ಅಭಿನಂದನಾ ಸಮಾರಂಭ । ಬಸವ ಪುತ್ಥಳಿ ದಾನಿಗಳಿಗೆ ಗೌರವ
ಬಸವಣ್ಣನವರ ತತ್ವಗಳು ಜಗತ್ತು ಇರುವವರೆಗೂ ಶಾಶ್ವತವಾಗಿರಲಿವೆ ಎಂದು ತೆಂಕಲಗೋಡು ಮಠದ ಚನ್ನಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಮಂಗಳವಾರ ಮಲೆನಾಡು ವೀರಶೈವ ಸಮಾಜ ಬಸವಣ್ಣನವರ ಪುತ್ಥಳಿ ನಿರ್ಮಾಣಕ್ಕೆ ಸಹಕರಿಸಿದ ದಾನಿಗಳಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಆಶೀರ್ವಚನ ನೀಡಿ, ಮಾನವರು ಆಧುನಿಕ ಯುಗದಲ್ಲಿ ಚಂದ್ರಲೋಕ, ಮಂಗಳ ಗ್ರಹಕ್ಕೆ ಹೋಗಿ ಬಂದಿದ್ದೇವೆ. ಆದರೆ ಮನುಷ್ಯ ಮನುಷ್ಯರೊಂದಿಗೆ ಹೇಗೆ ವರ್ತನೆ ಮಾಡಬೇಕು ಎಂಬುದು ತಿಳಿಯದೆ ಇರುವುದು ಇಂದಿನ ಸಮಾಜದಲ್ಲಿನ ಸಂಘರ್ಷಕ್ಕೆ ಕಾರಣವಾಗಿದೆ ಎಂದು ಅಭಿಪ್ರಾಯಪಟ್ಟರು.ಸಮಾಜದ ಸುಧಾರಣೆಗಾಗಿ ತಮ್ಮ ಜೀವನವನ್ನು ಅರ್ಪಿಸಿಕೊಂಡವನು ಮಾತ್ರ ಸಮಾಜಕ್ಕೆ ಆಸ್ತಿಯಾಗುತ್ತಾನೆಯೇ ಹೊರತು ಸ್ವಂತಕ್ಕೆ ದುಡಿದವನಲ್ಲ. ನಮ್ಮ ಅಸ್ಮಿತೆಗಾಗಿ ಸಮಾಜಕ್ಕಾಗಿ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
ವೀರಶೈವ ಮಹಾಸಭಾದ ರಾಜ್ಯಾಧ್ಯಕ್ಷ ಶಂಕರ್ ಬಿದರಿ ಮಾತನಾಡಿ, ೧೨ನೇ ಶತಮಾನದಲ್ಲಿ ಬಧುಕಿದ್ದ ಬಸವಣ್ಣ, ಇಡೀ ಮನುಕುಲಕ್ಕೆ ಮಾದರಿ. ಇವರು ಒಂದು ಸಮಾಜಕ್ಕೆ ಮಾತ್ರ ಸೀಮಿತವಲ್ಲ. ಮನುಷ್ಯ ಹೇಗೆ ಬದುಕುಬೇಕು ಎಂಬದನ್ನು ಹೇಳಿಕೊಟ್ಟ ಧೀಮಂತರ ಪುತ್ಥಳಿಗಳು ಎಲ್ಲ ಪಟ್ಟಣಗಳಲ್ಲೂ ಸ್ಥಾಪಿಸುವ ಮೂಲಕ ಮುಂದಿನ ತಲೆಮಾರಿಗೆ ಅವರ ತತ್ವಗಳನ್ನು ಕೊಂಡೊಯ್ಯಬೇಕಾಗಿದೆ. ಎಲ್ಲ ಧರ್ಮಗಳನ್ನು ತಮ್ಮವರು ಎಂದು ಕರೆದೊಯ್ಯದವರು ವೀರಶೈವರು ಮಾತ್ರ. ರಾಜ್ಯದಲ್ಲಿ ವೀರಶೈವ-ಲಿಂಗಾಯಿತ ಸಮಾಜ ಇಂದು ದಾರುಣ ಸ್ಥಿತಿಯಲ್ಲಿದೆ. ಈ ಧರ್ಮಕ್ಕೆ ಬಂದಿರುವ ಅಧೋಗತಿ ಬೇರೆ ಯಾವ ಸಮಾಜಕ್ಕೂ ಬಂದಿಲ್ಲ. ರಾಜ್ಯದಲ್ಲಿ ವೀರಶೈವ-ಲಿಂಗಾಯತರ ಸಂಖ್ಯೆ ಹೆಚ್ಚಿದ್ದರೂ ಸಂಘಟನೆ ಸೊರಗಲು ಕಾರಣವನ್ನು ಹುಡುಕ ಬೇಕಿದೆ. ರಾಜ್ಯದ ಲಿಂಗಾಯಿತ ಹಾಗೂ ವೀರಶೈವ ಮುಖಂಡರೆಲ್ಲ ಸೇರಿ ಸಮಾಜದ ಸಂಘಟನೆ ಮಾಡುವ ಕೆಲಸವನ್ನು ನನಗೆ ನೀಡಿದ್ದು ಮುಂದಿನ ಐದು ವರ್ಷಗಳಲ್ಲಿ ನಿರಂತರವಾಗಿ ರಾಜ್ಯ ಸುತ್ತುವ ಮೂಲಕ ಪ್ರತಿ ತಾಲೂಕಿನಲ್ಲಿ ೧೦ ಸಾವಿರ ವೀರಶೈವ-ಲಿಂಗಾಯಿತ ಮಹಾಸಭೆಗೆ ಸದಸ್ಯರನ್ನು ಮಾಡುವ ಮೂಲಕ ಸಂಘಟ ಬಲಿಷ್ಠಗೊಳಿಸಲಾಗುವುದು ಎಂದರು.
ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಪರಮೇಶ್, ಸಮಾಜ ಸೇವಕ ಬನ್ನಹಳ್ಳಿ ಪುನೀತ್, ಮಲೆನಾಡು ವೀರಶೈವ ಸಮಾಜದ ಅಧ್ಯಕ್ಷ ದಿವಾನ್, ಕಾರ್ಯದರ್ಶಿ ಧರ್ಮಪ್ಪ, ಓಂಕಾರ್ ಮೂರ್ತಿ, ಇತರರು ಇದ್ದರು.