ಶಿಗ್ಗಾಂವಿ: ಆರ್ಥಿಕ ಸ್ವಾವಲಂಬನೆಗೆ ಅರ್ಬನ್ ಬ್ಯಾಂಕ್ ಗ್ರಾಹಕರಿಗೆ ಸಹಕಾರಿಯಾಗಿದೆ. ಹೀಗಾಗಿ ಕಳೆದ ೨೫ ವರ್ಷಗಳಿಂದ ಈ ಭಾಗದಲ್ಲಿ ಉತ್ತಮ ಸೇವೆ ಸಲ್ಲಿಸುವ ಮೂಲಕ ಹೆಮ್ಮರವಾಗಿ ಬೆಳೆದಿದೆ ಎಂದು ರಂಭಾಪುರಿ ಪೀಠದ ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.ಪಟ್ಟಣದ ಅರ್ಬನ್ ಬ್ಯಾಂಕ್ ಸಭಾಭವನದಲ್ಲಿ ಶನಿವಾರ ನಡೆದ ಶಿಗ್ಗಾಂವಿ ಅರ್ಬನ್ ಕೋ- ಆಪ್ ಬ್ಯಾಂಕಿನ ರಜತ ಮಹೋತ್ಸವ, ನವೀಕೃತ ಒಳಾಂಗಣದ ಹಾಗೂ ಮೊದಲ ಮಹಡಿಯ ಉದ್ಘಾಟನಾ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು.ಸಹಕಾರಿ ಸಂಘಗಳ ಮೂಲಕ ಗ್ರಾಮೀಣ ಭಾಗದ ಜನರಿಗೆ ಆರ್ಥಿಕ ನೆರವಾಗುತ್ತಿದೆ. ಹೀಗಾಗಿ ಕೆಲವು ಸಹಕಾರಿ ಸಂಘಗಳು ಉತ್ತಮ ಸೇವೆಯಿಂದಾಗಿ ಬ್ಯಾಂಕ್ಗಳಾಗಿ ಪರಿವರ್ತನೆ ಹೊಂದಿವೆ. ಸಂಘದ ಏಳ್ಗೆ ಬಯಸುವ ಮೂಲಕ ಕಠಿಣ ಪರಿಶ್ರಮದಿಂದ ಗ್ರಾಹಕರಿಗೆ ಬೇಕು, ಬೇಡಿಕೆಗಳನ್ನು ಈಡೇರಿಸಿದಾಗ ಮಾತ್ರ ಬ್ಯಾಂಕ್ ಗಳ ಅಭಿವೃದ್ಧಿ ಸಾಧ್ಯ ಎಂದರು.ಅರ್ಬನ್ ಬ್ಯಾಂಕಿನ ಸಂಸ್ಥಾಪಕ ಅಧ್ಯಕ್ಷ ಡಾ. ಪಿ.ಆರ್. ಪಾಟೀಲ ಮಾತನಾಡಿ, ಆರಂಭದಲ್ಲಿ ಬ್ಯಾಂಕ್ ಸಾಕಷ್ಟು ತೊಂದರೆ ಅನುಭವಿಸಿಕೊಂಡು ಬಾಡಿಗೆ ಕಟ್ಟಡದಲ್ಲಿ ನಡೆಸಿಕೊಂಡು ಬಂದು ಇದೀಗ ಸ್ವಂತ ಕಟ್ಟಡ ಹೊಂದಿದೆ. ಅದಕ್ಕೆ ಧುರೀಣರ ಶ್ರಮ, ಒಗ್ಗಟ್ಟು ಕಾರಣವಾಗಿದೆ ಎಂದರು.ರಾಜ್ಯ ಗಡಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಸೋಮಣ್ಣ ಬೇವಿನಮರದ, ಅರಳೆಲೆಮಠದ ರೇವಣಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ, ಮಾಜಿ ಸಂಸದ ಮಂಜುನಾಥ ಕುನ್ನೂರ, ಸಂಸ್ಥಾಪಕ ನಿರ್ದೇಶಕ ಎಚ್.ಆರ್. ದುಂಡಿಗೌಡ್ರ ಮಾತನಾಡಿದರು. ಅರ್ಬನ್ ಬ್ಯಾಂಕಿನ ಅಧ್ಯಕ್ಷ ಜಗದೀಶ ತೊಂಡಿಹಾಳ ಅಧ್ಯಕ್ಷತೆ ವಹಿಸಿದ್ದರು.