- ಶ.ಸಾ.ಪ. ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅಧ್ಯಕ್ಷ ಗೌ.ಹಾಲೇಶ್ ಅಭಿಮತ
ಕನ್ನಡಪ್ರಭ ವಾರ್ತೆ ಚನ್ನಗಿರಿ
ಜಗಜ್ಯೋತಿ ಬಸವೇಶ್ವರ ಕಲ್ಯಾಣ ಪಟ್ಟಣದಲ್ಲಿ ಬಿಜ್ಜಳನ ಅಸ್ಥಾನದಲ್ಲಿ ಮಂತ್ರಿಯಾಗಿದ್ದರು. ಶತಶತಮಾನಗಳಿಂದ ಸಮಾಜದಲ್ಲಿ ಬೇರೂರಿದ್ದ ಜಾತಿ, ವರ್ಣ, ಮೇಲು-ಕೀಳು ಎಂಬ ಪಿಡುಗುಗಳ ವಿರುದ್ಧ ಹೋರಾಡಿದವರು ಎಂದು ಮಯೂರ ಡಾ.ರಾಜ್ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಗೌ.ಹಾಲೇಶ್ ಹೇಳಿದರು.ಪಟ್ಟಣದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಶುಕ್ರವಾರ ತಾಲೂಕು ಶರಣ ಸಾಹಿತ್ಯ ಪರಿಷತ್ತು ವತಿಯಿಂದ ಹಮ್ಮಿಕೊಂಡಿದ್ದ ಬಸವಾದಿ ಶರಣ ಹಡಪದ ಅಪ್ಪಣ್ಣನವರ ಜಯಂತ್ಯುತ್ಸವ ಮತ್ತು ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹಡಪದ ಅಪ್ಪಣ್ಣ ಅವರು ಬಸವೇಶ್ವರ ಅವರ ಕೊನೆ ದಿನಗಳವರೆಗೂ ಜೊತೆಯಲ್ಲಿದ್ದ ಶರಣರಾಗಿದ್ದರು. ಸುಮಾರು 250ಕ್ಕೂ ಅಧಿಕ ವಚನಗಳನ್ನು ಅಪ್ಪಣ್ಣ ಬರೆದಿದ್ದಾರೆ. ಹಡಪದ ಸಮಾಜದವರು ಎದುರಿಗೆ ಬಂದರೆ ಕೆಟ್ಟದಾಗುತ್ತದೆ ಎಂದು ಹೇಳುತ್ತಿದ್ದ ಕಾಲದಲ್ಲಿ ಕಲ್ಯಾಣ ರಾಜ್ಯಕ್ಕೆ ಯಾರೇ ಬಂದರೂ ಅಪ್ಪಣ್ಣನ ಅನುಮತಿ ಪಡೆದು ಬಸವೇಶ್ವರರನ್ನು ಕಾಣುವ ನಿಯಮವನ್ನು ಬಸವೇಶ್ವರರು ಮಾಡಿದ್ದರು ಎಂದರು.
ತಾಲೂಕು ಶರಣ ಸಾಹಿತ್ಯ ಪರಿಷತ್ತು ಗೌರವ ಅಧ್ಯಕ್ಷ ಎಚ್.ಎಸ್. ಮಲ್ಲಿಕಾರ್ಜುನಪ್ಪ ಮಾತನಾಡಿ, ಬಸವಾದಿ ಶಿವಶರಣರು 12ನೇ ಶತಮಾನದಲ್ಲಿ ಮಾಡಿದ ಸಾಮಾಜಿಕ ಕ್ರಾಂತಿಯಿಂದಾಗಿ ಇಂದು ನಾವೆಲ್ಲರೂ ನೆಮ್ಮದಿಯಿಂದ ಜೀವಿಸುತ್ತಿದ್ದೇವೆ. ಅವರ ಮಾರ್ಗದರ್ಶನದಲ್ಲಿ ನಾವೆಲ್ಲರೂ ಮುನ್ನಡೆಯಬೇಕಾಗಿದೆ ಎಂದರು.ಸಮಾರಂಭದ ಅಧ್ಯಕ್ಷತೆಯನ್ನು ಶಾಲೆ ಮುಖ್ಯ ಶಿಕ್ಷಕ ಎಂ.ಆರ್. ಲೋಹಿತಾಶ್ವ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ನಾರಶೆಟ್ಟಿಹಳ್ಳಿ ಗುರುಬಸವೇಶ್ವರ, ರಂಗಭೂಮಿ ಕಲಾವಿದ ತಿಪ್ಪೇಸ್ವಾಮಿ, ಎಚ್.ಎಂ. ಕರಿಸಿದ್ದಪ್ಪ, ತಾಲೂಕು ಹಡಪದ ಸಮಾಜ ಅಧ್ಯಕ್ಷ ಯು.ಬಸವರಾಜಪ್ಪ, ಕೆ.ವಿ. ಸೋಮಶೇಖರ್, ಜಿ.ಎಸ್. ಶಂಕರಪ್ಪ, ತಾಲೂಕು ಶ.ಸಾ.ಪ. ಅಧ್ಯಕ್ಷ ಎಂ.ಎಸ್. ಮಲ್ಲೇಶಪ್ಪ ಹಾಜರಿದ್ದರು.
- - --18ಕೆಸಿಎನ್ಜಿ1.ಜೆಪಿಜಿ: ಸಮಾರಂಭದ ಉದ್ಘಾಟನೆಯನ್ನು ಗಣ್ಯರು ನೆರವೇರಿಸಿದರು.