- ತರಳಬಾಳು ಸೇವಾ ಟ್ರಸ್ಟ್, ಶಿವಕುಮಾರ ಸ್ವಾಮಿ ಮಹಾಮಂಟಪದಿಂದ ಶಿವಗೋಷ್ಠಿ
ಕನ್ನಡಪ್ರಭ ವಾರ್ತೆ ದಾವಣಗೆರೆ
ಯಾವ ಧರ್ಮ ಮಹಿಳೆಯರಿಗೆ ಧಾರ್ಮಿಕ ಸ್ವಾತಂತ್ರ್ಯ ನಿರಾಕರಿಸಿ ತಿರಸ್ಕರಿಸಿತ್ತೋ ಅದನ್ನೇ ಬಸವಣ್ಣನವರು ಮೊಟ್ಟಮೊದಲು ನಾಗಮ್ಮನಿಗೆ ಇಷ್ಟಲಿಂಗ ದೀಕ್ಷೆ ನೀಡಿ ಧಾರ್ಮಿಕ ಸ್ವಾತಂತ್ರ್ಯ ಮೆರೆದರು ಎಂದು ಹೊಳಲ್ಕೆರೆಯ ಕೊಟ್ರೆ ನಂಜಪ್ಪ ಪದವಿ ಪೂರ್ವ ಕಾಲೇಜಿನ ಇತಿಹಾಸ ಉಪನ್ಯಾಸಕ ಡಾ. ಜಿ.ವಿ. ಮಂಜುನಾಥ ಹೇಳಿದರು.ನಗರದ ತರಳಬಾಳು ಸೇವಾ ಟ್ರಸ್ಟ್ ಮತ್ತು ಶಿವಕುಮಾರ ಸ್ವಾಮಿ ಮಹಾಮಂಟಪ ವತಿಯಿಂದ ಶನಿವಾರ ಸಂಜೆ ಹಮ್ಮಿಕೊಂಡಿದ್ದ ಶಿವಗೋಷ್ಠಿ ಕಾರ್ಯಕ್ರಮದಲ್ಲಿ ''''ಸಾಂಸ್ಕೃತಿಕ ನಾಯಕ ಬಸವಣ್ಣ'''' ವಿಷಯವಾಗಿ ಉಪನ್ಯಾಸ ನೀಡಿ ಅವರು ಮಾತನಾಡಿದರು.
ಕಲ್ಯಾಣವೆಂಬ ಪವಿತ್ರ ಭೂಮಿಯಲ್ಲಿ ಅನುಭವ ಮಂಟಪ ಧಾರ್ಮಿಕ ಸಂವಹನದ ಧಾರ್ಮಿಕ ಸಂಸತ್ತು. ಅಲ್ಲಿ ನಡೆದ ಚರ್ಚೆಯು ಹೃದಯಗಳಿಂದ, ನಾಡಿಯಿಂದ, ಅನುಭವದಿಂದ, ಕಾಯಕದಿಂದ ಹುಟ್ಟಿದ ಚಿಂತನಯುಕ್ತ ಮೌಲ್ಯಗಳು ವಿಶ್ವಮಾನ್ಯವಾದಂತವು. ಇಂತಹ ಚಳವಳಿಯ ಮಹಾ ನೇತೃತ್ವ ವಹಿಸಿ ಸಾಮಾಜಿಕ ಸಮಾನತೆ ಸಾರಿದ ಮಹಾ ಮಾನವತಾವಾದಿ ಬಸವಣ್ಣನವರು ಎಂದು ಹೇಳಿದರು.
ಶ್ರೀ ತರಳಬಾಳ ಜಗದ್ಗುರು ವಿದ್ಯಾ ಸಂಸ್ಥೆ ಆಡಳಿತಾಧಿಕಾರಿ ಡಾ. ಎಚ್.ವಿ. ವಾಮದೇವಪ್ಪ ಶಿವಗೋಷ್ಠಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಬಸವಣ್ಣ ವಿಶ್ವಗುರು, ಸಾಂಸ್ಕೃತಿಕ ನಾಯಕ ಎಂದು ಹೇಳಿ ಹೆಮ್ಮೆಪಟ್ಟುಕೊಂಡರೆ ಸಾಲದು. ಅವರ ವಿಚಾರಧಾರೆಗಳನ್ನು ಆಚರಣೆಯಲ್ಲಿ ತಂದಾಗ ಮಾತ್ರ ಅವರಿಗೆ ನಿಜವಾದ ಗೌರವ ಸಂದೀತು ಎಂದು ತಿಳಿಸಿದರು.
ಕದಳಿ ಮಹಿಳಾ ವೇದಿಕೆಯ ಅನುಭವ ಮಂಟಪ ತಂಡದವರು ವಚನ ಗಾಯನವನ್ನು ನೆರವೇರಿಸಿಕೊಟ್ಟರು. ಎಲೆಬೇತೂರು ಶ್ರೀ ಕೊಂಡಜ್ಜಿ ಬಸಪ್ಪ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಪ್ರೇಮ ಸ್ವಾಗತಿಸಿ, ಶಿಕ್ಷಕರಾದ ದ್ಯಾಮೇಶ್ ವಂದಿಸಿ, ಡಾ.ಷಣ್ಮುಖಪ್ಪ ಕಾರ್ಯಕ್ರಮ ನಿರೂಪಿಸಿದರು.
-10ಕೆಡಿವಿಜಿ38: