ಶ್ರದ್ಧಾ ಭಕ್ತಿಯಿಂದ ಬಕ್ರೀದ್‌ ಆಚರಣೆ

KannadaprabhaNewsNetwork | Published : Jun 8, 2025 2:42 AM
ವಿಶ್ವದೆಲ್ಲೆಡೆ ಸುಖ-ಶಾಂತಿ ಪರಸರಿಸಲಿ, ನಾಡಿನ ಜನರಿಗೆ ಒಳಿತಾಗಲಿ, ನಾಡಿನೆಲ್ಲೆಡೆ ಸಾಮರಸ್ಯ, ಸಹಬಾಳ್ವೆ ನೆಲಸಲಿ ಮತ್ತು ಮಳೆ ಬೆಳೆ ಚನ್ನಾಗಿ ಬರಲಿ ಎಂದು ಭಕ್ತಿಯಿಂದ ಪ್ರಾರ್ಥಿಸಿದರು

ಹುಬ್ಬಳ್ಳಿ: ತ್ಯಾಗ ಬಲಿದಾನದ ಪ್ರತೀಕ ಬಕ್ರೀದ್‌ ಹಬ್ಬದ ಅಂಗವಾಗಿ ಇಲ್ಲಿಯ ಈದ್ಗಾ ಮೈದಾನದಲ್ಲಿ ಮುಸ್ಲಿಂ ಬಂಧುಗಳು ಶ್ರದ್ಧಾ ಭಕ್ತಿಯಿಂದ ಶನಿವಾರ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

ಅಲ್ಲಾಹನ ನಾಮಸ್ಮರಣೆಯೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದ ಸಾವಿರಾರು ಜನ ಮುಸ್ಲಿಂ ಬಂಧುಗಳು, ಈದ್ಗಾ ಮೈದಾನಕ್ಕೆ ಆಗಮಿಸಿ ಶ್ರದ್ಧಾಪೂರ್ವಕವಾಗಿ ಪ್ರಾರ್ಥನೆ ಸಲ್ಲಿಸಿದರಲ್ಲದೇ, ವಿಶ್ವದೆಲ್ಲೆಡೆ ಸುಖ-ಶಾಂತಿ ಪರಸರಿಸಲಿ, ನಾಡಿನ ಜನರಿಗೆ ಒಳಿತಾಗಲಿ, ನಾಡಿನೆಲ್ಲೆಡೆ ಸಾಮರಸ್ಯ, ಸಹಬಾಳ್ವೆ ನೆಲಸಲಿ ಮತ್ತು ಮಳೆ ಬೆಳೆ ಚನ್ನಾಗಿ ಬರಲಿ ಎಂದು ಭಕ್ತಿಯಿಂದ ಪ್ರಾರ್ಥಿಸಿದರು.

ನಂತರ ಹಿರಿ, ಕಿರಿಯರು ಪರಸ್ಪರ ಹಬ್ಬದ ಶುಭಾಶಯ ವಿನಿಮಯ ಮಾಡಿದರು. ಪ್ರಾರ್ಥನೆಯಲ್ಲಿ ಭಾಗವಹಿಸಿದ್ದ ಬಂಧುಗಳಿಗೆ ಮುಸ್ಲಿಂ ಧರ್ಮಗುರು ಮೌಲಾನಾ ಜಹರುದ್ಧೀನ ಖಾಜಿ ಭಾವೈಕ್ಯ ಸಂದೇಶ ಸಾರಿದರು. ಪ್ರಾರ್ಥನೆ ಮುಕ್ತಾಯದ ನಂತರ ಪ್ರತಿ ಸಲದಂತೆ ಮುಸ್ಲಿಂ ಬಂಧುಗಳು ಇಲ್ಲಿಯ ಮೂರುಸಾವಿರ ಮಠಕ್ಕೆ ತೆರಳಿ ಶ್ರೀಮಠದ ಡಾ.ಗುರುಸಿದ್ಧರಾಜಯೋಗೀಂದ್ರ ಸ್ವಾಮಿಗ​ಳನ್ನು ಸನ್ಮಾನಿಸುವ ಮೂಲಕ ಭಾತೃತ್ವ ಸಂದೇಶ ಸಾರಿದರು. ಈ ವೇಳೆ ಡಿಸಿಪಿ ರವೀಶ ಸಿ.ಆರ್‌. ಉಪಸ್ಥಿತರರಿದ್ದರು.

ಅದರಂತೆ ಹಳೇಹುಬ್ಬಳ್ಳಿ, ನೇಕಾರನಗರ, ಬಂಕಾಪೂರ ಚೌಕ್‌, ಗೋಪನಕೊಪ್ಪ, ಅಮರಗೋಳ ಸೇರಿದಂತೆ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಬ್ರಕೀದ್‌ ಹಬ್ಬದ ಅಂಗವಾಗಿ ಮುಸ್ಲಿಂ ಬಂಧುಗಳು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

ಈ ವೇಳೆ ಮಾಜಿ ಸಚಿವ ಎ.ಎಂ. ಹಿಂಡಸಗೇರಿ, ಹು-ಧಾ ಮಹಾನಗರ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಅಲ್ತಾಫ್‌ ಹಳ್ಳೂರ, ಹುಡಾ ಅಧ್ಯಕ್ಷ ಶಾಕೀರ ಸನದಿ, ಬಸೀರಅಹ್ಮದ ಗುಡಮಾಲ್‌, ಸದಾನಂದ ಡಂಗನವರ, ಅನ್ವರ ಮುಧೋಳ, ಬಾಬಾಜಾನ್‌ ಮುಧೋಳ, ಮಜರಖಾನ್‌ ಸೇರಿದಂತೆ ಅನೇಕ ಗಣ್ಯರು ಇದ್ದರು.

ಸಾಮೂಹಿಕ ಪ್ರಾ ರ್ಥನೆ: ಹಳೇಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಮುಸ್ಲಿಂ ಬಂಧುಗಳು ಫತೇಶಾವಲಿ ದರ್ಗಾ ಮಸೀದಿಯ ಮೌಲಾನಾ ಹಜರತ್‌ ಅಬ್ದುಲ್‌ ಸುಭಾನನಯೀಮಿ ನೇತೃತ್ವದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಈ ವೇಳೆ ಅಂಜುಮನ್‌ ಇಸ್ಲಾಂ ಸಂಸ್ಥೆ ಗೌರವ ಕಾರ್ಯದರ್ಶಿ ಬಸೀರ ಹಳ್ಳೂರ, ಸಲೀಂ ಸುಂಡಕೆ, ನವೀದ ಮುಲ್ಲಾ, ರಿಯಾಜ್‌ ಖತೀಬ್‌, ಫಾರೂಕ್‌ ಅಬ್ಬುನವರ, ಬಾಬಾ ಐನಾಪೂರಿ, ಶುಕುರ್‌ ಸರಗಿಯೋ, ಶಕೀಲ್‌ಅಹ್ಮದ್‌, ಫೈಜುಲ್ಲಾ ಕಾಲೇಬುಡ್ಡೆ, ಇಮಾಮಹುಸೇನ್‌ ಮಡಕಿ, ಗೈಬುಸಾಬ್‌ ಹೊನ್ಯಾಳ, ಅಲಹಖ್‌ ಪಠಾಣ, ಅಬ್ಬು ಬಿಜಾಪುರ ಸೇರಿದಂತೆ ಇತರರು ಇದ್ದರು.