ಕನ್ನಡಪ್ರಭ ವಾರ್ತೆ ಮಡಿಕೇರಿ
ಬಿಟ್ಟಂಗಾಲ ಗ್ರಾಮದ ನಾಯಡ ಕುಟುಂಬದ ಬತ್ತದ ಗದ್ದೆಯಲ್ಲಿ ಮುರುವಂಡ ಮಿಥುನ್ ಅಣ್ಣಯ್ಯ, ಪೊನ್ನಕಚ್ಚಿರ ಪುನೀತ್ ಅವರ ಮೇಲುಸ್ತುವಾರಿಯ ಗದ್ದೆಯಲ್ಲಿ ನಡೆದ ಕ್ರೀಡಾಕೂಟದಲ್ಲಿ ನೂರಾರು ಕಿರಿಯರು, ಹಿರಿಯರು ಭಾಗವಹಿಸಿ, ನೂರಾರು ಪ್ರೇಕ್ಷಕರ ಪ್ರೋತ್ಸಾಹ-ಬೆಂಬಲದೊಂದಿಗೆ ಕೆಸರು ಗದ್ದೆಯಲ್ಲಿ ಮಿಂದು, ಎದ್ದು, ಬಿದ್ದು ಕ್ರೀಡಾ ಉತ್ಸಹ ಪ್ರದರ್ಶಿಸಿದರು.
ಕ್ರೀಡಾ ಕೂಟದಲ್ಲಿ 6 ವರ್ಷದ ಮಕ್ಕಳಿಂದ ಹಿಡಿದು ಹಿರಿಯ ನಾಗರಿಕರು ನಾಟಿ ಗದ್ದೆಯಲ್ಲಿ ಭಾಗವಹಿಸಿ ಸಂತಸ ಪಟ್ಟರು.ಕಾರ್ಯಕ್ರಮದ ಆರಂಭದಲ್ಲಿ ಸಾಂಪ್ರದಾಯಿಕವಾಗಿ ಗೆಜ್ಜೆತಂಡ್ ಎದುರು ಪುಡಿಯೊಕ್ಕಡ ಹರೀಶ್ ಅವರ ಮೂಲಕ ‘ತಪ್ಪಡ್ಕ’ಕಟ್ಟಿ ಕಾರ್ಯಕ್ರಮದ ಯಶಸ್ವಿಗೆ, ಕೊಡಗಿನ ಪ್ರಕೃತಿ, ಜೀವ ಜಲ, ಪರಂಪರೆಯ ಗತವೈಭವ ಮರುಕಳಿಸಿ ಅದರ ಸಂರಕ್ಷಣೆ ಪ್ರಾರ್ಥಿಸಲಾಯಿತು.
ಗದ್ದೆಯಲ್ಲಿ ನಾಟಿ ಮಾಡುವ ಮೂಲಕ ನಾಯಡ ಶ್ಯಾಮ್ ಸೋಮಣ್ಣ ಅವರೊಂದಿಗೆ ಜಬ್ಬೂಮಿ ಸಂಘಟನೆ ಮತ್ತು ರೂಟ್ಸ್ ಆಫ್ ಕೊಡಗು ಪ್ರಮುಖರು ಚಾಲನೆ ನೀಡಿದರು.
ಉಳುವಂಗಡ ಲೋಹಿತ್ ಭೀಮಯ್ಯ ಅವರು ಜಬ್ಬೂಮಿ ಗೀತೆ ಹಾಡಿದರು. ಕಾರ್ಯಕ್ರಮದಲ್ಲಿ ಮಹಿಳೆಯರು, ಪುರುಷರಿಗೆ, ಶಾಲಾ ಮಕ್ಕಳಿಗೆ ಹಗ್ಗ ಜಗ್ಗಾಟ, ಕೆಸರು ಗದ್ದೆ ಓಟ, ಕೆಸರು ಗದ್ದೆ ನಡಿಗೆ, ಕೈಪುಳಿ ಹಾಗೂ ಕೈಕಣೆ ನಡಿಗೆ ಗಮನ ಸೆಳೆಯಿತು.
ಪೆರುವನಾಡ್ ಗೆ ಸಂಬಂಧಪಟ್ಟ ಸತತವಾಗಿ ಬತ್ತದ ಕೃಷಿ ಮಾಡುತ್ತಿರುವ ಬುಟ್ಟಿಯಂಡ ಪಟ್ಟು ಅಯ್ಯಪ್ಪ, ಬುಟ್ಟಿಯಂಡ ಚಿಮ್ಮಿ ಪೂಣಚ್ಚ, ಪುಚ್ಚಿಮಂಡ ಈಶ್ವರ ಮುತ್ತಪ್ಪ, ಬೊಪ್ಪಂಡ ರವಿ, ಪೊನ್ನಕಚ್ಚಿರ ಕುಶ ಬಿದ್ದಪ್ಪ, ಕುಪ್ಪಂಡ ಉತ್ತಯ್ಯ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮಕ್ಕೆ ಕೊಡಗು ಜಾವಾ ಎಸ್ಡಿ ಮೋಟಾರ್ ಸೈಕಲ್ ಕ್ಲಬ್, ವಿರಾಜಪೇಟೆಯ ಪ್ರಗತಿ ಶಾಲೆ, ಕೊಡವಾಮೆರ ಕೊಂಡಾಟ, ತಿಂಗಕೊರ್ ಮೊಟ್ಟ್ ತಲಕಾವೇರಿ, ಮೈಸೂರು ಕೊಡವ ಸ್ಟೂಡೆಂಟ್ಸ್ ಅಸೋಸಿಷನ್, ಕನೆಕ್ಟಿಂಗ್ ಕೊಡವಾಸ್, ಬೆಂಗಳೂರು ಕೊಡವ ಸಮಾಜ ಯೂತ್ ಕೌನ್ಸಿಲ್, ಬಾಳೆಹೊನ್ನೂರುವಿನ ಮಹಾಲಕ್ಷ್ಮಿ ಕಾಫಿ ಟ್ರೇಡರ್ಸ್, ದಿಯನ್ ಎಂಟರ್ಪ್ರೈಸೆಸ್, ಕೊಡವ ನಾಡ್, ಕೆಫೆ ಹೆ ಶೇಕ್ ಸಹ ಪ್ರಯೋಜನೆ ನೀಡಿತ್ತು.