ಹೂವಿನಹಡಗಲಿ: ಸಮ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ 12ನೇ ಶತಮಾನದ ಬಸವಣ್ಣನವರ ಆಶಯಗಳನ್ನು 19ನೇ ಶತಮಾನದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಸಂವಿಧಾನ ರಚಿಸುವ ಮೂಲಕ ಎಲ್ಲರೂ ಒಂದೇ ಎಂಬ ಪರಿಕಲ್ಪನೆ ನೀಡಿದ್ದಾರೆ ಎಂದು ಕನ್ನಡ ವಿವಿ ಹಿರಿಯ ಪ್ರಾಧ್ಯಾಪಕ ಪ್ರೊ.ಎನ್. ಚಿನ್ನಸ್ವಾಮಿ ಸೋಸಲೆ ಹೇಳಿದರು.
ಇಂದು ನಾವು ಪುರಾಣ ಮತ್ತು ವಾಸ್ತವ, ತೀರ್ಥ ಮತ್ತು ಬೆವರು, ಧರ್ಮ ಮತ್ತು ಜಾತಿ, ಭಕ್ತಿ ಮತ್ತು ನಂಬಿಕೆ, ವೈದಿಕರು ಮತ್ತು ವೈಚಾರಿಕ ಚಿಂತನೆಗಳಲ್ಲಿ ನಾವು ನಾವಾಗಿಯೇ ಇರದೇ ಬೇರೆಯವರ ಸಮಯದ ಕೈಗೊಂಬೆಗಳಾಗಿ ಜೀವಿಸುತ್ತಿದ್ದೇವೆ ಎಂದರು. ಬಸವಣ್ಣನವರ ಸಮ ಸಮಾಜ ಕಲ್ಪನೆ ಹಾಗೂ ಎಲ್ಲರಿಗೂ ಸಮಾನ ಅವಕಾಶವನ್ನು ಕಲ್ಪಿಸುವ ಉದ್ದೇಶದಿಂದ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಕಾನೂನಾತ್ಮಕವಾಗಿ ಸಂವಿಧಾನ ರಚನೆ ಮಾಡಿದ್ದಾರೆ. ನಾವು ಹೇಗೆ ಬದುಕಬೇಕೆಂಬುದನ್ನು ಬಸವಣ್ಣ ಸಾರಿದ್ದಾರೆ ಆ ಕಾರಣಕ್ಕಾಗಿ. ಕರ್ನಾಟಕದ ವಿಶ್ವ ಗುರು ಬಸವಣ್ಣ ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿದ್ದಾರೆ. ನಮ್ಮ ಯುವ ಪೀಳಿಗೆ ಸಂವಿಧಾನ ಮತ್ತು ವಚನಗಳಲ್ಲಿನ ಸಾರವನ್ನು ಅರಿಯುವ ಅವಶ್ಯಕತೆ ಇದೆ ಎಂದರು.
ಶಾಸಕ ಕೃಷ್ಣನಾಯ್ಕ ಮಾತನಾಡಿ, ಬಸವಣ್ಣನವರ ಆದರ್ಶಮಯ ಬದುಕು ನಮಗೆಲ್ಲ ಇಂದಿಗೂ ದಾರಿದೀಪವಾಗಿದೆ. ಬಸವಣ್ಣನವರು ಒಂದೇ ಜಾತಿಗೆ ಸೀಮಿತಗೊಳಿಸಬಾರದು ಎಂದರು.ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ ಸೇರಿದಂತೆ ಇತರರು ಮಾತನಾಡಿದರು. ಪ್ರಾಚಾರ್ಯ ಎಂ.ವಿಜಯಕುಮಾರ್, ಕನ್ನಡ ವಿಭಾಗದ ಮುಖ್ಯಸ್ಥ ಡಾ.ಸತೀಶ ಪಾಟೀಲ, ಪ್ರಾಧ್ಯಾಪಕರಾದ ಉಮಾದೇವಿ, ಡಾ.ಸುರೇಶ್, ಸುನಿತಾದೇವಿ, ಮುಖಂಡರಾದ ಮಣಿಕಂಠ, ಪುನೀತ್ ದೊಡ್ಡಮನಿ, ಮಾವಿನಹಳ್ಳಿ ಬಸವಣ್ಣ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.