ಕಾಂಗ್ರೆಸ್ ಕಾರ್ಯಕರ್ತರೆಂದು ಹೇಳಿಕೊಳ್ಳುವುದಕ್ಕೆ ಹೆಮ್ಮೆಪಡಿ

KannadaprabhaNewsNetwork | Published : Nov 28, 2024 12:31 AM

ಸಾರಾಂಶ

Be proud to claim to be a Congress worker

-ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸಂವಿಧಾನ ದಿನಾಚರಣೆಯಲ್ಲಿ ಮಾಜಿ ಸಂಸದ ಹೆಚ್.ಹನುಮಂತಪ್ಪ

-----

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಕೋಮುವಾದಿಗಳ ಕೈಗೆ ಸಿಕ್ಕಿ ನಲುಗಿರುವ ದೇಶದಲ್ಲಿ ಕಾಂಗ್ರೆಸ್ ಕಾರ್ಯಕರ್ತರೆಂದು ಹೇಳಿಕೊಳ್ಳವುದು ಹೆಮ್ಮೆಯ ಸಂಗತಿ. ಡಾ.ಬಿ.ಆರ್.ಅಂಬೇಡ್ಕರ್ ದೇಶಕ್ಕೆ ಕೊಡುಗೆಯಾಗಿ ನೀಡಿರುವ ಸಂವಿಧಾನ ಅಪಾಯದಲ್ಲಿರುವುದರಿಂದ ರಕ್ಷಿಸುವ ಹೊಣೆಗಾರಿಕೆ ಪ್ರತಿಯೊಬ್ಬಕಾರ್ಯಕರ್ತನ ಮೇಲಿದೆ ಎಂದು ರಾಜ್ಯಸಭೆ ಮಾಜಿ ಸದಸ್ಯ ಹೆಚ್.ಹನುಮಂತಪ್ಪ ಹೇಳಿದರು.

ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸಂವಿಧಾನ ದಿನಾಚರಣೆಯಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದ ಅವರು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಕಾಂಗ್ರೆಸ್‍ಗೆ ತ್ಯಾಗ, ಬಲಿದಾನದ ಇತಿಹಾಸವಿದೆ. ದೇಶವನ್ನು ಬಡತನದಿಂದ ಮೇಲೆತ್ತಿರುವ ಪರಿಣಾಮ ಈಗ ಎಲ್ಲರ ಕೈಯಲ್ಲಿ ಹಣ ಚಲಾವಣೆಯಲ್ಲಿದೆ. ಕಾಂಗ್ರೆಸ್ ಪಕ್ಷದ ಕಾರ್ಯಕರ್ತನೆಂದು ಹೇಳಿಕೊಳ್ಳುವುದೇ ದೊಡ್ಡಸ್ಥಿಕೆ. 56 ವರ್ಷಗಳ ಕಾಲ ದೇಶವನ್ನು ಆಳಿರುವ ಕಾಂಗ್ರೆಸ್ ಪಕ್ಷ ಕೈಗಾರಿಕೆ, ನೀರಾವರಿ, ಕೃಷಿಗೆ ಒತ್ತು ಕೊಟ್ಟಿದೆ. ಕೇಂದ್ರದಲ್ಲಿ ಈಗ ಆಡಳಿತ ನಡೆಸುತ್ತಿರುವ ಕೋಮುವಾದಿ ಬಿಜೆಪಿ, ಸಂವಿಧಾನವನ್ನು ಬದಲಾವಣೆ ಮಾಡುವುದಾಗಿ ಅಧಿಕಾರಕ್ಕೆ ಬಂದಾಗಿನಿಂದಲೂ ಹೇಳುತ್ತಿದ್ದಾರೆ. ಬ್ರಿಟಿಷರ ಗುಂಡು, ಲಾಠಿ ಏಟು ತಿಂದಿರುವ ಕಾಂಗ್ರೆಸ್‍ನ ಹಿರಿಯರು ದೇಶದ ಸ್ವರಾಜ್ಯಕ್ಕಾಗಿ ಹೋರಾಡಿ ಪ್ರಾಣ ಬಿಟ್ಟಿದ್ದಾರೆ. ಇಂತಹ ಪಕ್ಷದಲ್ಲಿರುವುದೆ ನಿಮಗೊಂದು ಸರ್ಟಿಫಿಕೆಟ್ ಇದ್ದಂತೆ. ಸಂವಿಧಾನ ಅಪಾಯದಲ್ಲಿರುವುದರಿಂದ ಕಾಂಗ್ರೆಸ್‍ನವರ ಮೇಲೆ ಹೆಚ್ಚಿನ ಜವಾಬ್ದಾರಿಯಿದೆ ಎಂದು ಹನುಮಂತಪ್ಪ ಹೇಳಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್‍ಪೀರ್ ಮಾತನಾಡಿ, ಸ್ವಾತಂತ್ರ್ಯ ದಿನಾಚರಣೆ ಹಾಗೂ ಗಣರಾಜ್ಯೋತ್ಸವಕ್ಕೆ ಎಷ್ಟು ಪ್ರಾಮುಖ್ಯತೆಯಿದೆಯೋ ಅದಕ್ಕಿಂತ ಸಂವಿಧಾನವನ್ನು ಸಮರ್ಪಣೆ ಮಾಡಿದ ನ.26 ಕೂಡ ಪವಿತ್ರ ದಿನವೆಂದು ಪ್ರತಿಯೊಬ್ಬ ಭಾರತೀಯನು ತಿಳಿದುಕೊಳ್ಳಬೇಕು. ಪ್ರಪಂಚದ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶ ಭಾರತದಲ್ಲಿ ಅನೇಕ ಧರ್ಮ, ಜಾತಿ, ವಿಭಿನ್ನ ಸಂಸ್ಕೃತಿಗಳಿವೆ. ಎಲ್ಲರೂ ಐಕ್ಯತೆ ಸಹೋದರತ್ವದಿಂದ ಜೀವಿಸುತ್ತಿದ್ದಾರೆಂದರೆ ಅದಕ್ಕೆ ಡಾ.ಬಿ.ಆರ್.ಅಂಬೇಡ್ಕರ್ ಸಂವಿಧಾನದಲ್ಲಿ ಕೊಟ್ಟಿರುವ ಸಮಾನತೆಯೇ ಪ್ರಮುಖ ಕಾರಣ ಎಂದು ಹೇಳಿದರು.

ಮೂರು ವರ್ಷಗಳ ಕಾಲ ಅಧ್ಯಯನ ನಡೆಸಿ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಸಂವಿಧಾನ ಕರಡು ರಚನಾ ಸಮಿತಿಯವರು ಅತ್ಯಂತ ಬಲಿಷ್ಟವಾದ ಸಂವಿಧಾನವನ್ನು ನೀಡಿದ್ದಾರೆ. ಸಂವಿಧಾನ ದೇಶಕ್ಕೆ ಸಮರ್ಪಣೆಯಾಗಿ 75 ವರ್ಷಗಳಾಗಿರುವುದರ ಹಿಂದೆ ಕಾಂಗ್ರೆಸ್‍ನ ದೊಡ್ಡ ಕೊಡುಗೆಯಿದೆ ಎಂದು ಸ್ಮರಿಸಿದರು.

ನ್ಯಾಯವಾದಿ ಬಿಸ್ನಳ್ಳಿ ಜಯಣ್ಣ ಮಾತನಾಡಿ, ನ.26, 1949 ರಂದು ದೇಶಕ್ಕೆ ಸಂವಿಧಾನ ಸಮರ್ಪಣೆಯಾಯಿತು. ಡಾ.ಬಿ.ಆರ್.ಅಂಬೇಡ್ಕರ್ ವಿಚಾರಧಾರೆ ಹಾಗೂ ಸಂವಿಧಾನವನ್ನು ಎಲ್ಲರೂ ತಿಳಿದುಕೊಂಡಾಗ ಸಂವಿಧಾನ ಸಮರ್ಪಣಾ ದಿನ ಆಚರಿಸುತ್ತಿರುವುದಕ್ಕೆ ನಿಜವಾದ ಗೌರವ ನೀಡಿದಂತಾಗುತ್ತದೆ. ಸಂವಿಧಾನ ರಚನಾ ಸಮಿತಿಯಲ್ಲಿ ಹದಿನೈದು ಮಹಿಳೆಯರೂ ಇದ್ದರು. ಸಂವಿಧಾನ ಓದಿಕೊಂಡು ಅದರಲ್ಲಿರುವ ಮೌಲ್ಯ ತಿಳಿದುಕೊಂಡಾಗ ಮಾತ್ರ ಸದೃಢ ದೇಶ ಕಟ್ಟಲು ಸಾಧ್ಯ ಎಂದರು.

ಗ್ಯಾರೆಂಟಿ ಅನುಷ್ಟಾನ ಸಮಿತಿ ಅಧ್ಯಕ್ಷ ಆರ್.ಶಿವಣ್ಣ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಎನ್.ಬಿ.ಟಿ.ಜಮೀರ್, ಜಿಲ್ಲಾ ಕಾಂಗ್ರೆಸ್ ಕಾನೂನು ಮಾನವ ಹಕ್ಕು ಮಾಹಿತಿ ವಿಭಾಗದ ಜಿಲ್ಲಾಧ್ಯಕ್ಷ ನ್ಯಾಯವಾದಿ ಡಿ.ಎಸ್.ಸುದರ್ಶನ್, ಉಪಾಧ್ಯಕ್ಷ ಎಸ್.ಎನ್.ರವಿಕುಮಾರ್, ಪ್ರಧಾನ ಕಾರ್ಯದರ್ಶಿ ಡಿ.ಎನ್.ಮೈಲಾರಪ್ಪ, ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಎನ್.ಡಿ.ಕುಮಾರ್, ಅಲ್ಪಸಂಖ್ಯಾತರ ವಿಭಾಗದ ಅಧ್ಯಕ್ಷ ಸೈಯದ್ ಖುದ್ದೂಸ್, ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮುನಿರಾ ಎ.ಮಕಾಂದಾರ್, ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪವಿತ್ರ, ಭಾಗ್ಯಮ್ಮ, ಬಸಮ್ಮ, ಅಸಂಘಟಿತ ಕಾರ್ಮಿಕ ವಿಭಾಗದ ಜಂಟಿ ಕಾರ್ಯದರ್ಶಿ ಪರ್ವಿನ್, ವಕೀಲರಾದ ಶರಣಪ್ಪ, ಸಿ.ಎಸ್.ರವೀಂದ್ರ, ಶಶಾಂಕ್, ಎಸ್ಸಿ. ವಿಭಾಗದ ಉಪಾಧ್ಯಕ್ಷ ಡಿ.ಕುಮಾರ್

ಪಿಳ್ಳೆಕೆರನಹಳ್ಳಿ ಇದ್ದರು.

------------------

ಪೋಟೋ: ಸಂವಿಧಾನ ದಿನಾಚರಣೆ ಪ್ರಯುಕ್ತ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂವಿಧಾನದ ಪೀಠಿಕೆ ಓದಲಾಯಿತು.

---------

ಪೋಟೋ: 27 ಸಿಟಿಡಿ1

Share this article