ದಾಸರಹಳ್ಳಿ : ಪತ್ನಿಯ ಅಕ್ರಮ ಸಂಬಂಧದ ಹಿನ್ನೆಲೆಯಲ್ಲಿ ಪತಿಯನ್ನು ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿದ್ದ ಪ್ರಕರಣವನ್ನು ಭೇದಿಸಿರುವ ಮಾದನಾಯಕನಹಳ್ಳಿ ಠಾಣೆ ಪೊಲೀಸರು ಪತ್ನಿ, ಪ್ರಿಯಕರ ಸೇರಿದಂತೆ ಏಳು ಆರೋಪಿಗಳನ್ನು ಬಂಧಿಸಿದ್ದಾರೆ.
ಪತ್ನಿ ಆಶಾ, ಆಕೆಯ ಬಾಲ್ಯ ಸ್ನೇಹಿತ, ಪ್ರಿಯಕರ ಧನಂಜಯ, ಸಾಗರ್, ರಮೇಶ್, ಹೇಮಂತ, ವಿವೇಕ, ಹಾಗೂ ರೋಹಿತ್ ಬಂಧಿತ ಆರೋಪಿಗಳು. ಫೈನಾನ್ಸ್ ವ್ಯವಹಾರ ಮಾಡಿಕೊಂಡಿದ್ದ ವಿಜಯ್ ಕೊಲೆಯಾದ ದುರ್ದೈವಿ ಪತಿ. 10 ವರ್ಷಗಳ ಹಿಂದೆ ಆಶಾ ಜತೆ ವಿವಾಹವಾಗಿದ್ದು ಇಬ್ಬರು ಗಂಡು ಮಕ್ಕಳು ಇದ್ದಾರೆ. ಕಾಮಾಕ್ಷಿಪಾಳ್ಯದಲ್ಲಿ ದಂಪತಿ ವಾಸಿಸುತ್ತಿದ್ದರು.
ಇದೇ ಹೊತ್ತಿಗೆ ಪತ್ನಿ ಆಶಾಗೆ ತನ್ನ ಬಾಲ್ಯ ಸ್ನೇಹಿತ ಧನಂಜಯನ ಪರಿಚಯವಾಗಿದೆ. ನಂತರದಲ್ಲಿ ಆಶಾ ಹಾಗೂ ಧನಂಜಯ ನಡುವೆ ಅನೈತಿಕ ಸಂಬಂಧ ಬೆಳೆದಿದೆ. ಇಬ್ಬರು ಜೊತೆಗಿರುವ ಫೋಟೋಗಳು ವಿಜಯ್ ಕಣ್ಣಿಗೆ ಬಿದ್ದಿದ್ದು ಪತ್ನಿ ಜತೆ ಜಗಳವಾಡಿದ್ದಾನೆ. ಈ ಕಾರಣಕ್ಕಾಗಿ ಆತ ಕಾಮಾಕ್ಷಿಪಾಳ್ಯ ಬಿಟ್ಟು ಕಡಬಗೆರೆಯ ಮಾಚೋಹಳ್ಳಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು.
ಆದರೂ ಇಬ್ಬರ ಅನೈತಿಕ ಸಂಬಂಧ ಮುಂದುವರಿದಿತ್ತು. ಸೋಮವಾರ ಸಂಜೆ ವಿಜಯ್ ಮನೆಯಿಂದ ಹೊರ ಹೋಗಿದ್ದಾಗ ಮಾದನಾಯಕನಹಳ್ಳಿ ಕಡಬಗೆರೆ ಕ್ರಾಸ್ ಜನಪ್ರಿಯ ಅಪಾರ್ಟ್ ಮೆಂಟ್ ಬಳಿ ಐದಾರು ಮಂದಿ ಸೇರಿಕೊಂಡು ಪಾರ್ಟಿ ಮಾಡಿದ್ದಾರೆ. ಆಗ ಕುಡಿದ ಅಮಲಿನಲ್ಲಿ ಅವರ ಮಧ್ಯೆ ಗಲಾಟೆ ನಡೆದು ಧನಂಜಯ ತನ್ನ ಸಹಚರರೊಂದಿಗೆ ಮಚ್ಚಿನಿಂದ ವಿಜಯ್ ಮೇಲೆ ಮನಸೋಇಚ್ಛೆ ಹಲ್ಲೆ ನಡೆಸಿ ಕೊಲೆ ಮಾಡಿ ಪರಾರಿಯಾಗಿದ್ದ. ಪ್ರಕರಣವನ್ನು ಬೆನ್ನತ್ತಿದ ಪೊಲೀಸರು ಪತ್ನಿ, ಪ್ರಿಯಕರ ಧನಂಜಯನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಅಸಲಿ ವಿಷಯ ಬೆಳಕಿಗೆ ಬಂದಿತು. ನಂತರ ಪ್ರಕರಣದ ಎಲ್ಲ ಏಳು ಆರೋಪಿಗಳನ್ನು ಬಂಧಿಸಿದರು.