ಸಮ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ ಬಸವಣ್ಣ

KannadaprabhaNewsNetwork | Published : May 2, 2025 12:09 AM

ಸಾರಾಂಶ

ಇಂದಿನ ಸಮಾಜದಲ್ಲಿ ಮಹಿಳೆಯರು ಸಮಾನ ಅವಕಾಶ, ಉನ್ನತ ಸ್ಥಾನಮಾನ ಪಡೆದುಕೊಳ್ಳುತ್ತಿರುವುದಕ್ಕೆ ಅಡಿಪಾಯ ಹಾಕಿದವರು ಬಸವಣ್ಣನವರು

ಸಂಡೂರು: ಬಸವಣ್ಣನವರು ೧೨ನೇ ಶತಮಾನದಲ್ಲಿಯೇ ಸಮ ಸಮಾಜ ನಿರ್ಮಾಣಕ್ಕೆ ಶ್ರಮಿಸಿದರು. ಅವರು ಸರ್ವಕಾಲಿಕ ಗೌರವಕ್ಕೆ ಪಾತ್ರರಾದವರು ಎಂದು ಶಾಸಕಿ ಈ. ಅನ್ನಪೂರ್ಣ ತುಕಾರಾಂ ಅಭಿಪ್ರಾಯಪಟ್ಟರು.

ಪಟ್ಟಣದ ಶ್ರೀಪ್ರಭುದೇವರ ಸಂಸ್ಥಾನ ವಿರಕ್ತಮಠದಲ್ಲಿ ಬುಧವಾರ ನಡೆದ ಬಸವ ದರ್ಶನ ಪ್ರವಚನ ಮಂಗಲ ಹಾಗು ಪುಸ್ತಕ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಇಂದಿನ ಸಮಾಜದಲ್ಲಿ ಮಹಿಳೆಯರು ಸಮಾನ ಅವಕಾಶ, ಉನ್ನತ ಸ್ಥಾನಮಾನ ಪಡೆದುಕೊಳ್ಳುತ್ತಿರುವುದಕ್ಕೆ ಅಡಿಪಾಯ ಹಾಕಿದವರು ಬಸವಣ್ಣನವರು. ಅವರು ಆರ್ಥಿಕ ತಜ್ಞರಾಗಿದ್ದರು. ಬಸವಣ್ಣನವರ ಜಯಂತಿ ಒಂದು ದಿನದ ಕಾರ್ಯಕ್ರಮವಾಗದೆ ಪ್ರತಿ ದಿನದ ಕಾರ್ಯಕ್ರಮವಾಗಬೇಕಿದೆ ಎಂದರು.

ವಚನಕಾರರ ತತ್ವ ಪಾಲಿಸಿದರೆ, ಜೀವನ ಸಾರ್ಥಕವಾಗಲಿದೆ. ಶಾಲಾ ಕಾಲೇಜುಗಳಲ್ಲಿಯೂ ಇಂತಹ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಯುವ ಜನತೆಗೂ ಬಸವಾದಿ ಶರಣರ ವಚನಗಳ ಸಾರ ತಿಳಿಸಬೇಕಿದೆ. ಯುವ ಜನತೆ ದೇಶದ ಆಸ್ತಿ. ಸ್ವಾಸ್ಥ ಸಮಾಜ ನಿರ್ಮಾಣಕ್ಕೆ ಎಲ್ಲರೂ ಬದ್ಧರಾಗಿ ಶ್ರಮಿಸೋಣ ಎಂದರು.

ಸಾಹಿತಿ ಡಾ.ನಂದೀಶ್ವರ ದಂಡೆಯವರು ವಚನ ಸಾಹಿತ್ಯದ ತಾತ್ವಿಕತೆ ವಿಷಯ ಕುರಿತು ಮಾತನಾಡಿ, ಇತ್ತೀಚೆಗಿನ ದಿನಗಳಲ್ಲಿ ಬಸವ ತತ್ವದ ಮೇಲೆ ದಾಳಿ ನಡೆಯುತ್ತಿದೆ. ಇದನ್ನು ತಡೆಯಬೇಕಿದೆ. ಸಮ ಸಮಾಜ ನಿರ್ಮಾಣ, ಮಹಿಳೆಯರಿಗೆ ಧಾರ್ಮಿಕ ಸ್ವಾತಂತ್ರ್ಯ ಕೊಡಿಸಲು ಶ್ರಮಿಸಿದವರು ಬಸವಾದಿ ಶರಣರು. ಇದು ಬಸವ ತತ್ವದ ಸುಗ್ಗಿಯ ಕಾಲ. ವಚನ ಸಂಪತ್ತನ್ನು ಸಂರಕ್ಷಿಸುವ ಅಗತ್ಯವಿದೆ. ಅನುಭವ ಮಂಟಪ ಪ್ರಜಾಪ್ರಭುತ್ವದ ತೊಟ್ಟಿಲು. ಬಸವ ತತ್ವ ಯುವ ಜನತೆಗೆ ತಲುಪಿಸಬೇಕಿದೆ ಎಂದರು.

೧೬ ದಿನಗಳ ಕಾಲ ಬಸವ ದರ್ಶನ ಕುರಿತು ಪ್ರವಚನ ನೀಡಿದ ಬೆಂಗಳೂರಿನ ಬಸವ ಯೋಗಾಶ್ರಮದ ಅಲ್ಲಮಪ್ರಭು ಸ್ವಾಮೀಜಿಯವರು ಪ್ರವಚನ ಮುಕ್ತಾಯ ಮಾಡಿ, ಬಸವಾದಿ ಶರಣರ ವಚನಗಳಲ್ಲಿ ಜ್ಞಾನ ಭಂಡಾರವಿದೆ. ಬಸವಣ್ಣನವರು ಇತರರನ್ನು ತಮ್ಮೆತ್ತರಕ್ಕೆ ಬೆಳೆಸಿದರು. ಅವರು ಬೋಧಿಸಿದ ಕಾಯಕ ಹಾಗೂ ದಾಸೋಹ ತತ್ವಗಳಿಂದ ವ್ಯಕ್ತಿತ್ವ ವಿಕಸನವಾಗುತ್ತದೆ ಎಂದರು.

ಡಾ. ಚನ್ನಬಸಯ್ಯ ಹಿರೇಮಠ್ ರಚಿಸಿರುವ ಅರಿವಿನ ಬೆಳಕು ಅಜಗಣ್ಣ ತಂದೆ ಹಾಗೂ ಡಾ.ಪಿ.ಆರ್.ಚಂದ್ರಶೇಖರ್, ಡಾ. ಮುಕ್ತಾಬಿ ಹಾಗೂ ಡಾ. ಎಸ್.ಎಂ. ಜಾಮದಾರ್ ಸಂಪಾದಿತ ಕೃತಿ ವಚನ ದರ್ಶನ ಮಿಥ್ಯ ವರ್ಸಸ್ ಸತ್ಯ ಕೃಷಿಯನ್ನು ಗಣ್ಯರು ಬಿಡುಗಡೆಗೊಳಿಸಿದರು.

ಸಾಹಿತಿ ಡಾ. ಚನ್ನಬಸಯ್ಯ ಹಿರೇಮಠ್ ಕೃತಿಗಳ ಪರಿಚಯ ಮಾಡಿಕೊಟ್ಟರು. ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಶ್ರೀಮಠದ ಪ್ರಭುಸ್ವಾಮೀಜಿ ಆಶೀರ್ವಚನ ನೀಡಿದರು. ಅಕ್ಕನ ಬಳಗದ ಸದಸ್ಯರು ವಚನವೊಂದಕ್ಕೆ ಹೆಜ್ಜೆ ಹಾಕಿದರು. ಹಗರಿ ಬಸವರಾಜಪ್ಪನವರು ಸ್ವರಚಿತ ಕವನ ವಾಚಿಸಿದರು. ಮಲ್ಲಿಕಾರ್ಜುನ ಪಟ್ಟಣಶೆಟ್ಟಿ ಭಕ್ತರಿಗೆ ಪ್ರಸಾದದ ವ್ಯವಸ್ಥೆ ಕಲ್ಪಿಸಿದ್ದರು.

ಶಿವಕುಮಾರ್ ಮುದೇನೂರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ನರಿ ಬಸವರಾಜ ಪ್ರಾರ್ಥಿಸಿ, ವಚನ ಸಂಗೀತ ಕಾರ್ಯಕ್ರಮ ನೀಡಿದರು. ನಿರ್ಮಲಾ ಬಸವರಾಜ ಹಾಗೂ ವಿಶಾಲಾಕ್ಷಿ ಉಗ್ರಾಣದ್ ಸ್ವಾಗತಿಸಿದರು. ಉಪನ್ಯಾಸಕ ಜಿ.ಎಂ.ಪ್ರದೀಪ್‌ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಅಂಕಮನಾಳ್ ಮಯೂರ್ ವಂದಿಸಿದರು.

ಮುಖಂಡರಾದ ಅರಳಿ ಕುಮಾರಸ್ವಾಮಿ, ಜಿ.ಕೆ. ನಾಗರಾಜ, ಹಟ್ಟಿ ಕೊಟ್ರೇಶ್, ಚಿತ್ರಿಕಿ ಸುಮಂಗಲಮ್ಮ, ಹಗರಿ ಸುಮಂಗಲಮ್ಮ, ಕಲ್ಪನಾ ಗುಡೆಕೋಟೆ, ನರಿ ವಸುಂಧರ, ಸುಮಿತ್ರಮ್ಮ ಮಲ್ಲಿಕಾರ್ಜುನ ಹೊಳಗುಂದಿ, ಮೂಲಿಮನೆ ಮಲ್ಲಣ್ಣ, ಮುದೇನೂರು ಗುಂಡಪ್ಪ, ಎಡೆಯೂರು ವಸಂತಮ್ಮ, ಅಂಕಮನಾಳ್ ಕೊಟ್ರೇಶ್, ಮೂಲಿಮನೆ ಕುಮಾರಸ್ವಾಮಿ ಸೇರಿದಂತೆ ಬಸವ ಬಳಗ, ಅಕ್ಕನ ಬಳಗ, ವಿರಕ್ತಮಠ ಸೇವಾ ಸಮಿತಿ ಹಾಗೂ ಬಸವಪರ ಸಂಘಟನೆಗಳ ಸದಸ್ಯರು ಉಪಸ್ಥಿತರಿದ್ದರು.

Share this article