ಕನ್ನಡಪ್ರಭ ವಾರ್ತೆ ಹೊಳೆನರಸೀಪುರಸ್ವಾತಂತ್ರ್ಯ ದಿನಾಚರಣೆಯಂದು ಪ್ಲಾಸ್ಟಿಕ್ ತಿರಂಗ ಧ್ವಜಗಳ ಬಳಕೆ ಮಾಡಬಾರದು ಮತ್ತು ಪ್ಲಾಸ್ಟಿಕ್ ಬಾವುಟಗಳನ್ನು ಮಾರಾಟ ಮಾಡುವುದನ್ನು ನಿಷೇಧಿಸಲಾಗಿದೆ. ಆದ್ದರಿಂದ ವರ್ತಕರು ಬಟ್ಟೆಯಲ್ಲಿ ತಯಾರಿಸಿರುವ ತಿರಂಗ ಧ್ವಜಗಳನ್ನು ಮಾರಾಟ ಮಾಡುವ ಮೂಲಕ ರಾಷ್ಟ್ರಧ್ವಜದ ಘನತೆ ಹೆಚ್ಚಿಸುವ ಜತೆಗೆ ತಾಲೂಕು ಆಡಳಿತಕ್ಕೆ ಸಹಕಾರ ನೀಡಬೇಕೆಂದು ತಹಸೀಲ್ದಾರ್ ವೈ.ಎಂ. ರೇಣುಕುಮಾರ್ ಮನವಿ ಮಾಡಿದರು. ತಾಲೂಕು ಕಚೇರಿಯಲ್ಲಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಪ್ಲಾಸ್ಟಿಕ್ ತಿರಂಗ ಧ್ವಜಗಳ ಬಳಕೆಯೂ ಹಲವಾರು ರೀತಿಯಲ್ಲಿ ರಾಷ್ಟ್ರಧಜಕ್ಕೆ ಅಗೌರವ ಸೂಚಿಸಿದಂತೆ. ಈ ನಿಟ್ಟಿನಲ್ಲಿ ವರ್ತಕರುಗಳು ಮತ್ತು ಸಾರ್ವಜನಿಕರು ಪ್ಲಾಸ್ಟಿಕ್ ತಿರಂಗದ ಬದಲಾಗಿ ಬಟ್ಟೆಯಲ್ಲಿನ ತಿರಂಗಗಳನ್ನು ಉಪಯೋಗಿಸಿ, ದೇಶಪ್ರೇಮ ಮೆರೆಯಬೇಕಿದೆ ಎಂದರು.
ಪ್ಲಾಸ್ಟಿಕ್ನಿಂದ ತಯಾರಿಸಿರುವ ತಿರಂಗಧ್ವಜ ಮಾರಾಟ ಮಾಡದಂತೆ ವರ್ತಕರ ಸಂಘದ ಅಧ್ಯಕ್ಷರಿಗೆ ತಿಳಿಸುವ ಜತೆಗೆ ಮಾರಾಟ ಮಾಡುವ ವರ್ತಕರ ವಿರುದ್ದ ಕಾನೂನಿನ ರೀತ್ಯಾ ಕ್ರಮಕೈಗೊಳ್ಳಲು ಅವಕಾಶ ನೀಡದಂತೆ ಜಾಗ್ರತೆ ವಹಿಸುವುದು ಮತ್ತು ಅರ್ಥಪೂರ್ಣ ಆಚರಣೆಯಲ್ಲಿ ಎಲ್ಲರೂ ಭಾಗಿಗಳಾಗಲು ಮನವಿ ಮಾಡಲಾಗುತ್ತದೆ ಎಂದರು..