ಜೇನುಕೃಷಿ ಕುರಿತ ಒಂದು ದಿನದ ಕಾರ್ಯಾಗಾರದಲ್ಲಿ ಕೃಷಿ ಇಲಾಖೆ ಉಪ ನಿರ್ದೇಶಕ ಶಿವಕುಮಾರ್ಕನ್ನಡಪ್ರಭ ವಾರ್ತೆ ಚಿತ್ರದುರ್ಗ ಜೇನು ಕೃಷಿಯು ಪರಿಸರ ಸ್ನೇಹಿಯಾಗಿದ್ದು, ಕೃಷಿ ಹಾಗೂ ತೋಟಗಾರಿಕೆ ಬೆಳೆಗಳಲ್ಲಿ ಇಳುವರಿ ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ ಎಂದು ಕೃಷಿ ಇಲಾಖೆ ಉಪ ನಿರ್ದೇಶಕ ಶಿವಕುಮಾರ್ ಹೇಳಿದರು.ಹಿರಿಯೂರು ತಾಲೂಕಿನ ಬಬ್ಬೂರು ಫಾರಂ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಜೇನು ಕೃಷಿ ಕುರಿತು ರೈತರಿಗೆ ಒಂದು ದಿನದ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ದೇಶದ ಆರ್ಥಿಕ ಬೆಳವಣಿಗೆ ಹಾಗೂ ಜನರ ಆಹಾರದ ಉತ್ಪಾದನೆಯಲ್ಲಿ ಸುಸ್ಥಿರ ಕೃಷಿ ಅತ್ಯವಶ್ಯಕವಾಗಿದೆ. ಇದಕ್ಕೆ ಅನ್ನದಾತರ ಕೊಡುಗೆ ಬಹು ಮುಖ್ಯವಾಗಿದೆ. ರೈತರು ಸಮಗ್ರ ಕೃಷಿ ಪದ್ಧತಿ ಅನುಸರಿಸುವ ಮೂಲಕ ಆರ್ಥಿಕವಾಗಿ ಸಬಲರಾಗಲು ಸಾಧ್ಯ. ಈ ನಿಟ್ಟಿನಲ್ಲ ಜೇನು ಕೃಷಿಯು ಪರಿಸರಸ್ನೇಹಿಯಾಗಿದ್ದು ಇದನ್ನು ಆಳವಡಿಸಿಕೊಳ್ಳುವುದರಿಂದ ಉತ್ತಮ ಆದಾಯ ಪಡೆಯಬಹುದಾಗಿದೆ ಎಂದರು. ಹಿರಿಯೂರು ತಾಲೂಕು ಕೃಷಿ ಸಹಾಯಕ ನಿರ್ದೇಶಕ ಮಂಜನಾಥ ಮಾತನಾಡಿ, ಹಿರಿಯೂರು ತಾಲೂಕಿನಲ್ಲಿ ಬೆಳೆ ವೈವಿಧ್ಯತೆ ಇದ್ದು, ಬೆಳೆ ಪರಿವರ್ತನೆ ಬಹು ಮುಖ್ಯವಾಗಿದೆ. ಮಣ್ಣಿನ ಗುಣಧರ್ಮ ಕಾಪಾಡಲು ಸಹಕಾರಿಯಾಗಿದೆ. ಜೇನು ಕೃಷಿಯ ಪರಾಗ ಸ್ಪರ್ಷ ಕ್ರಿಯೆಯಿಂದ ಸೂರ್ಯಕಾಂತಿ, ಅಡಿಕೆ, ತೆಂಗು ಮತ್ತು ಮುಂತಾದ ಬೆಳೆಗಳಲ್ಲಿ ಉತ್ತಮ ಇಳುವರಿ ಪಡೆಯಲು ಸಾಧ್ಯವೆಂದರು.
ಸೂರ್ಯಕಾಂತಿ ಬೆಳೆಯಲ್ಲಿ ಶೇ.70 ಕ್ಕಿಂತ ಅಧಿಕ ಇಳುಪಡೆಯಲು ಜೇನು ಕೃಷಿ ಸಹಕಾರಿಯಾಗಿದೆ. ಕೃಷಿಯ ಉತ್ಪಾದನೆ ಹೆಚ್ಚಿಸುವುದಲ್ಲದೆ, ಜೇನುತುಪ್ಪವು ಅಸ್ತಮಾ, ಮಲಬದ್ದತೆ, ಗ್ಯಾಸ್ಟ್ರಿಕ್, ಸಂಧಿವಾತ ಕಾಯಿಲೆ ನಿವಾರಿಸಲು, ದೇಹದ ಬೊಜ್ಜು ಕರಗಿಸಲು ಮತ್ತು ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಮತ್ತು ಬುದ್ದಿವಂತಿಕೆಯನ್ನು ಹೆಚ್ಚಿಸಲು ಸಹಕಾರಿಯಾಗಿದೆ ಎಂದರು.
ಜೇನುತುಪ್ಪದಲ್ಲಿ ಶರೀರಕ್ಕೆ ಬೇಕಾಗುವ 45 ಪೋಷಕಾಂಶಗಳು ಸುಲಭವಾಗಿ ಜೀರ್ಣವಾಗುವ ರೂಪದಲ್ಲಿ ದೊರೆಯುತ್ತವೆ. ತಾಂತ್ರಿಕ ತರಬೇತಿಯ ನಂತರ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ ಬಬ್ಬೂರು ಫಾರಂನ ಮಾವಿನ ತೋಪಿನಲ್ಲಿ ಇದ್ದ ಜೇನು ಪೆಟ್ಟಿಗೆ ಘಟಕಕ್ಕೆ ಭೇಟಿ ನೀಡಿ, ರೈತರಿಗೆ ಜೇನು ಪಟ್ಟಿಗೆಯ ನಿರ್ವಹಣೆಯ ಪ್ರಾಯೋಗಿಕ ವಿವರ, ಜೇನು ನೊಣದ ಜೇವನಚರಿತ್ರೆ, ಜೇನು ಕುಟುಂಬದಲ್ಲಿ ರಾಣಿ ಜೇನು, ಗಂಡು ಜೇನು ನೋಣ ಮತ್ತು ಕೆಲಸಗಾರರ ಪಾತ್ರದ ಕುರಿತು ಸಮಗ್ರ ಮಾಹಿತಿ ನೀಡಿದರು.ಕಾರ್ಯಕ್ರಮದಲ್ಲಿ ಬಬ್ಬೂರು ಫಾರಂ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಾಯಕ ನಿರ್ದೇಶಕ ಆರ್.ರಜನೀಕಾಂತ್, ಕೃಷಿ ಅಧಿಕಾರಿಗಳಾದ ರಂಜಿತಾ, ಪವಿತ್ರ ಹಾಗೂ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಿಬ್ಬಂದಿ ಹಾಗೂ ರೈತರು ಇದ್ದರು.