ಬಸವ ಯುಗ ಉಳಿವು ಸಿದ್ದಲಿಂಗೇಶ್ವರರಿಂದ

KannadaprabhaNewsNetwork | Published : Dec 23, 2024 1:01 AM

ಸಾರಾಂಶ

ಬಸವ ಯುಗದ ವಚನಗಳ ಉಳಿವು ಸಿದ್ದಲಿಂಗೇಶ್ವರರ ಸಂಪಾದನೆಯಿಂದ ಸಾಧ್ಯವಾಗಿದೆ ಎಂದು ಸುತ್ತೂರು ಸಂಸ್ಥಾನ ಮಠದ ಶಿವರಾತ್ರಿದೇಶಿಕೇಂದ್ರ ಸ್ವಾಮೀಜಿ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಕುಣಿಗಲ್‌ ಬಸವ ಯುಗದ ವಚನಗಳ ಉಳಿವು ಸಿದ್ದಲಿಂಗೇಶ್ವರರ ಸಂಪಾದನೆಯಿಂದ ಸಾಧ್ಯವಾಗಿದೆ ಎಂದು ಸುತ್ತೂರು ಸಂಸ್ಥಾನ ಮಠದ ಶಿವರಾತ್ರಿದೇಶಿಕೇಂದ್ರ ಸ್ವಾಮೀಜಿ ತಿಳಿಸಿದ್ದಾರೆ. ತಾಲೂಕಿನ ಹುಲಿಯೂರು ದುರ್ಗಾದಲ್ಲಿ ಹುಲಿಯೂರ್ ದುರ್ಗಾ ಸಿದ್ದಗಂಗಾ ಮಠದ ಸಂಯುಕ್ತಾಶ್ರಯದಲ್ಲಿ ನಡೆದ ಮೈಸೂರು ಚಾಮರಾಜನಗರ ಜಿಲ್ಲೆಯ ವೀರಶೈವ ಲಿಂಗಾಯತ ಮಠಾಧೀಶರ ಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದರು.ಇತಿಹಾಸದಲ್ಲಿ ಹಲವಾರು ಮಹಾಪುರುಷರ ಇತಿಹಾಸಗಳು ದಾಖಲೆ ಇಲ್ಲದೆ ನಾಶವಾಗಿದೆ ಬಸವಯುಗದಲ್ಲಿ ರಚನೆಯಾದ ಹಲವಾರು ವಚನಗಳನ್ನು ಅಳಿದು ಹೋಗಿರುವ ಪುರಾವೆಗಳಿವೆ ಎಂದರು. ಸಿದ್ದಲಿಂಗೇಶ್ವರರು ಜನ ಮನದಿಂದ ತಾಳೆಗರಿಗಳಿಂದ ವಿವಿಧ ಶಾಸನಗಳಿಂದ ವಚನಗಳನ್ನು ಸಂಗ್ರಹಿಸಿ ಪ್ರಭುದ್ದಕ್ಕೆ ತರುವ ಪ್ರಯತ್ನ ಮಾಡುವುದರ ಜೊತೆಗೆ ಷಟ್‌ ಸ್ಥಲ ಸಾರಾಮೃತ ರಚಿಸಿ ಒಂದು ಚೌಕಟ್ಟು ಹಾಕಿದ್ದರಿಂದ ಸಿದ್ದಲಿಂಗೇಶ್ವರ ಪ್ರತಿ ಮಠ ಮನೆ ತಲುಪಲು ಸಾಧ್ಯ ವಾಯಿತು ಎಂದರು .

ಮಲೇ ಮಹದೇಶ್ವರರು ಜಾನಪದ ಮಾದರಿಯಲ್ಲಿ ಸಾಹಿತ್ಯ ರಚಿಸಿ ಹಾಡಿದ ಹಾಗೂ ಸಿದ್ದಲಿಂಗೇಶ್ವರರಂತೆ ಹಲವಾರು ಅಸಮಾನ್ಯ ಸಂಗತಿ ಪ್ರಚಾರ ಪಡಿಸಿ ಪವಾಡ ಪುರುಷರಾದರು ಅಂತಹ ಮಹಿಮ ಹಾಗೂ ಸಾಧಕ ಸಮಾಜ ಸುಧಾರಕರ ಬಗ್ಗೆ ಹೆಚ್ಚು ಅರಿವು ನಡೆಯಬೇಕಿದೆ ಎಂದರು.

ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ ಶರಣ ಸಂಸ್ಕೃತಿಯಲ್ಲಿ ಸಿದ್ದಲಿಂಗೇಶ್ವರರ ಕಾಲ ಸುವರ್ಣ ಯುಗ ಎಂದು ಕರೆಯಬಹುದಾಗಿದೆ ಸಿದ್ದಲಿಂಗೇಶ್ವರರು ತಮ್ಮ ನೂರಾರು ಶಿಷ್ಯರ ಜೊತೆ ಕರ್ನಾಟಕ , ಆಂಧ್ರ ಸೇರಿದಂತೆ ಹಲವಾರು ರಾಜ್ಯಗಳನ್ನು ಸಂಚಾರ ಮಾಡಿ ಶೂನ್ಯ ಸಂಪಾದನೆ ಎಂಬ ಹೆಸರಿನಲ್ಲಿ ವಚನ ರಚಿಸಿ ಉಳಿಸಿದ ಕಾರಣದಿಂದಾಗಿ ಇಂದಿಗೂ ವಚನ ಜನಸಾಮಾನ್ಯರಿಗೆ ತಲುಪುವಂತಾಯಿತು ಎಂದರು.

ಕಾರ್ಯಕ್ರಮದ ಉದ್ಘಾಟನೆ ಮಾಡಿ ಮಾತನಾಡಿದ ಡಾ. ಎಂವಿ ಪರಮಶಿವಮೂರ್ತಿ ಸಿದ್ದಲಿಂಗೇಶ್ವರರ ವಚನ ಸಾಹಿತ್ಯ ಹಲವಾರು ಹಳ್ಳಿ ಕೆರೆ ಕಟ್ಟೆ ಬೀದಿಗಳಲ್ಲಿ ಜನರ ಕೇರಿಗಳಲ್ಲಿ ಹುಡುಕಿ ಸಂಗ್ರಹಿಸುವುದರ ಜೊತೆಗೆ ತನ್ನದೇ ಆದ ಸಾಹಿತ್ಯ ಸಮೂಹವನ್ನು ಸಿದ್ದಲಿಂಗೇಶ್ವರರು ಹೊಂದಿದ್ದು ಇಂದಿಗೂ ಕೂಡ ಕರ್ನಾಟಕ ರಾಜ್ಯ ಸೇರಿದಂತೆ ವಿವಿಧ ಭಾಗಗಳಲ್ಲಿ ಹಲವಾರು ಕುರುಹುಗಳಿವೆ ಎಂದರು .

ಕಾರ್ಯಕ್ರಮದಲ್ಲಿ ಡಂಬಳ ಗದಗ ಸಂಸ್ಥಾನ ಮಠದ ತೋಂಟದ ಸಿದ್ದರಾಮ ಚೈತನ್ಯ ಸ್ವಾಮೀಜಿ ಹಾಗೂ ಹುಲಿಯೂರುದುರ್ಗ ಸಿದ್ದಗಂಗಾ ಮಠದ ಸಿದ್ದಲಿಂಗ ಶಿವಾನಂದ ಸ್ವಾಮೀಜಿ ಸೇರಿದಂತೆ ಹಲವಾರು ಸ್ವಾಮೀಜಿಗಳು ಮತ್ತು ಮಠದ ಭಕ್ತರು ಇದ್ದರು .

Share this article