ಮುಂಡಗೋಡ: ತಾಲೂಕಿನ ಬೆಡಸಗಾಂವ ವ್ಯವಸಾಯ ಸೇವಾ ಸಹಕಾರಿ ಸಂಘದ ನಿರ್ದೇಶಕರ ಆಯ್ಕೆ ಚುನಾವಣೆ ನಡೆದು ೨ ತಿಂಗಳ ಬಳಿಕ ಬಿಗಿ ಪೊಲೀಸ್ ಬಂದೋಬಸ್ತ್ನಲ್ಲಿ ಗುರುವಾರ ಮತ ಎಣಿಕೆ ಕಾರ್ಯ ನಡೆಸಿ, ಫಲಿತಾಂಶ ಪ್ರಕಟಿಸಲಾಯಿತು.
ಸಂಘದ ೧೧ ನಿರ್ದೇಶಕರ ಸ್ಥಾನಗಳ ಆಯ್ಕೆ ಚುನಾವಣೆ ಡಿ. ೨೪ರಂದು ನಡೆದಿತ್ತು. ಆದರೆ ಮತದಾನದ ಅನರ್ಹತೆ ಯಾದಿಯಲ್ಲಿನ ರೈತರು ಹಾಗೂ ಸಂಘದ ಕೆಲವು ಸದಸ್ಯರು ಸೇರಿದಂತೆ ಒಟ್ಟು ೨೦ ಜನರು ತಮಗೆ ಮತದಾನದ ಹಕ್ಕು ನೀಡಬೇಕೆಂದು ಧಾರವಾಡ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಅರ್ಜಿಯನ್ನು ಪರಿಶೀಲಿಸಿದ ನ್ಯಾಯಾಲಯ ೧೮ ಜನರಿಗೆ ಮತದಾನದ ಅವಕಾಶ ನೀಡಬೇಕು ಹಾಗೂ ನ್ಯಾಯಾಲಯದಿಂದ ಮುಂದಿನ ಆದೇಶ ನೀಡುವ ವರೆಗೂ ಮತ ಎಣಿಕೆ ಹಾಗೂ ಫಲಿತಾಂಶ ಪ್ರಕಟಿಸದಂತೆ ಧಾರವಾಡ ಉಚ್ಚ ನ್ಯಾಯಾಲಯ ತಡೆಯಾಜ್ಞೆ ನೀಡಿತ್ತು.ನ್ಯಾಯಾಲಯದ ಆದೇಶದಂತೆ ಅಂದು ಮತದಾನ ನಡೆಸಿ ಮತ ಪೆಟ್ಟಿಗೆಯನ್ನು ಬಿಗಿ ಪೊಲೀಸ್ ಭದ್ರತೆಯಲ್ಲಿ ಇರಿಸಲಾಗಿತ್ತು. ಸುಮಾರು ೨ ತಿಂಗಳ ಬಳಿಕ ನ್ಯಾಯಾಲಯದ ಸೂಚನೆಯಂತೆ ಗುರುವಾರ ಮತ ಎಣಿಕೆ ನಡೆಸಿ ಪಲಿತಾಂಶ ಪ್ರಕಟಿಸಲಾಗಿದೆ.
ಸಂಘಕ್ಕೆ ಆಯ್ಕೆಯಾದ ನಿರ್ದೇಶಕರ ಯಾದಿ: ಕಾಂತರಾಜ ನಾರಾಯಣ ನಾಯ್ಕ, ನಾಗರಾಜ ನಾರಾಯಣ ನಾಯ್ಕ, ವೆಂಕಟ್ರಮಣ ಸೋಮು ಮರಾಠಿ, ಮನೋಹರ ನಾರಾಯಣ ನಾಯ್ಕ, ಗಂಗಾಧರ ನಿಂಗಪ್ಪ ನಾಯ್ಕ, ಭಾರತಿ ರಾಘವೇಂದ್ರ ನಾಯ್ಕ, ಹನುಮಂತ ಗುಡ್ಡಪ್ಪ ಕಬ್ಬೂರ, ಜಯದೇವ ಹನುಮಂತ ನಾಯ್ಕ, ವಿನಾಯಕ ಶಿವಪ್ಪ ಗೌಡ, ಕಲಾವತಿ ನಾಗರಾಜ ನಾಯ್ಕ ಹಾಗೂ ಶಾಂತಾ ಭಾಸ್ಕರ ನಾಯ್ಕ ಆಯ್ಕೆಯಾಗಿದ್ದಾರೆ.ಚುನಾವಣಾಧಿಕಾರಿಯಾಗಿ ರಾಘವೇಂದ್ರ ಗುಡಿಕೇರಿ, ಸಹಾಯಕ ಚುನಾವಣಾಧಿಕಾರಿಯಾಗಿ ಸುನೀಲ ತೇಲಕರ ಹಾಗೂ ವ್ಯವಸಾಯ ಸೇವಾ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರದೀಪ ನಾಯ್ಕ ಕಾರ್ಯನಿರ್ವಹಿಸಿದರು. ಆಯ್ಕೆಯಾದ ಚುನಾಯಿತ ನಿರ್ದೇಶಕರಿಗೆ ಚುನಾವಣಾಧಿಕಾರಿಗಳು ಪ್ರಮಾಣಪತ್ರ ವಿತರಿಸಿದರು.