ಕನ್ನಡಪ್ರಭ ವಾರ್ತೆ ಚಾಮರಾಜನಗರನನ್ನ ಪಚ್ಚೆಯ ಜಗುಲಿ ವಿಮರ್ಶಾತ್ಮಕ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ೨೦೨೫ನೇ ಸಾಲಿನ ಯುವ ಪುರಸ್ಕಾರ ಪ್ರಶಸ್ತಿ ಬಂದಿದ್ದು ನನಗೆ ಸಂತೋಷದ ಜೊತೆಗೆ ಆಶ್ಚರ್ಯವು ಆಯಿತು. ನಾನು ಇದನ್ನು ಊಹಿಸಿರಲಿಲ್ಲ ಎಂದು ಪ್ರಶಸ್ತಿ ಪುರಸ್ಕೃತ ಸಾಹಿತಿ ಆರ್.ದಿಲೀಪ್ ಕುಮಾರ್ ಹೇಳಿದರು.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಗುರುವಾರ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಒಂದು ವಿಮರ್ಶಾತ್ಮಕ ಕೃತಿಗೆ ಮೊಟ್ಟ ಮೊದಲ ಬಾರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಯುವ ಪುರಸ್ಕಾರ ಪ್ರಶಸ್ತಿ ಬಂದಿರುವುದು ಸಂತೋಷದ ಜೊತಗೆ ಇಂತಹ ಕೃತಿಗಳಿಗೂ ಪ್ರಶಸ್ತಿ ಬರಬಹುದು ಎಂದು ನಾನು ನಿರೀಕ್ಷೆಯುನ್ನು ಮಾಡಲಿರಲಿಲ್ಲ ಎಂದು ಆಶ್ಚರ್ಯ ವ್ಯಕ್ತಪಡಿಸಿದರು.ವಿಮರ್ಶಾತ್ಮಕವಾಗಿ ಬರೆಯಬೇಕಾದರೆ, ಗಾಬರಿ, ಕೂತೂಹಲ ಇರಬೇಕು. ಮನೆಯಲ್ಲಿ ಓದಿದ ಹಳಗನ್ನಡ ಪದ್ಯಕ್ಕೂ, ಅದೇ ಪದ್ಯವನ್ನು ಪ್ರೊಫೆಸರ್ಗಳಿಂದ ವಿವರ ಕೇಳುವುದಕ್ಕು ಬಹಳ ವ್ಯತ್ಯಾಸದ ಜೊತೆಗೆ ಈ ಪದ್ಯದಲ್ಲಿ ಇಷ್ಟೊಂದು ಅರ್ಥವಿದೆಯೇ ಎನ್ನುವ ಗಾಬರಿ ಜೊತೆಗೆ ಕುತೂಹಲವು ಆಗಿ ವಿಮರ್ಶಾತ್ಮಕಾಗಿ ಬರೆಯಲು ಪ್ರೇರೆಪಿಸುತ್ತದೆ. ಅದರಲ್ಲೂ ಪಂಪನ ಮಹಾಭಾರತ, ವಿಕ್ರಮಾರ್ಜುನ ವಿಜಯ ಕೃತಿಗಳು ಹೆಚ್ಚು ಗಾಬರಿಗೊಳಿಸುತ್ತವೆ ಎಂದರು.ಬಸವಣ್ಣನವರ ವಚಗಳಲ್ಲಿ ಕೆಲವು ಸುಲಭ ವಚಗಳು ಮಾತ್ರ ಪರಿಚಯವಿದೆ, ಆದರೆ ಇನ್ನುಳಿದ ವಚನಗಳ ಆಳಕ್ಕೆ ಇಳಿದಾಗ ಅಲ್ಲಿ ಹುಟ್ಟುವ ವಿಮರ್ಶೆಗಳು ಅತ್ಯಂತ ಮಹತ್ವದ್ದಾಗಿದೆ ಎಂದರು. ಈ ಪ್ರಶಸ್ತಿಯನ್ನು ತಾಯಿ ಕೆ.ರಂಗಮ್ಮ, ತಂದೆ ದಿ.ಎ.ಎಸ್.ರಾಮರಾವ್ ಹಾಗೂ ತಮ್ಮ ಆರ್.ಪವನ್ ಅವರಿಗೆ ಅರ್ಪಣೆ ಮಾಡುತ್ತೇನೆ. ನನಗೆ ಓದುವ ಗೀಳು ಬಂದಿದ್ದು ನನ್ನ ಮಾವ ರಂಗಕರ್ಮಿ ವೆಂಕಟರಾಜು ಅವರ ಮನೆಯಲ್ಲಿದ್ದ ಗ್ರಂಥಾಲಯದ ಜೊತೆಗೆ ಚಾಮರಾಜನಗರ ಸರ್ಕಾರಿ ಪದವಿ ಕಾಲೇಜಿನ ಗ್ರಂಥಪಾಲಕರಾಗಿದ್ದ ಜಯಕುಮಾರ್ ಅವರು ಎರಡರ ಬದಲು ಐದು ಪುಸ್ತಕ ನೀಡಿ ಪ್ರೊತ್ಸಾಹಿಸಿದ್ದು ಕಾರಣವಾಗಿದೆ ಎಂದು ಸ್ಮರಿಸಿಕೊಂಡರು.
ಟಿ.ವಿ.ವೆಂಕಟಾಚಲಶಾಸ್ತ್ರಿ ನನಗೆ ಮಾದರಿ:ಖ್ಯಾತ ವಿಮರ್ಶಕ ದಿ.ಜಿ.ಎಚ್.ನಾಯಕ ಅವರಂತೆ ವಿಮರ್ಶೆ ಬರೆಯಬೇಕು, ವಿದ್ವಾಂಸ ಟಿ.ವಿ.ವೆಂಕಟಾಚಲಶಾಸ್ತ್ರಿ ಅವರ ರೀತಿ ಸಂಶೋಧನಾ ಲೇಖನ ಬರೆಯಬೇಕು ಎಂಬುದು ನನ್ನ ಬಯಕೆಯಾಗಿತ್ತು ಅದಕ್ಕಾಗಿ ಪ್ರಯತ್ನಿಸಿದೆ ಎಂದರು. ನಾನು ಹಾರುವ ಹಂಸ ಕವನ ಸಂಕಲನ, ಪಂಪನ ಆದಿಪುರಾಣ ಹಾಗೂ ವಿಕ್ರಮಾರ್ಜುನ ವಿಜಯ ಕುರಿತ ವಿಮರ್ಶೆಗಳ ಸಂಕಲನ, ಪಂಪ ಬಳಸಿದ್ದ ಪಚ್ಚೆಯ ಜಗುಲಿ ಹಾಗೂ ಬಸವಣ್ಣನವರ ವಚನಗಳನ್ನು ಕುರಿತು ಶಬ್ದ ಸೋಪಾನ ಎಂಬ ವಿಮರ್ಶೆಗಳ ಸಂಕಲನ ಬರೆದಿದ್ದು ನನ್ನ ೨ನೇ ಸಂಕಲನ’ಪಚ್ಚೆಯ ಜಗಲಿ’ಗೆ ಕೇಂದ್ರ ಸಾಹಿತ್ಯಯುವ ಪ್ರಶಸ್ತಿ ಸಿಕ್ಕಿದೆ ಎಂದರು.
ನನ್ನ ಕೃತಿಯನ್ನು ನಾನಂತೂ ಕಳುಹಿಸಿರಲಿಲ್ಲ. ಅದನ್ನು ಯಾರು ಆಯ್ಕೆಗೆ ಕಳುಹಿಸಿದರೋ, ಹೇಗೆ ಆಯ್ಕೆ ಮಾಡಿದರೋ ಗೊತ್ತಿಲ್ಲ. ಪಶಸ್ತಿ ಪ್ರಕಟವಾದ ನಂತರ ಆಶ್ಚರ್ಯವಾಯಿತು ಎಂದರು . ಹಳೆಗನ್ನಡ, ನಡುಗನ್ನಡ, ನವ್ಯ, ನವೋದಯ ಸಾಹಿತ್ಯದ ಬರವಣಿಗೆಯಲ್ಲಿ ತೊಡಗಿದ್ದೇನೆ ಮುಂದೆಯು ಹಳಗನ್ನಡದ ಖ್ಯಾತ ಕವಿಗಳ ಪ್ರಸಿದ್ದ ಕೃತಿಗಳನ್ನ ಕುರಿತು ವಿಮರ್ಶಾತ್ಮಕ ಕೃತಿಗಳನ್ನು ಬರೆಯಬೇಕೆಂದುಕೊಂಡಿದ್ದೇನೆ. ಈ ಮೂಲಕ ಮುಂದಿನ ಜಿಲ್ಲೆಯ ಯುವ ಸಾಹಿತಿಗಳು ಹೆಚ್ಚು ಕೃಷಿ ಮಾಡಲು ಸಾಧ್ಯವಾಗುತ್ತದೆ ಎಂದರು.೨೦೨೧ರಲ್ಲಿ ಹೊರಬಂದಿರುವ ಕೃತಿ ಇದು. ತುಮಕೂರು ಜಿಲ್ಲೆ ಕುಣಿಗಲ್ನ ’ಕಾಚಕ್ಕಿ’ ಪ್ರಕಾಶನದಿಂದ ಹೊರಬಂದಿದೆ. ಪ್ರೊ.ಜಿ.ಎಚ್.ನಾಯಕ ಅವರು ಪಂಪನ ಅಭಿವ್ಯಕ್ತಿ ಹಾಗೂ ಪಂಪನ ಪದ್ಯವೊಂದರ ಪುನರ್ವ್ಯಾಖ್ಯಾನ ಎಂಬುದರ ಲೇಖನಗಳಿಂದ ಪ್ರಭಾವಿತರಾಗಿ ಈ ಕೃತಿ ಬರೆದಿದ್ದೆ ಎಂದರು. ೧೩ ವಿಮರ್ಶಾ ಲೇಖನ ಹಾಗೂ ೧ ಪ್ರಸ್ತಾವನೆ ಇದೆ. ಜಿ.ಎಚ್. ನಾಯಕರಿಂದಲೇ ಮುನ್ನುಡಿ ಬರೆಸಿದ್ದೇನೆ. ಅವರ ಮನೆಗೆ ಹೋಗಿ ಪಾಠ ಕೇಳಿಕೊಂಡು, ಮಾರ್ಗದರ್ಶನ ಪಡೆದುಕೊಂಡು ಬರುತ್ತಿದ್ದೆ’ ಎಂದು ಹೇಳಿದರು.
ವಿದ್ವಾಂಸರಾದ ವೆಂಕಟಾಚಲಶಾಸ್ತ್ರಿ, ಪಂಡಿತಾರಾಧ್ಯ, ಡಾ.ತಾರಾನಾಥ, ಪ್ರೊ.ನಾಗಭೂಷಣ ಸೇರಿದಂತೆ ಹಲವಾರು ವಿದ್ವಾಂಸರು ನನ್ನ ಮೇಲೆ ಅನೇಕ ಪ್ರಭಾವ ಬೀರಿದರು. ಕವಿತೆಯಿಂದ ಶುರುವಾದ - ನನ್ನ ಕಾಯಕ ವಿಮರ್ಶೆ ಕಡೆ ಹೊರಳುವಂತೆ ಮಾಡಿತು. ಹಿರಿಯ ವಿದ್ವಾಂಸರ ವಿಮರ್ಶೆಗಳನ್ನು ಓದಿದ ಪರಿಣಾಮ ವಿಮರ್ಶೆಯಲ್ಲಿ ಸಾಧನೆ ಮಾಡಲು ಸಾಧ್ಯವಾಯಿತು ಎಂದರು.ಹಳೆಯ ಗನ್ನಡದ ಪಂಪ, ಕುಮಾರವ್ಯಾಸ, ಅಲ್ಲಮಪ್ರಭು, ಬಸವಣ್ಣ, ನೀಲಾಂಬಿಕೆ, ಅಕ್ಕಮಹಾದೇವಿ ಹಾಗೂ ಕುವೆಂಪು, ಬೇಂದ್ರ, ಮಾಸ್ತಿ, ಅಡಿಗರು ನನ್ನ ನೆಚ್ಚಿನ ಕವಿಗಳಾಗಿದ್ದು ಅವರ ಅನೇಕ ಈ ಕೃತಿಗಳನ್ನು ಅಧ್ಯಯನ ಮಾಡಿದ್ದೇನೆ. ಪ್ರತಿದಿನ ಮನಸ್ಸು ಬದಲಾದಂತೆ ಕವಿತೆ ಕೂಡ ಬದಲಾಗುತ್ತದೆ ಎಂದರು.ನಗರದವ ಜೆಎಸ್ಎಸ್ ಮಹಿಳಾ ಕಾಲೇಜಿಲ್ಲ ಕನ್ನಡ ಸ್ನಾತಕೋತ್ತರ ಕೇಂದ್ರ ಕನ್ನಡ ವಿಷಯದಲ್ಲಿ ಎಂಎ ಸ್ನಾತಕೋತ್ತರ ಪದವಿ ಪಡೆದಿದ್ದು ಇಲ್ಲಿಯೇ ಬಿ.ಇಡಿ ಮಾಡಿದ್ದೇನೆ ಇನ್ನೂ ಹೆಚ್ಚು ಸಾಹಿತ್ಯ ಓದಿ ವಿದ್ಯಾರ್ಥಿಗಳಿಗೆ ತಿಳಿಸಬೇಕು. ನನ್ನ ಆಸಕ್ತಿ ಕ್ಷೇತ್ರ ಉಪನ್ಯಾಸಕ ವೃತ್ತಿ ಎಂದು ತಿಳಿಸಿದರು.ಸಂಘದ ಅಧ್ಯಕ್ಷ ದೇವರಾಜು ಕಪ್ಪಸೋಗೆ ಮಾತನಾಡಿ, ಗಡಿ ಜಿಲ್ಲೆ ಚಾಮರಾಜನಗರ ಪಟ್ಟಣದ ದಿಲೀಪ್ಕುಮಾರ್ ಅವರ ವಿಮರ್ಶಾತ್ಮಕ ಕೃತಿ ’ಪಚ್ಚೆಯ ಜಗುಲಿ’ಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಯುವ ಪುರಸ್ಕಾರ ಲಭಿಸಿರುವುದು ಜಿಲ್ಲೆಯ ಸಾಹಿತ್ಯವನ್ನು ಮತ್ತಷ್ಟು ಶ್ರೀಮಂತಗೊಳಿಸಿದೆ ಎಂದರು. ಹಿರಿಯ ಪತ್ರಕರ್ತ ಕೆ.ಎಸ್. ಬನಶಂಕರ ಆರಾಧ್ಯ ಸ್ವಾಗತಿಸಿ, ಪ್ರಧಾನಕಾರ್ಯದರ್ಶಿ ಪ್ರಸಾದ್ ಲಕ್ಕೂರು ವಂದಿಸಿದರು.