ಕುಡಿತದಿಂದ ಹೊರ ಬಂದು ಉತ್ತಮ ಸಮಾಜ ನಿರ್ಮಿಸಿ

KannadaprabhaNewsNetwork | Published : Jan 13, 2025 12:46 AM

ಸುಲಭವಾಗಿ ಯಾವುದೇ ಕೆಲಸ ಆಗುವುದಿಲ್ಲ. ಯಶಸ್ಸಿಗೆ ಶ್ರಮವಹಿಸಬೇಕು.

ಕನ್ನಡಪ್ರಭ ವಾರ್ತೆ ಮೈಸೂರು

ಜೀವನದಲ್ಲಿ ತಪ್ಪುಗಳು ಕಷ್ಟ ಪಡದಿದ್ದರೂ ಅಗುತ್ತದೆ. ಒಳ್ಳೆಯ ಕೆಲಸಕ್ಕೆ ಪರಿಶ್ರಮ ಪಡಲೇಬೇಕು. ವ್ಯಸನಿಗಳು ಕುಡಿತದಿಂದ ಹೊರ ಬಂದು ಉತ್ತಮ ಸಮಾಜ ನಿರ್ಮಿಸಿ ಎಂದು ಮೈಸೂರು ವಿಶ್ವವಿದ್ಯಾನಿಲಯದ ಐಕ್ಯುಎಸಿ ಸಂಯೋಜಕ ಡಾ.ಜೆ. ಲೋಹಿತ್ ಸಲಹೆ ನೀಡಿದರು.

ನಗರದ ಬಸವಮಾರ್ಗ ವ್ಯಸನಮುಕ್ತ ಹಾಗೂ ಪುನರ್ವಸತಿ ಕೇಂದ್ರವು ಆಯೋಜಿಸಿರುವ 10 ದಿನಗಳ ಉಚಿತ ಕುಡಿತ ಬಿಡಿಸುವ ‌ಶಿಬಿರದಲ್ಲಿ ಭಾನುವಾರ ನಡೆದ ಸ್ವಾಮಿ ವಿವೇಕಾನಂದರ ಜಯಂತಿಯಲ್ಲಿ ಮಾತನಾಡಿದ ಅವರು, ಸುಲಭವಾಗಿ ಯಾವುದೇ ಕೆಲಸ ಆಗುವುದಿಲ್ಲ. ಯಶಸ್ಸಿಗೆ ಶ್ರಮವಹಿಸಬೇಕು. ಜೀವನ ಕೆಡಿಸಿಕೊಳ್ಳುವುದು ಸುಲಭ, ಆದರೆ ಮತ್ತೆ ಅದನ್ನು ಸರಿಪಡಿಸಿಕೊಳ್ಳುವುದು ಬಹಳ ಕಷ್ಟ. ಹೀಗಾಗಿ, ಸಿಕ್ಕಿರುವ ಈ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಮನುಷ್ಯ ಇನ್ನೊಬ್ಬರ ಬಗ್ಗೆ ಬದುಕಿದಾಗ ತಪ್ಪುಗಳನ್ನು ಕಡಿಮೆ ಮಾಡುತ್ತಾನೆ. ತಾನು ಎನ್ನುವವನು ಮಾತ್ರ ಹೆಚ್ಚಾಗಿ ತಪ್ಪುಗಳನ್ನು ಮಾಡುತ್ತಾನೆ. ಮನುಷ್ಯ ಜನ್ಮ ದೊಡ್ಡದು. ಅದನ್ನು ಹಾಳು ಮಾಡಿಕೊಳ್ಳದಿರಿ ಹುಚ್ಚಪ್ಪದಿರ ಎಂದು ದೊಡ್ಡವರು ಹೇಳಿದ್ದಾರೆ. ದೊರಕಿರುವ ಈ ಮಾನವ ಜನ್ಮವನ್ನು ಉತ್ತಮ ಕೆಲಸಗಳಿಗೆ ಬಳಸಿಕೊಳ್ಳಬೇಕು. ಆ ಮೂಲಕ ಆರೋಗ್ಯ ‌ಪೂರ್ಣ ಸಮಾಜ ನಿರ್ಮಾಣ ಮಾಡಲು ಕೈ ಜೋಡಿಸಬೇಕು ಎಂದರು.

ಮದ್ಯಪಾನ ಮಾಡುವುದರಿಂದ ಮನುಷ್ಯ ತನ್ನ ನಿಯಂತ್ರಣ ಕಳೆದುಕೊಳ್ಳುತ್ತಾನೆ. ಇದರಿಂದ ತನ್ನ ಕುಟುಂಬ ಹಾಗೂ ಸಮಾಜಕ್ಕೆ ಸಮಸ್ಯೆಯೇ ಹೆಚ್ಚು. ನಮ್ಮ ಮನಸ್ಸು ಹಾಗೂ ಆರೋಗ್ಯ ಹಾಳು ಮಾಡುವ ಸಾಕಷ್ಟು ವಿಷಯಗಳು ಸಮಾಜದಲ್ಲಿ ಹೇರಳವಾಗಿಯೇ ಇವೆ. ಆದರಲ್ಲೂ ಮದ್ಯಪಾನ, ವ್ಯಕ್ತಿಯ ಜೀವನವನ್ನೇ ಹಾಳು ಮಾಡುತ್ತದೆ. ನಿಮ್ಮ ಸಮಸ್ಯೆಗಳು ಕೇವಲ ನಿಮ್ಮನ್ನು ಮಾತ್ರ ಬಾಧಿಸುವುದಿಲ್ಲ. ನಿಮ್ಮ ಸಮಸ್ಯೆಗಳು ನಿಮ್ಮ ಮನೆಯವರನ್ನು ಬಾಧಿಸುತ್ತದೆ. ಈ ಎಚ್ಚರಿಕೆ ನಮ್ಮಲ್ಲಿ ಇರಬೇಕು ಎಂದು ಅವರು ಹೇಳಿದರು.

ಬಸವಮಾರ್ಗ ಸಂಸ್ಥೆಯ ಸಂಸ್ಥಾಪಕರಾದ ಬಸವಣ್ಣ, ಸಿಬ್ಬಂದಿ ಬಾಲಸುಬ್ರಹ್ಮಣ್ಯಂ, ಆನಂದ್, ಸಂಜಯ್ ಮೊದಲಾದವರು ಇದ್ದರು.