ಗಾಂಧಿ ಗ್ರಾಮದಲ್ಲಿ ಕಾಂಗ್ರೆಸ್ ಪಕ್ಷದ ಪ್ರಚಾರ ಸಭೆಯಲ್ಲಿ ಎಂ.ಶ್ರೀನಿವಾಸ್
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಸಿದ್ದರಾಮಯ್ಯ ಸರ್ಕಾರ ತಂದ 5 ಗ್ಯಾರಂಟಿಯಿಂದ ಸರ್ಕಾರ ದಿವಾಳಿಯಾಗುತ್ತದೆ ಎಂದು ಬಿಜೆಪಿ ಪಕ್ಷದವರು ಅಪಪ್ರಚಾರ ಮಾಡಿದರು. ಆದರೆ, ಆರ್ಥಿಕ ತಜ್ಞರಾದ ಸಿದ್ದರಾಮಯ್ಯ ಸರ್ಕಾರವನ್ನು ಸಮತೋಲನದಿಂದ ಮುನ್ನಡೆಸುತ್ತಿದ್ದಾರೆ ಎಂದು ರಾಜ್ಯ ಪ್ರವಾಸೋದ್ಯಮ ನಿಗಮದ ಅಧ್ಯಕ್ಷ ಎಂ.ಶ್ರೀನಿವಾಸ್ ತಿಳಿಸಿದರು.
ಶುಕ್ರವಾರ ಸಂಜೆ ತಾಲೂಕಿನ ಕಡಹಿನಬೈಲು ಗ್ರಾಮ ಪಂಚಾಯಿತಿ ಗಾಂಧಿ ಗ್ರಾಮದಲ್ಲಿ ನಡೆದ ಕಾಂಗ್ರೆಸ್ ಕಾರ್ಯ ಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿ, ಬಿಜೆಪಿಯವರು ರಾಮಮಂದಿರ ನಿರ್ಮಾಣ ಮಾಡಿದ್ದು ರಾಜಕೀಯಕ್ಕೇ ಹೊರತು, ಶ್ರದ್ಧಾಭಕ್ತಿಗಲ್ಲ. ಅಪೂರ್ಣಗೊಂಡ ದೇಗುಲವನ್ನು ತುರ್ತಾಗಿ ಉದ್ಘಾಟಿಸಲು ಮುಂದಾದರು. ಮೋದಿ, ಅಮಿತ್ ಶಾ ಹೇಳಿದ ಮಾತನ್ನು ಯಾರೂ ಅಲ್ಲಗಳೆಯುವಂತಿಲ್ಲ. ವಿರೊಧಿಸುವಂತೂ ಇಲ್ಲ. ವಿರೋಧಿಸಿದರೆ ಅವರನ್ನು ಬಿಜೆಪಿ ಯಿಂದ ಹೊರ ಹಾಕಲಾಗುವುದು. ಈ ದೇಶದ ಬಡವರು, ರೈತರು, ದಲಿತರು, ಅಲ್ಪಸಂಖ್ಯಾತರಿಗೆ ಮೋದಿಯವರ ಕೊಡುಗೆ ಏನು ಎಂಬುದನ್ನು ಬಿಜೆಪಿಯವರೇ ಉತ್ತರಿಸಬೇಕು. ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಅವರು ಪ್ರಾಮಾಣಿಕತೆಗೆ ಇನ್ನೊಂದು ಹೆಸರಾಗಿದ್ದಾರೆ. ದಕ್ಷ ಆಡಳಿತ ನೀಡುವ ಅವರನ್ನು ಗೆಲ್ಲಿಸಬೇಕು ಎಂದು ಕರೆ ನೀಡಿದರು.ಕೆಪಿಸಿಸಿ ಸದಸ್ಯ ಪಿ.ಆರ್.ಸದಾಶಿವ ಮಾತನಾಡಿ, ಶೋಬಾ ಕರಂದ್ಲಾಜೆ ಅವರು ಈ ಬಾರಿ ಲೋಕಸಭಾ ಚುನಾವಣೆ ಎದುರಿಸಲು ಧೈರ್ಯವಿಲ್ಲದೆ ಕ್ಷೇತ್ರದಿಂದಲೇ ಫಲಾಯನಗೊಂಡಿದ್ದಾರೆ. ಇದಕ್ಕೆ ಬಿಜೆಪಿ ಮುಖಂಡರೇ ಕಾರಣ. ಈ ಕ್ಷೇತ್ರ ದಲ್ಲಿ ಸಮಸ್ಯೆಯಾಗಿರುವ ಕಸ್ತೂರಿ ರಂಗನ್ ವರದಿ, ಹುಲಿಯೋಜನೆ, ಒತ್ತುವರಿ ಸಮಸ್ಯೆ ಬಗ್ಗೆ ನಿಮ್ಮೆಲ್ಲರ ಪರವಾಗಿ ಸಂಸತ್ನಲ್ಲಿ ಧ್ವನಿ ಎತ್ತಬೇಕಾದರೆ ಲೋಕಸಭಾ ಚುನಾವಣೆಯಲ್ಲಿ ಜಯಪ್ರಕಾಶ್ ಹೆಗ್ಡೆ ಅವರನ್ನು ಸಂಸದರನ್ನಾಗಿ ಆಯ್ಕೆ ಮಾಡಬೇಕು ಎಂದು ಮನವಿ ಮಾಡಿದರು.ಪಪಂ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತ್. ಎಲ್.ಶೆಟ್ಟಿ ಮಾತನಾಡಿ, ಎಂ.ಶ್ರೀನಿವಾಸ್ ಅವರ ರೈತರ ಪರ ಕಾಳಜಿ ಯಿಂದಾಗಿ ಈ ಭಾಗದಲ್ಲಿ ಕಡಹಿನಬೈಲು ಏತ ನೀರಾವರಿ ಯೋಜನೆ ಸಾಕಾರಗೊಂಡಿದ್ದು ಇದರಿಂದ 60 ಕೆರೆಗಳು ಬೇಸಿಗೆಯಲ್ಲೂ ತುಂಬಿರುತ್ತವೆ ಎಂದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಡಹಿನಬೈಲು ಗ್ರಾಪಂ ಘಟಕದ ಕಾಂಗ್ರೆಸ್ ಅಧ್ಯಕ್ಷ ಭೀಮನರಿ ಪ್ರಶಾಂತ್ ವಹಿಸಿದ್ದರು.ಈ ಸಂದರ್ಭದಲ್ಲಿ ತಾಲೂಕು ಪ್ರಚಾರ ಸಮಿತಿ ಅಧ್ಯಕ್ಷ ಎಲ್ದೋಸ್, ಎಪಿಎಂಸಿ ಉಪಾಧ್ಯಕ್ಷ ಎಸ್.ಡಿ.ರಾಜೇಂದ್ರ, ಕಡಹಿನ ಬೈಲು ಗ್ರಾಪಂ ಕಾಂಗ್ರೆಸ್ ಉಸ್ತುವಾರಿ ಮಾಳೂರು ದಿಣ್ಣೆರಮೇಶ್, ಎಂ.ಮಹೇಶ್, ಗಾಂಧಿಗ್ರಾಮ ನಾಗರಾಜು, ರವಿಂದ್ರ, ಆಲಂದೂರು ಕೆಂಪಣ್ಣ, ಚೇತನ, ನಂದೀಶ, ಸುಲೇಮಾನ್, ಜೇಮ್ಸ್, ಅಬ್ದುಲ್ರೆಹಮಾನ್, ಎ.ಬಿ.ರಾಮಚಂದ್ರ, ಜನಾರ್ಧನ, ಡಿ.ಜಿ.ಜಗದೀಶ್ ಮತ್ತಿತರರು ಉಪಸ್ಥಿತರಿದ್ದರು.