ಮಂಗಳೂರು: ಕಾರ್ಕಳದಲ್ಲಿ ಅತ್ಯುನ್ನತ ಶಿಲಾ ಬೆಟ್ಟದಲ್ಲಿ ಶೋಭಿಸುತ್ತಿರುವ ಭಗವಾನ್ ಶ್ರೀ ಬಾಹುಬಲಿ ಸ್ವಾಮಿಯ ಬೃಹತ್ ಏಕಶಿಲಾ ಮೂರ್ತಿಗೆ 2027ರಲ್ಲಿ ಮಹಾಮಸ್ತಾಕಾಭಿಷೇಕ ಮಹೋತ್ಸವ ನೆರವೇರುವ ಸಂದರ್ಭದಲ್ಲಿ ಕಾರ್ಕಳದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳು ನಡೆಯಬೇಕಾಗಿವೆ. ಈ ನಿಟ್ಟಿನಲ್ಲಿ ಕಾರ್ಕಳ ನಗರಕ್ಕೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ವಿಶೇಷ ಅನುದಾನವನ್ನು ಕರ್ನಾಟಕ ಸರ್ಕಾರದ ವತಿಯಿಂದ ಬಿಡುಗಡೆಗೊಳಿಸುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕಾರ್ಕಳ ಭಗವಾನ್ ಶ್ರಿ ಬಾಹುಬಲಿ ಸ್ವಾಮಿ ಮಹಾಮಸ್ತಾಕಾಭಿಷೇಕ ಸಮಿತಿಯ ಕಾರ್ಯಾಧ್ಯಕ್ಷ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಅವರು ಬೆಂಗಳೂರಿನಲ್ಲಿ ಬುಧವಾರ ಮನವಿ ಸಲ್ಲಿಸಿದರು.
2015ರ ಮಹಾಮಸ್ತಾಕಾಭಿಷೇಕದ ಸಂದರ್ಭ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿದ್ದು ಈ ಧಾರ್ಮಿಕ ಮಹೋತ್ಸವಕ್ಕೆ ಹೆಚ್ಚಿನ ಅನುದಾನ ನೀಡಿರುವುದನ್ನು ಡಾ.ಎಂ.ಎನ್. ರಾಜೇಂದ್ರ ಕುಮಾರ್ ಈ ಸಂದರ್ಭ ನೆನಪಿಸಿ, 2027ರ ಮಹಾಮಸ್ತಕಾಭಿಷೇಕದಲ್ಲೂ ಮುಖ್ಯಮಂತ್ರಿ ಅವರ ಉಪಸ್ಥಿತಿ ಇರಬೇಕೆಂದು ಮನವಿ ಮಾಡಿಕೊಂಡರು.
ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಫರೀದ್, ಉಪ ಸಭಾಧ್ಯಕ್ಷ ರುದ್ರಪ್ಪ ಎಂ. ಲಮಾಣಿ , ಆರೋಗ್ಯ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಮಹಾಮಸ್ತಾಕಾಭಿಷೇಕ ಸಮಿತಿಯ ಪುಷ್ಪರಾಜ್ ಜೈನ್, ಮೇಘರಾಜ್ ಆರ್. ಜೈನ್, ಸುನಿಲ್ ಕುಮಾರ್ ಬಜಗೋಳಿ, ವೃಷಭ ದೇವ ಅಧಿಕಾರಿ ಇದ್ದರು.