ಹರಪನಹಳ್ಳಿ: ಇಂದಿರಾಗಾಂಧಿ ಕಾಲದಿಂದಲೂ ಬಂಜಾರ ಸಮುದಾಯ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸುತ್ತಾ ಬಂದಿದೆ. ಈಗಲೂ ಕಾಂಗ್ರೆಸ್ಗೆ ಬೆನ್ನೆಲುಬಾಗಿ ನಿಂತಿದೆ ಎಂದು ಮಾಜಿ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ ಹೇಳಿದರು.
ಪಟ್ಟಣದ ಆಚಾರ್ಯ ಲೇಔಟ್ನಲ್ಲಿನ ತಮ್ಮ ನಿವಾಸದ ಬಳಿ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ತಾಲೂಕಿನ ಬಂಜಾರ ಸಮುದಾಯದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ನಮ್ಮ ಸಮುದಾಯದ ರಕ್ಷಣೆಗೆ ನಿಂತಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ 30 ರಿಂದ 35 ಶಾಸಕರ ಗೆಲುವಿಗೆ ಬಂಜಾರ ಸಮುದಾಯದ ಮತಗಳು ನಿರ್ಣಯಾಕ ಎಂದು ಹೇಳಿದರು.ನಾನು ಬಂಜಾರ ಸಮುದಾಯದಿಂದ ಶಾಸಕನಾಗಿ, ಸಚಿವನಾಗಿ ಸಮುದಾಯದ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ಹರಪನಹಳ್ಳಿ ಕ್ಷೇತ್ರದ 52 ತಾಂಡಗಳಿಂದಲೂ ನನಗೆ ಆರ್ಶೀವದಿಸಿದ್ದರಿಂದ ರಾಜ್ಯದಲ್ಲಿ ಹೆಸರು ಮಾಡಲು ಸಾಧ್ಯವಾಗಿದ್ದು, ಇದೀಗ ಸರ್ಕಾರದಲ್ಲಿ ನಮ್ಮ ಸಮುದಾಯಕ್ಕೆ ಯಾವುದೇ ಸೂಕ್ತ ಸ್ಥಾನಮಾನ ಸಿಗದ ಹಿನ್ನೆಲೆಯಲ್ಲಿ ಸಿಎಂ, ಡಿಸಿಎಂ ಬಳಿ ಧ್ವನಿ ಎತ್ತಿದ್ದು, ಮುಂದಿನ ದಿನಗಳಲ್ಲಿ ಸಮಾಜಕ್ಕೆ ಉತ್ತಮ ಸ್ಥಾನಮಾನ ಸಿಗುವ ಭರವಸೆ ಇದೆ ಎಂದರು.
ಕಳೆದ ವಿಧಾನಸಭಾ ಚುನಾವಣೆಯ ಪರಾಜಿತ ಅಭ್ಯರ್ಥಿ ಎನ್.ಕೊಟ್ರೇಶ್ ಮಾತನಾಡಿ, ರಾಮನ ಹೆಸರಿನಲ್ಲಿ ಮತ ಕೇಳುವ ಬಿಜೆಪಿ ಸುಳ್ಳು ಹೇಳಿ ಕಾಲಹರಣ ಮಾಡುತ್ತಿದೆ. ಕಾಂಗ್ರೆಸ್ ಪಕ್ಷದಿಂದ 10 ತಿಂಗಳಲ್ಲಿ 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿ ನುಡಿದಂತೆ ನಡೆದಿದ್ದು, ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಉತ್ತಮ ಯೋಜನೆಗಳನ್ನು ಜಾರಿಗೊಳಿಸಲಿದೆ ಎಂದು ಹೇಳಿದರು.
ಕಾಂಗ್ರೆಸ್ ಮುಖಂಡ ಶಶಿಧರ್ ಪೂಜಾರ ಮಾತನಾಡಿ, ತಾಲೂಕಿನ ಹಿಂದುಳಿದ ಸಮುದಾಯವನ್ನು ಅಭಿವೃದ್ಧಿಪಡಿಸಿದವರು ಯಾರಾದರು ಇದ್ದರೆ ಅದು ಪರಮೇಶ್ವರನಾಯ್ಕ ಎಂದರು.ಪುರಸಭೆ ಮಾಜಿ ಅಧ್ಯಕ್ಷ ಎಚ್.ಕೆ. ಹಾಲೇಶ್ ಮಾತನಾಡಿದರು.
ದಾವಣಗೆರೆ ಲೋಕಸಭಾ ಅಭ್ಯರ್ಥಿ ಪ್ರಭಾ ಮಲ್ಲಿಕಾರ್ಜುನ ಅವರ ಪುತ್ರ ಸಮರ್ಥ, ಹಿರಿಯ ಕಾಂಗ್ರೆಸ್ ಮುಖಂಡರಾದ ಚಂದ್ರಶೇಖರ ಭಟ್, ಎಚ್.ಬಿ. ಪರಶುರಾಮಪ್ಪ, ಪ್ರಕಾಶ್ ಪಾಟೀಲ್, ಪಿ.ಎಲ್. ಪೋಮ್ಯನಾಯ್ಕ, ಪಿಟಿ ಭರತ್ ಮಾತನಾಡಿದರು.ಪುರಸಭೆ ಸದಸ್ಯ ಜಾಕೀರ್ ಸರ್ಖಾವಸ್, ಮುಖಂಡರಾದ ಇಜಾರಿ ಮಹಾವೀರ, ಹಾಲೇಶಗೌಡ, ತಿಮ್ಮನಾಯ್ಕ, ಮಹಾಂತೇಶ್ ನಾಯ್ಕ, ವೇದು ನಾಯ್ಕ, ಎಲ್.ಬಿ. ಹಾಲೇಶ ನಾಯ್ಕ, ನೂರುದ್ದಿನ್, ಕಾನಹಳ್ಳಿ ರುದ್ರಪ್ಪ, ನೇಮ್ಯನಾಯ್ಕ, ತಾರ್ಯನಾಯ್ಕ, ರೇಣುಕಾಬಾಯಿ, ಶೆಟ್ಟಿ ನಾಯ್ಕ, ರಾಮ ನಾಯ್ಕ, ಪ್ರಸಾದ ನಾಯ್ಕ, ಉಮೇಶ ನಾಯ್ಕ, ರವಿ ನಾಯ್ಕ, ಡಾಕ್ಯ ನಾಯ್ಕ ಇದ್ದರು.