ಶಿರಸಿ: ಕದಂಬರು ಆಳಿದ ಬನವಾಸಿಯ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಸಂಭ್ರಮ ಡಿ. ೨೧ರಂದು ಅದ್ಧೂರಿಯಾಗಿ ಆಯೋಜಿಸಲಾಗಿದೆ ಎಂದು ಶತಮಾನೋತ್ಸವ ಸಮಿತಿ ಅಧ್ಯಕ್ಷ ಶಿವಾಜಿ ಕಾಳೇರಮನೆ ತಿಳಿಸಿದರು.ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಡಿ. ೨೧ರಂದು ಬೆಳಗ್ಗೆ ೯.೩ ರಿಂದ ಕಾರ್ಯಕ್ರಮ ಆರಂಭವಾಗಲಿದ್ದು, ದಾಸನಕೊಪ್ಪ ವೃತ್ತದಿಂದ ಅತಿಥಿಗಳು, ಹಳೆ ವಿದ್ಯಾರ್ಥಿಗಳು ಹಾಗೂ ಸನ್ಮಾನಿತ ಶಿಕ್ಷಕರನ್ನು ವಿವಿಧ ವಾದ್ಯಗಳ ಮೂಲಕ ಮೆರವಣಿಗೆ ಮೂಲಕ ಸ್ವಾಗತಿಸಲಾಗುತ್ತದೆ. ಮಕ್ಕಳ ಹಸ್ತಪತ್ರಿಕೆ, ಸ್ಮರಣ ಸಂಚಿಕೆ ಕರಡು ಪ್ರತಿ ಬಿಡುಗಡೆಗೊಳ್ಳಲಿದೆ. ಸೇವೆ ಸಲ್ಲಿಸಿದ ಶಿಕ್ಷಕರು, ಶಾಲೆಗೆ ಅನುದಾನ ನೀಡಿದ ಜನಪ್ರತಿನಿಧಿಗಳಿಗೆ, ಈ ಶಾಲೆಯಲ್ಲಿ ಕಲಿತು ಉನ್ನತ ಹುದ್ದೆಗೆ ಆಯ್ಕೆಯಾದ ವಿದ್ಯಾರ್ಥಿಗಳನ್ನು, ಎಸ್ಡಿಎಂಸಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಅಧ್ಯಕ್ಷರನ್ನು ಸನ್ಮಾನಿಸಲಾಗುವುದು. ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಪ್ರಸಿದ್ಧ ಗೊಂಬೆ ಆಟ ಮತ್ತು ವಿವಿಧ ಆಕರ್ಷಣೆಯ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಕಾರವಾರ: ಜಿಲ್ಲೆಯ ನದಿಗಳಲ್ಲಿ ಮರಳು ತೆಗೆಯಲು ಅವಕಾಶ ನೀಡುವಂತೆ ರಾಷ್ಟ್ರೀಯ ಹಸಿರು ನ್ಯಾಯಪೀಠಕ್ಕೆ(ಎನ್ಜಿಟಿ) ಮನವರಿಕೆ ಮಾಡಬೇಕು ಎಂದು ಒತ್ತಾಯಿಸಿ ಜಿಲ್ಲಾ ಮರಳು ಕಾರ್ಮಿಕರ ಸಂಘಟನೆಯಿಂದ ಜಿಲ್ಲಾಡಳಿತಕ್ಕೆ ಬುಧವಾರ ಮನವಿ ಸಲ್ಲಿಸಲಾಯಿತು.
ಎನ್ಜಿಟಿ ಆದೇಶವಿದೆಯೆಂದು ಕಳೆದ ಜುಲೈನಿಂದ ಮರಳುಗಾರಿಕೆಗೆ ಅವಕಾಶ ನೀಡುತ್ತಿಲ್ಲ. ಸಾವಿರಾರು ಜನರು ಮರಳುಗಾರಿಕೆಯನ್ನು ನಂಬಿಕೊಂಡು ಜೀವನ ನಡೆಸುತ್ತಿದ್ದು, ಇವರೆಲ್ಲ ಆರ್ಥಿಕವಾಗಿ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಕರಾವಳಿ ತಾಲೂಕಿನ ನದಿ ಪಾತ್ರದಲ್ಲಿ ಅನಾದಿ ಕಾಲದಿಂದ ಇದನ್ನೇ ಉದ್ಯೋಗವಾಗಿ ಮಾಡಿಕೊಂಡಿರುವ ಕುಟುಂಬಗಳ ಬದುಕು ಅತಂತ್ರ ಪರಿಸ್ಥಿತಿಗೆ ತಲುಪಿದೆ ಎಂದು ಅಳಲು ತೋಡಿಕೊಂಡರು.ಮರಳು ದಿಬ್ಬ ತೆರವುಗೊಳಿಸುವ ಕೆಲಸ ಪುನರಾರಂಭಿಸಲು ನ್ಯಾಯಾಲಯಕ್ಕೆ ಸಲ್ಲಿಸಲು ಅಗತ್ಯವಿರುವ ಸೂಕ್ತ ದಾಖಲೆಗಳನ್ನು ಆದಷ್ಟು ಬೇಗ ಸಲ್ಲಿಸಿ, ಮರಳುಗಾರಿಕೆಗೆ ಅನುಮತಿ ಪಡೆದು ಮರಳು ತೆಗೆಯಲು ಜಿಲ್ಲಾಡಳಿತ ಅವಕಾಶ ನೀಡಬೇಕು ಎಂದು ಕೋರಿದರು. ದಿಗಂಬರ ಶೇಟ್, ನಿತ್ಯಾನಂದ ನಾಯಕ, ಪ್ರದೀಪ ವೈಂಗಣಕರ, ವಿವೇಕ ಕಲ್ಗುಟಕರ ಮೊದಲಾದವರು ಇದ್ದರು.