ಕನ್ನಡಪ್ರಭವಾರ್ತೆ ತೀರ್ಥಹಳ್ಳಿ
ಅಮಾನುಷವಾಗಿ ಕೊಲೆಯಾದ ಅಪರಿಚಿತ ಮಹಿಳೆ ವಯಸ್ಸು ಸುಮಾರು 30 ವರ್ಷವಾಗಿದ್ದು ವಿವಾಹಿತೆಯಾಗಿದ್ದಾಳೆ. ಕತ್ತಿನಲ್ಲಿ ಕರಿಮಣಿ ಸರ, ಕಾಲುಂಗುರು ಇದ್ದು ಚೂಡಿದಾರ ಧರಿಸಿದ್ದಳು. ಈಕೆಯ ಕತ್ತು, ಮುಖ, ಕೈ ಮತ್ತು ಕಾಲುಗಳನ್ನು ಕೂಡಾ ಸೀಳಲಾಗಿದ್ದು ಕೊಲೆ ಮಾಡಿದ ಕೊಠಡಿ ತುಂಬಾ ರಕ್ತದ ಕೋಡಿ ಹರಿದಿದೆ. ಇಂಥಹ ಘಟನೆಗೆ ಲಂಗು ಲಗಾಮಿಲ್ಲದ ಆಡಳಿತದ ವೈಫಲ್ಯವೇ ಕಾರಣ ಎಂಬ ಆರೋಪವೂ ಕೇಳಿ ಬಂದಿದೆ.
ಸೋಮವಾರ ನಡೆದಿದೆ ಎನ್ನಲಾದ ಅತ್ಯಂತ ಕ್ರೂರವಾದ ಈ ಘಟನೆ ಬುಧವಾರ ಸಂಜೆಯ ಹೊತ್ತಿಗೆ ತಡವಾಗಿ ಬೆಳಕಿಗೆ ಬಂದಿದೆ. ಹಣಗೆರೆಕಟ್ಟೆ ಹಜರತ್ ಸೈಯದ್ ಸಾದತ್ದರ್ಗಾ ಮತ್ತು ಭೂತರಾಯ ಸ್ವಾಮಿ ದೇವಸ್ಥಾನಕ್ಕೆ ಹೊಂದಿಕೊಂಡಿರುವ ವಸತಿ ಗೃಹದ ಎರಡನೇ ಮಹಡಿಯಲ್ಲಿರುವ ಕೊಠಡಿಯಲ್ಲಿ ಶವ ನೆಲದ ಮೇಲೆ ಬಿದ್ದಿತ್ತು. ಅಮಾನುಷವಾಗಿ ನಡೆದ ಹತ್ಯೆ ಸುದ್ದಿ ಹರಡುತ್ತಿದ್ದಂತೆ ಗ್ರಾಮಸ್ಥರಲ್ಲಿ ಭೀತಿ ಉಂಟಾಗಿತ್ತು.ಬುಧವಾರ ಸಂಜೆ ವಸತಿ ಗೃಹದ ಕೊಠಡಿಯಲ್ಲಿ ರಕ್ತದ ಕಲೆ ಕಾಣುತ್ತಿರುವ ಸುದ್ದಿ ಬಾಯಿಂದ ಬಾಯಿಗೆ ಹರಡುತ್ತಿದ್ದಂತೆ ತಿಳಿದ ಹೆಚ್ಚುವರಿ ಪೋಲಿಸ್ ವರಿಷ್ಠಾಧಿಕಾರಿ ಅನಿಲ್ ಕುಮಾರ್ ಭೂಮಾರೆಡ್ಡಿ, ಡಿವೈಎಸ್ಪಿ ಗಜಾನನ ಸುತಾರ್, ಗ್ರಾಮಾಂತರ ಸಿಪಿಐ ಶ್ರೀಧರ್ ಹಾಗೂ ಬೆರಳಚ್ಚು ತಜ್ಞರತಂಡ ಸ್ಥಳಕ್ಕೆ ಬಂದಿದ್ದು ತನಿಖೆ ನಡೆಸಿದ್ದಾರೆ.