ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ತಾಲೂಕಿನ ಶ್ರೀಕ್ಷೇತ್ರ ಶ್ರವಣಬೆಳಗೊಳದ ದಿಗಂಬರ ಜೈನ ಮಹಾಸಂಸ್ಥಾನದಿಂದ ಗೊಮ್ಮಟ ನಗರದ ಬಾಹುಬಲಿ ತಾಂತ್ರಿಕ ಮಹಾವಿದ್ಯಾಲಯದ ಆವರಣದಲ್ಲಿ ಭಾನುವಾರ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ 20ನೇ ಶತಮಾನದ ಪ್ರಥಮಾಚಾರ್ಯ ಚಾರಿತ್ರ್ಯ ಚಕ್ರವರ್ತಿ ಪ.ಪೂ ಆಚಾರ್ಯ ಶ್ರೀ 108 ಶಾಂತಿಸಾಗರ ಮಹಾರಾಜರ ಪ್ರತಿಮೆ ಅನಾವರಣ ಮಾಡಿ ಮಾತನಾಡಿದ ಅವರು, ವಿಶ್ವದೆಲ್ಲೆಡೆ ಸಂಘರ್ಷದ ಸನ್ನಿವೇಶಗಳು ಉಂಟಾಗಿದ್ದು ಮನುಕುಲವೇ ಅಪಾಯಕ್ಕೆ ಸಿಲುಕಿದೆ. ಇಂತಹ ಸನ್ನಿವೇಶದಲ್ಲಿ ವಿಶ್ವ ಶಾಂತಿ ಸ್ಥಾಪಿಸಲು ಜೈನ ಮುನಿಗಳ ಮಾರ್ಗದರ್ಶನ ಅಗತ್ಯವಾಗಿದೆ ಎಂದರು.
ಶ್ರವಣಬೆಳಗೊಳ ಹಾಗೂ ಇಡೀ ಕರ್ನಾಟಕ ಅತ್ಯಂತ ಪವಿತ್ರ ಕ್ಷೇತ್ರವಾಗಿದ್ದು, ದೇಶದ ಕಲೆ, ಸಂಸ್ಕೃತಿಯನ್ನು ಸಂರಕ್ಷಿಸಿ ಬೆಳೆಸುವಲ್ಲಿ ಕನ್ನಡಿಗರ ಪಾತ್ರ ಅತ್ಯಂತ ಮಹತ್ವದ್ದು ಎಂದು ಬಣ್ಣಿಸಿದರು.ಸರ್ಕಾರ ಜ್ಞಾನಭಾರತಿ ಮಿಷನ್ ಅಡಿಯಲ್ಲಿ ಪ್ರಾಚೀನ ಭಾಷೆಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುತ್ತಿದೆ. ಪ್ರಾಕೃತ ಮತ್ತು ಕನ್ನಡಕ್ಕೆ ಪಾರಂಪರಿಕ ಭಾಷೆಯ ಸ್ಥಾನಮಾನ ನೀಡಲಾಗಿದ್ದು, ಸಂಶೋಧನೆ ಹಾಗೂ ಭಾಷೆಯ ಬೆಳವಣಿಗೆಗೆ ಹೆಚ್ಚಿನ ಮಹತ್ವ ನೀಡಲಾಗಿದೆ,
ಸ್ವಸ್ತಿಶ್ರೀ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿ, ದಿಗಂಬರ ಮುನಿ ಪರಂಪರೆಗೆ ಅಪಾರ ಕೊಡುಗೆ ನೀಡಿರುವ ಶಾಂತಿ ಸಾಗರ ಮಹಾರಾಜರು 1925ರಲ್ಲಿ ಶ್ರೀ ಕ್ಷೇತ್ರ ಶ್ರವಣಬೆಳಗೊಳಕ್ಕೆ ಭೇಟಿ ನೀಡಿ ಮಹಾ ಮಸ್ತಕಾಭಿಷೇಕದಲ್ಲಿ ಭಾಗವಹಿಸಿ ನೂರು ವರ್ಷಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ಅದರ ಸವಿನೆನಪಿಗಾಗಿ ಅವರ ಪ್ರತಿಮೆ ಪ್ರತಿಷ್ಠಾಪನೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಗೌರವಾನ್ವಿತ ರಾಜ್ಯಪಾಲರಾದ ಥಾವರ ಚಂದ್ ಗೆಹ್ಲೋಟ್ ಅವರು ಕಾರ್ಯಕ್ರಮದ ಉಪಸ್ಥಿತಿ ವಹಿಸಿ ಮಾತನಾಡಿ, ಭಗವಾನ್ ಮಹಾವೀರರು ನಮಗೆ ‘ಬದುಕು ಮತ್ತು ಬದುಕಲು ಬಿಡಿ’ ಎಂಬ ದೈವಿಕ ಸಂದೇಶವನ್ನು ನೀಡಿದರು. ನಾವು ಅವರ ದೈವಿಕ ಸಂದೇಶದಿಂದ ಸ್ಫೂರ್ತಿ ಪಡೆದು, ಅವರು ತೋರಿಸಿದ ಮಾರ್ಗವನ್ನು ಅನುಸರಿಸಿ ವಿಶ್ವ ಶಾಂತಿ ಮತ್ತು ಕಲ್ಯಾಣಕ್ಕಾಗಿ ಕೆಲಸ ಮಾಡಬೇಕು ಎಂದು ಹೇಳಿದರು.
ಜೈನ ಧರ್ಮವು ಪ್ರಾಚೀನ ಶ್ರವಣ ಸಂಪ್ರದಾಯದಿಂದ ಪಡೆದ ಧರ್ಮವಾಗಿದ್ದು, ಇದನ್ನು ಭಗವಾನ್ ವೃಷಭದೇವ ಮತ್ತು ನಂತರದ ತೀರ್ಥಂಕರರು ಉತ್ತೇಜಿಸಿದರು. 24ನೇ ತೀರ್ಥಂಕರರಾದ ಭಗವಾನ್ ಮಹಾವೀರರು ಇದಕ್ಕೆ ವ್ಯವಸ್ಥಿತ ರೂಪ ನೀಡಿದರು. ಭಗವಾನ್ ಮಹಾವೀರರು ಸತ್ಯ, ಅಹಿಂಸೆ, ಕಳ್ಳತನ ಮಾಡದಿರುವುದು, ಬ್ರಹ್ಮಚರ್ಯ ಮತ್ತು ಸ್ವಾಧೀನ ಮಾಡದಿರುವುದು ಮುಂತಾದ ತತ್ವಗಳ ಮೂಲಕ ಶಾಂತಿಯುತ ಸಹಬಾಳ್ವೆ ಮತ್ತು ಸಾರ್ವತ್ರಿಕ ಸಹೋದರತ್ವದ ಹಾದಿಯನ್ನು ಬೆಳಗಿಸಿದರು. ಅವರು ಅಹಿಂಸಾ ಪರಮೋ ಧರ್ಮಃ ಎಂದು ಹೇಳುತ್ತಿದ್ದರು, ಅಂದರೆ ಅಹಿಂಸೆಯೇ ಶ್ರೇಷ್ಠ ಧರ್ಮ. ದೈಹಿಕ ಹಿಂಸೆಯಲ್ಲಿ ಮಾತ್ರವಲ್ಲದೆ ನಮ್ಮ ಆಲೋಚನೆಗಳು, ಮಾತುಗಳು ಮತ್ತು ಕಾರ್ಯಗಳಲ್ಲಿಯೂ ಸಹಾನುಭೂತಿ ಇರಬೇಕು ಎಂದು ಅವರು ನಮಗೆ ಕಲಿಸಿದರು. ಇಂದಿನ ಕಾಲದಲ್ಲಿ, ಸಮಾಜದಲ್ಲಿ ಉದ್ವಿಗ್ನತೆ, ಕೋಪ ಮತ್ತು ಹಿಂಸೆ ಹೆಚ್ಚುತ್ತಿರುವಾಗ, ಭಗವಾನ್ ಮಹಾವೀರರ ಈ ಸಂದೇಶವು ನಮ್ಮನ್ನು ಶಾಂತಿ, ಸಹಬಾಳ್ವೆ ಮತ್ತು ಪ್ರೀತಿಯ ಕಡೆಗೆ ಕರೆದೊಯ್ಯುತ್ತದೆ ಎಂದು ತಿಳಿಸಿದರು. ಆಚಾರ್ಯ ಶ್ರೀ ಶಾಂತಿಸಾಗರ ಮಹಾರಾಜರು ಸಂಯಮದ ಜೀವಂತ ಸಾಕಾರವಾಗಿದ್ದರು. ಆಧ್ಯಾತ್ಮಿಕ ಜೀವನವು ಧರ್ಮಗ್ರಂಥಗಳಲ್ಲಿ ಮಾತ್ರವಲ್ಲದೆ ನಡವಳಿಕೆಯಲ್ಲೂ ಇದೆ ಎಂದು ಅವರು ಪ್ರದರ್ಶಿಸಿದರು. ಜೈನ ಧರ್ಮದ ಅದ್ಭುತ ಸಂಪ್ರದಾಯವನ್ನು ಪುನರುಜ್ಜೀವನಗೊಳಿಸಿರುವ ಅವರು ಸಂಯಮ ಮತ್ತು ಧ್ಯಾನದ ಆದರ್ಶಗಳಿಂದ ಸಮಾಜವನ್ನು ಬೆಳಗಿಸಿದ್ದಾರೆ ಎಂದು ತಿಳಿಸಿದರು.
ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕೆಗಳ ಸಚಿವರಾದ ಎಚ್.ಡಿ. ಕುಮಾರಸ್ವಾಮಿ ಅವರು ಶ್ರೀಕ್ಷೇತ್ರ ಶ್ರವಣಬೆಳಗೊಳದ ನಾಲ್ಕನೇ ಬೆಟ್ಟಕ್ಕೆ ಪದನಾಮ ಅನಾವರಣ ಮಾಡಿ ಮಾತನಾಡಿ, ಶ್ರವಣಬೆಳಗೊಳ ಭಾರತದ ಪ್ರಾಚೀನ ನಾಗರಿಕತೆಯ ಮುಕುಟಮಣಿಯಾಗಿದೆ. ಇಲ್ಲಿನ ಚಂದ್ರಗಿರಿಯಲ್ಲಿ 2000 ವರ್ಷಗಳ ಹಿಂದೆ ಮೌರ್ಯ ವಂಶದ ಸಂಸ್ಥಾಪಕ ಚಂದ್ರಗುಪ್ತ ಮೌರ್ಯ ಸಲ್ಲೇಖನ ವ್ರತದ ಮೂಲಕ ಜಿನಪಾದ ಸೇರಿದ ಇತಿಹಾಸವಿದೆ. ಇಂದು ಅನಾವರಣಗೊಂಡಿರುವ ಶಾಂತಿ ಸಾಗರ ಸ್ವಾಮೀಜಿಯ ವರ ಪ್ರತಿಮೆಯು ಮುಂದಿನ ಪೀಳಿಗೆಗೂ ಅವರು ಹಾಕಿ ಕೊಟ್ಟ ಸನ್ಮಾರ್ಗವನ್ನು ತೋರಿಸುವ ಸಂಕೇತವಾಗಿದೆ ಎಂದು ತಿಳಿಸಿದರು.
ಕಂದಾಯ ಸಚಿವರು ಮತ್ತು ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ, ಯೋಜನೆ ಮತ್ತು ಸಾಂಖ್ಯಿಕ ಖಾತೆ ಸಚಿವರಾದ ಡಿ. ಸುಧಾಕರ್, ಸಂಸದರಾದ ಶ್ರೇಯಸ್ ಪಟೇಲ್, ಶಾಸಕರಾದ ಸಿ.ಎನ್. ಬಾಲಕೃಷ್ಣ, ಬೆಳಗಾವಿ ದಕ್ಷಿಣದ ಶಾಸಕರಾದ ಅಭಯ್ ಪಾಟೀಲ ಮತ್ತಿತರರು ಭಾಗವಹಿಸಿದ್ದರು.