Published : Apr 6, 2025 1:45 AM

ಸಾರಾಂಶ

ಚಿತ್ರದುರ್ಗದ ತರಾಸು ರಂಗಮಂದಿರದಲ್ಲಿ ಶನಿವಾರ ನಡೆದ ಬಾಬು ಜಗಜೀವನರಾಂ ಜಯಂತಿ ಆಚರಣೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಭಾವ ಚಿತ್ರಕ್ಕೆಪುಷ್ಪ ನಮನ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

1967 ರಿಂದ 1970 ರವರೆಗೆ ಇಂದಿರಾಗಾಂಧಿ ಸರ್ಕಾರದಲ್ಲಿ ಕೇಂದ್ರ ಆಹಾರ ಮತ್ತು ಕೃಷಿ ಸಚಿವರಾಗಿ ಗಣನೀಯ ಸೇವೆ ಸಲ್ಲಿಸುವ ಮೂಲಕ ಭಾರತದ ಕೃಷಿ ಕ್ಷೇತ್ರದಲ್ಲಿ ಗಮನಾರ್ಹ ಬದಲಾವಣೆ ತಂದ ಬಾಬು ಜಗಜೀವನರಾಂ ಹಸಿರುಕ್ರಾಂತಿ ಹರಿಕಾರರಾಗಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಹೇಳಿದರು.

ನಗರದ ತರಾಸು ರಂಗಮಂದಿರದಲ್ಲಿ ಶನಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ ಹಾಗೂ ನಗರಸಭೆ ವತಿಯಿಂದ ಹಮ್ಮಿಕೊಂಡಿದ್ದ ಭಾರತದ ಮಾಜಿ ಉಪ ಪ್ರಧಾನಿ ಡಾ.ಬಾಬು ಜಗಜೀವನ್‍ರಾಮ್‍ರವರ 118ನೇ ಜನ್ಮ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಬಾಬೂಜಿ ಅವರು ಕೇವಲ ರಾಜಕಾರಣಿ ಅಲ್ಲ, ಒಂದು ಚಳುವಳಿಯೇ ಆಗಿದ್ದರು. ತಮ್ಮ ಜೀವನದ ಎಲ್ಲಾ ಹಂತಗಳಲ್ಲಿ ದಲಿತ, ಹಿಂದುಳಿದ ವರ್ಗ, ಶೋಷಿತ ಸಮುದಾಯಗಳಿಗೆ ಧ್ವನಿ ನೀಡಿದ ಧೀಮಂತ ನಾಯಕ ಎಂದು ಬಣ್ಣಿಸಿದರು.

ಬಾಬೂಜಿ ಅವರು 1908ರ ಏ.5 ರಂದು ಬಿಹಾರದ ಸಣ್ಣ ಗ್ರಾಮವಾದ ಚಾಂದ್ವದ, ಭೋಜಪುರ ಜಿಲ್ಲೆಯ ಒಂದು ಹಿಂದುಳಿದ ಕುಟುಂಬದಲ್ಲಿ ಜನಿಸಿದರು. ಬಾಲ್ಯದಿಂದಲೇ ಜಾತಿ ಮೂಲದ ಭೇದಭಾವದ ನೋವು ಅನುಭವಿಸಿದ ಅವರು, ಅದರ ವಿರುದ್ಧ ಧೈರ್ಯವಾಗಿ ಪ್ರತಿರೋಧ ವ್ಯಕ್ತಪಡಿಸುತ್ತಾ ಶಿಕ್ಷಣ, ಸಾಮಾಜಿಕ ಚಟುವಟಿಕೆ ಹಾಗೂ ರಾಜಕೀಯದ ಮೂಲಕ ತಮ್ಮನ್ನು ತಾವೇ ರೂಪಿಸಿಕೊಂಡರು. ಬಡತನ, ಹಿಂಸೆಯ ನಡುವೆಯೂ ಅವರು ಸಾಧನೆಯ ಶಿಖರ ತಲುಪಿದರು ಎಂದು ಹೇಳಿದರು.

ಜಗಜೀವನ್ ರಾಮ್ ಅವರು ಗಾಂಧೀಜಿಯಯವರ ತತ್ವ, ಆದರ್ಶಗಳಿಂದ ಪ್ರಭಾವಿತರಾಗಿ, ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸಿದರು. ನಿಷ್ಟುರ ನಾಯಕತ್ವದಿಂದ ಹಲವು ಬಾರಿ ಸಂಸತ್ತಿಗೆ ಆಯ್ಕೆಯಾದರು ಮತ್ತು ಸಚಿವರಾಗಿ ವಿವಿಧ ಖಾತೆಗಳನ್ನು ನಿಭಾಯಿಸಿದರು. ಡಾ.ಬಾಬು ಜಗಜೀವನರಾಂ ಅವರು ದಲಿತರ ಸಾಮಾಜಿಕ ಸಮಾನತೆ ಮತ್ತು ಸಮಾನ ಹಕ್ಕುಗಳಿಗಾಗಿ ಹೋರಾಡಿದರು. ಅಲ್ಲದೇ 1979ರಲ್ಲಿ ಭಾರತದ ಪ್ರಥಮ ದಲಿತ ಉಪಪ್ರಧಾನ ಮಂತ್ರಿಗಳಾಗಿ ಕಾರ್ಯ ನಿರ್ವಹಿಸುವ ಮೂಲಕ ಸಮಾಜದಲ್ಲಿ ಸಮಾನತೆ, ಸಹಬಾಳ್ವೆ ಮತ್ತು ಮಾನವೀಯ ಮೌಲ್ಯಗಳ ಪ್ರತಿನಿಧಿಯಾಗಿದ್ದರು. ಅಲ್ಲದೇ ಅತ್ಯಂತ ನೀತಿವಂತ, ಶ್ರಮಜೀವಿ, ಹಾಗೂ ಪ್ರಜಾಪ್ರಭುತ್ವದ ಸತ್ಯವಾದ ಆರಾಧಕರಾಗಿದ್ದರು ಎಂದು ಹೇಳಿದರು.

ಸಂಸದ ಗೋವಿಂದ ಎಂ.ಕಾರಜೋಳ ಮಾತನಾಡಿ, ಡಾ.ಬಾಬು ಜಗಜೀವನ್ ರಾಮ್ ದೇಶಕಂಡ ಅಪ್ರತಿಮ ನಾಯಕ. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಜನಾಂಗದ ಅಭಿವೃದ್ಧಿಗಾಗಿ ಶ್ರಮಿಸಿದರು. ಪರಿಶಿಷ್ಟ ಜಾತಿಯಲ್ಲಿಯೇ ಅತ್ಯಂತ ಹಿಂದುಳಿದವರಿಗಾಗಿ ಒಳ ಮೀಸಲಾತಿ ಕಲ್ಪಿಸುವಂತೆ ದೇಶದ ಹಲವು ರಾಜ್ಯಗಳಲ್ಲಿ ಹೋರಾಟ ನಡೆಸಲಾಗುತ್ತಿದೆ.

2024 ಆ.1 ರಂದು ಸರ್ವೋಚ್ಛ ನ್ಯಾಯಾಲಯ ಈಗ ನೀಡಿರುವ ಮೀಸಲಾತಿಯಲ್ಲಿಯೇ ಒಳಮೀಸಲಾತಿ ಹಂಚಿಕೆ ಮಾಡಬಹುದು ಎಂದು ತೀರ್ಪು ನೀಡಿದೆ. ಕೇಂದ್ರ ಸರ್ಕಾರ ಸಹ ಒಳ ಮೀಸಲಾತಿ ನೀಡಲು ಯಾವುದೇ ಅಡ್ಡಿಯಿಲ್ಲ ಎಂದು ತಿಳಿಸಿದೆ. ರಾಜ್ಯ ಸರ್ಕಾರದ ಮೇಲೆ ಒತ್ತಡ ತಂದು ಕೂಡಲೇ ಒಳ ಮೀಸಲಾತಿ ಜಾರಿಗೆ ಪ್ರಯತ್ನಿಸಬೇಕಿದೆ. ಈ ಮೂಲಕ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಅಭಿವೃದ್ಧಿ ಬಗ್ಗೆ ಡಾ.ಬಾಬು ಜಗಜೀವನ್ ರಾಮ್ ಕಂಡಿದ್ದ ಕನಸನ್ನು ಸಾಕಾರ ಮಾಡಬೇಕಿದೆ ಎಂದು ಹೇಳಿದರು.

ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಕೆ.ತಾಜ್‍ಪೀರ್ ಮಾತನಾಡಿ, ಜಗಜೀವನ್‍ರಾಮ್ ದೇಶ ಕಂಡ ಅಪ್ರತಿಮ ರಾಜಕಾರಣಿ. ದೇಶದಲ್ಲಿ ಸಮರ್ಪಕವಾಗಿ ಎಲ್ಲರಿಗೂ ಆಹಾರ ದೊರೆಯದೇ ಇದ್ದಾಗ ಕೃಷಿ ಸಚಿವರಾಗಿ ಕೃಷಿಯಲ್ಲಿ ಗಣನೀಯ ಬದಲಾವಣೆ ತಂದು, ಹಸಿರು ಕ್ರಾಂತಿ ಮೂಲಕ ರೈತರನ್ನು ಆರ್ಥಿಕವಾಗಿ ಸ್ವಾವಲಂಬಿಯಾಗಿಸಿದರು. ಆಹಾರ ಉತ್ಪಾದನೆ ಹೆಚ್ಚಿಸಿದರು ಎಂದು ತಿಳಿಸಿದ ಅವರು, ಬಾಬೂಜಿ ಅವರನ್ನು ಒಂದು ಜಾತಿಗೆ ಸೀಮಿತಗೊಳಿಸಬೇಡಿ. ಅವರು ಇಡೀ ಪ್ರಪಂಚಕ್ಕೆ ಮಾದರಿ ಎಂದರು.

ನಿವೃತ್ತ ಉಪನ್ಯಾಸಕ ಡಾ.ವಿ.ಬಸವರಾಜ್ ಉಪನ್ಯಾಸ ನೀಡಿದರು. ಜಿಲ್ಲಾ ಗ್ಯಾರಂಟಿ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಆರ್.ಶಿವಣ್ಣ, ಉಪಾಧ್ಯಕ್ಷ ಡಿ.ಎನ್.ಮೈಲಾರಪ್ಪ, ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಜೆ.ಸೋಮಶೇಖರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು, ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಉಪವಿಭಾಗಾಧಿಕಾರಿ ಮೆಹಬೂಬ್ ಜಿಲಾನ್ ಖುರೇಷಿ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಜಗದೀಶ್ ಹೆಬ್ಬಳ್ಳಿ, ಪೌರಾಯುಕ್ತೆ ರೇಣುಕಾ, ದಲಿತ ಮುಖಂಡರಾದ ಎಸ್.ಜಯಣ್ಣ, ಬಿ.ರಾಜಪ್ಪ, ನಿರಂಜನಮೂರ್ತಿ ಸೇರಿದಂತೆ ಜಿಲ್ಲಾ ಮತ್ತು ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು, ವಿದ್ಯಾರ್ಥಿಗಳು, ಸಾರ್ವಜನಿಕರು ಇದ್ದರು.

ಅದ್ಧೂರಿ ಮೆರವಣಿಗೆ:

ಡಾ.ಬಾಬು ಜಗಜೀವನ್‍ರಾಮ್ ಅವರ ಭಾವಚಿತ್ರ ಮೆರವಣಿಗೆ ವಿವಿಧ ಜಾನಪದ ಕಲಾತಂಡಗಳ ಸಮ್ಮುಖದಲ್ಲಿ ಚಿತ್ರದುರ್ಗದ ಪ್ರಮುಖ ಬೀದಿಯಲ್ಲಿ ಅದ್ಧೂರಿ ಮೆರವಣಿಗೆ ನಡೆಯಿತು. ನಗರದ ಹೊಳಲ್ಕೆರೆ ರಸ್ತೆಯ ನೀಲಕಂಠೇಶ್ವರ ದೇಗುಲದ ಮುಂಭಾಗದಲ್ಲಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅವರು ಮೆರವಣಿಗೆಗೆ ಚಾಲನೆ ನೀಡಿದರು. ನೀಲಕಂಠೇಶ್ವರ ದೇಗುಲದಿಂದ ಆರಂಭವಾದ ಮೆರವಣಿಗೆಯು ಗಾಂಧಿವೃತ್ತ, ಎಸ್‍ಬಿಐ ವೃತ್ತ, ಪ್ರವಾಸಿ ಮಂದಿರ ಮಾರ್ಗವಾಗಿ ಅಂಬೇಡ್ಕರ್ ವೃತ್ತ, ಮದಕರಿ ನಾಯಕ ವೃತ್ತದಿಂದ ವೇದಿಕೆ ಕಾರ್ಯಕ್ರಮ ನಡೆಯುವ ನಗರದ ತರಾಸು ರಂಗಮಂದಿರದವರೆಗೆ ನಡೆಯಿತು.

Share this article