ಕಲ್ಯಾಣ ಕರ್ನಾಟಕ ಮಾರ್ಗವಾಗಿ ಬೆಂಗಳೂರು- ಮುಂಬೈ ಸ್ಲೀಪರ್‌ ವಂದೇ ಭಾರತ ರೈಲು ಸಂಚಾರ

KannadaprabhaNewsNetwork |  
Published : Apr 14, 2026, 02:15 AM IST
ರೈಲು | Kannada Prabha

ಸಾರಾಂಶ

ಬೆಂಗಳೂರು- ಮುಂಬೈ ಸ್ಲೀಪರ್ ವಂದೇ ಭಾರತ್‌ ರೈಲಿನ ಮಾರ್ಗ ಖಚಿತವಾಗಿದೆ. ಬೆಂಗಳೂರು, ಕಲಬುರಗಿ, ಸೊಲ್ಲಾಪುರ ಮಾರ್ಗವಾಗಿ ಈ ರೈಲು ಸಂಚರಿಸಲಿದೆ ಎಂಬುದನ್ನು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಸ್ಪಷ್ಟಪಡಿಸಿದ್ದಾರೆ.

ಹುಬ್ಬಳ್ಳಿ: ಬೆಂಗಳೂರು- ಮುಂಬೈ ಸ್ಲೀಪರ್ ವಂದೇ ಭಾರತ್‌ ರೈಲಿನ ಮಾರ್ಗ ಖಚಿತವಾಗಿದೆ. ಬೆಂಗಳೂರು, ಕಲಬುರಗಿ, ಸೊಲ್ಲಾಪುರ ಮಾರ್ಗವಾಗಿ ಈ ರೈಲು ಸಂಚರಿಸಲಿದೆ ಎಂಬುದನ್ನು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಸ್ಪಷ್ಟಪಡಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ "ಎಕ್ಸ್‌ " ನಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, ರಾಜ್ಯಕ್ಕೆ ಹೊಸ ರೈಲು ನೀಡಿರುವುದಕ್ಕೆ ಪ್ರಧಾನಿ ಮೋದಿ ಹಾಗೂ ರೈಲ್ವೆ ಸಚಿವರಿಗೆ ಧನ್ಯವಾದ ಸಲ್ಲಿಸಿದ್ದಾರೆ.

ಬಹುನಿರೀಕ್ಷಿತ ಬೆಂಗಳೂರು ಮುಂಬೈ ವಂದೇ ಭಾರತ್‌ ಸ್ಲೀಪರ್‌ ರೈಲನ್ನು ರಾಜ್ಯಕ್ಕೆ ನೀಡುವುದಾಗಿ 2 ದಿನಗಳ ಹಿಂದೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಘೋಷಿಸಿದ್ದರು. ಆದರೆ, ಈ ರೈಲು ಸಂಚಾರ ಮಾರ್ಗ ಎಲ್ಲಿಂದ ಎಂಬುದರ ಕುರಿತು ಖಚಿತ ಪಡಿಸಿರಲಿಲ್ಲ. ಬೆಂಗಳೂರು, ಹುಬ್ಬಳ್ಳಿ, ಬೆಳಗಾವಿ, ಪುಣೆ ಮಾರ್ಗವೋ ಅಥವಾ ಬೆಂಗಳೂರು, ಕಲಬುರಗಿ, ಸೊಲ್ಲಾಪುರ, ಪುಣೆ ಮಾರ್ಗವೋ ಎಂಬ ಗೊಂದಲ ಪ್ರಯಾಣಿಕರಲ್ಲಿತ್ತು. ಸದ್ಯ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಟ್ವೀಟ್‌ ಮಾಡಿ ಯಾವ ಮೂರ್ಗದ ಮೂಲಕ ರೈಲು ಸಂಚರಿಸಲಿದೆ ಎಂಬುದನ್ನು ಖಚಿತಪಡಿಸಿದ್ದಾರೆ.

ಟ್ವಿಟ್‌ನಲ್ಲೇನಿದೆ?:

ಬೆಂಗಳೂರಿನಿಂದ ಮುಂಬೈಗೆ ನೂತನ ವಂದೇ ಭಾರತ್ ಸ್ಲೀಪರ್ ರೈಲು ಆರಂಭಕ್ಕೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದ್ದು, ಈ ರೈಲು ಬೆಂಗಳೂರಿನಿಂದ ಕಲ್ಯಾಣ ಕರ್ನಾಟಕದ ಮಾರ್ಗವಾಗಿ ಸಂಚರಿಸಲು ನನ್ನ ಮನವಿಗೆ ಸ್ಪಂದಿಸಿ, ನೂತನ ವಂದೇ ಭಾರತ್ ಸ್ಲೀಪರ್ ರೈಲು ಕೆ‌ಎಸ್‌ಆರ್ ಬೆಂಗಳೂರು ನಿಲ್ದಾಣದಿಂದ ಕಲ್ಯಾಣ ಕರ್ನಾಟಕದ ಮೂಲಕ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಲ್‌ಗೆ ಸಂಚರಿಸಲಿದೆ. ಹಾಗೂ ಬೆಂಗಳೂರಿನಿಂದ ಕರ್ನಾಟಕದ ಮಧ್ಯ ಭಾಗವಾದ ತುಮಕೂರು, ದಾವಣಗೆರೆ, ಹಾವೇರಿ, ಹುಬ್ಬಳ್ಳಿ-ಧಾರವಾಡ ಮತ್ತು ಬೆಳಗಾವಿ ಮಾರ್ಗದ ಮೂಲಕ ವಾಣಿಜ್ಯ ನಗರಿ ಮುಂಬೈಗೆ ತೆರಳಲು ಬೆಂಗಳೂರು- ಮುಂಬೈ ಸೂಪರ್ ಫಾಸ್ಟ್ ರೈಲಿಗೆ ನನ್ನ ಮನವಿಯ ಮೇರೆಗೆ ಈಗಾಗಲೇ ಅನುಮೋದನೆ ನೀಡಲಾಗಿತ್ತು. ಈ ಸೂಪರ್ ಫಾಸ್ಟ್ ರೈಲನ್ನು ಶೀಘ್ರವೇ ಪ್ರಾರಂಭಿಸುವುದಾಗಿ, ತದನಂತರದ ದಿನಗಳಲ್ಲಿ ವಂದೇ ಭಾರತ್ ಸ್ಲೀಪರ್ ರೈಲಾಗಿ ಬದಲಾಯಿಸುವಂತೆ ನನ್ನ ಪ್ರಸ್ತಾವನೆಯನ್ನು ಸಕಾರಾತ್ಮಕವಾಗಿ ಪರಿಗಣಿಸುವುದಾಗಿ ಹೇಳಿರುವ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ರಾಜ್ಯದ ಪರವಾಗಿ ಧನ್ಯವಾದಗಳು.

ರಾಜ್ಯದ ಅಭಿವೃದ್ಧಿಯ ಜತೆ ಕಲ್ಯಾಣ ಕರ್ನಾಟಕ ಭಾಗಕ್ಕೆ ಮತ್ತಷ್ಟು ಹೆಚ್ಚಿನ ಮಹತ್ವ ಹಾಗೂ ರಾಜ್ಯದಲ್ಲಿನ ವಾಣಿಜ್ಯ ಚಟುವಟಿಕೆ ಹೆಚ್ಚಿಸುವುದರ ಜತೆಗೆ ಉತ್ತಮ ಸಂಚಾರ ಸೌಲಭ್ಯವನ್ನು ಈ‌ ನೂತನ ವಂದೇ ಭಾರತ್ ರೈಲು ಬಲವರ್ಧಿಸಲಿದೆ. ನೂತನ ವಂದೇ ಭಾರತ್ ಸ್ಲೀಪರ್ ರೈಲನ್ನು ಐಟಿ ಸಿಟಿ ಬೆಂಗಳೂರು - ವಾಣಿಜ್ಯ ನಗರಿ ಮುಂಬೈ ಮಧ್ಯೆ ಸಂಚಾರಕ್ಕೆ ಅನುವು ಮಾಡಿಕೊಟ್ಟ ಪ್ರಧಾನಮಂತ್ರಿ ನರೇಂದ್ರ ಮೋದಿ, ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಅವರಿಗೆ ಅನಂತ ಧನ್ಯವಾದಗಳು ಎಂದು ತಮ್ಮ "ಎಕ್ಸ್‌ " ಖಾತೆಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಪೋಸ್ಟ್‌ ಮಾಡಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

2028ಕ್ಕೆ ಎನ್‌ಡಿಎಗೆ ಅಧಿಕಾರ ನಿಶ್ಚಿತ : ಅಶೋಕ್
ಗ್ಯಾರಂಟಿಗಳಿಂದ ಸಾಮಾಜಿಕ, ಆರ್ಥಿಕ ಶಕ್ತಿ: ಸಿದ್ದು