ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ಅವರು ಪಟ್ಟಣದ ತಾಲೂಕು ಪಂಚಾಯಿತಿಯಲ್ಲಿ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ರೈತರು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡು ನಮ್ಮ ಬಳಿ ಬರುವುದನ್ನು ತಪ್ಪಿಸಿ ಅಧಿಕಾರಿಗಳು ಕೆಲಸ ಮಾಡಿಕೊಡುವುದಾದರೆ ನೇರವಾಗಿ ಹೇಳಿ, ಅದನ್ನು ಬಿಟ್ಟು ದಿನಗಟ್ಟಲೆ ರೈತರನ್ನು ಅಲೆಸಿ ಅವರ ಚಪ್ಪಲಿಯನ್ನು ಸವೆಸಬೇಡಿ ಎಂದರು.
ನಾವು ಜನರಿಂದ ಆಯ್ಕೆಯಾಗಿದ್ದೇವೆ. ನಮ್ಮದು ಐದು ವರ್ಷದ ಅಧಿಕಾರ. ಆದರೆ ಅಧಿಕಾರಿಗಳದ್ದು ಐವತ್ತು ವರ್ಷದ ಅಧಿಕಾರ. ಆ ಅಧಿಕಾರವನ್ನು ಸರಿಯಾಗಿ ಉಪಯೋಗಿಸಿ ಜನರ ಸೇವೆಗೆ ಅವಕಾಶ ಮಾಡಿಕೊಡಿ. ಆಗ ನಿಮ್ಮ ಕುಟುಂಬಗಳೂ ಚೆನ್ನಾಗಿರುತ್ತವೆ.ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರಿಗಿಂತ ಡಿ.ಗ್ರೂಪ್ ನೌಕರರು ರೋಗಿಗಳ ಹತ್ತಿರ ಹೆಚ್ಚು ದಬ್ಬಾಳಿಕೆ ನಡೆಸುತ್ತಾರೆ ಎಂದು ದೂರು ಕೂಡ ಬಂದಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ಎಲ್ಲವೂ ಸರಿಯಿಲ್ಲ. ಸ್ವಚ್ಛತೆ, ವೈದ್ಯರ ಸೇವೆ, ರೋಗಿಗಳಿಗೆ ಊಟದ ವ್ಯವಸ್ಥೆ, ಶೌಚಾಲಯಗಳು ಸ್ವಚ್ಛತೆಯಿಲ್ಲದೆ ಅನಾರೋಗ್ಯಕ್ಕೆ ಕಾರಣವಾಗಿದ್ದು, ಕೂಡಲೆ ಎಲ್ಲವನ್ನು ಸರಿಪಡಿಸಿ. ಬಡ ಜನರು ಹಣ ತಂದು ಚಿಕಿತ್ಸೆ ಪಡೆಯಲು ಇಲ್ಲಿಗೆ ಬರುವುದಿಲ್ಲ. ಆದರೆ ನಿಮ್ಮ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡದೆ ಖಾಸಗಿ ಆಸ್ಪತ್ರೆಗೆ ಕಳುಹಿಸುತ್ತಿದ್ದು ಇದರ ಬಗ್ಗೆ ಸಾಕಷ್ಟು ದೂರುಗಳು ಸಹ ಬಂದಿವೆ, ಜಿಲ್ಲೆಯಲ್ಲಿ ಸಕಲೇಶಪುರ ಬಿಟ್ಟರೆ ನಿಮ್ಮ ತಾಲೂಕಿನಲ್ಲೇ ಹೆಚ್ಚು ಸಮಸ್ಯೆಗಳಿವೆ ಎಂದು ಸರ್ಕಾರಿ ವೈದ್ಯಾಧಿಕಾರಿ ಡಾ.ವಿ.ಮಹೇಶ್ ಅವರಿಗೆ ತರಾಟೆ ತೆಗೆದುಕೊಂಡರು.
ಮಕ್ಕಳಿಗೆ ವಸತಿ ನಿಲಯಗಳಲ್ಲಿ ಸರಿಯಾದ ಊಟ ನೀಡಬೇಕು. ಮಕ್ಕಳಿಂದ ಶೌಚಾಲಯ ಸ್ವಚ್ಛಗೊಳಿಸುವುದು ಅಡುಗೆ ಕೆಲಸ ಮಾಡಿಸುವ ಪ್ರಸಂಗಗಳು ಕಂಡುಬಂದರೆ ಅಂತಹ ನಿಲಯಪಾಲಕರ ಮೇಲೆ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದರು.
ಕೃಷಿ ಇಲಾಖೆಯಿಂದ ೪.೮೦ ಕೋಟಿ ಫಸಲ್ ಭಿಮಾ ಯೋಜನೆ ಅಡಿಯಲ್ಲಿ ರೈತರಿಗೆ ಹಣ ಸಂದಾಯವಾಗಿದೆ. ಇದುವರೆಗೂ ೨೪ ಸಾವಿರ ರೈತರು ಫಸಲ್ ಭಿಮಾ ಯೋಜನೆಯ ನೋಂದಣಿ ಮಾಡಿಸಿದ್ದು, ಇಲಾಖೆಯಿಂದ ಸಮರ್ಪಕವಾಗಿ ರೈತರಿಗೆ ಯೋಜನೆಗಳನ್ನು ತಲುಪಿಸಲಾಗುತ್ತದೆ ಎಂದು ಕೃಷಿ ಅಧಿಕಾರಿ ಎಂ. ಎಸ್. ಜನಾರ್ದನ್ ತಿಳಿಸಿದರು.ಇದೇ ಸಂದರ್ಭದಲ್ಲಿ ತಹಸೀಲ್ದಾರ್ ನವೀನ್ ಕುಮಾರ್, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಹರೀಶ್, ಪುರಸಭಾ ಮುಖ್ಯಾಧಿಕಾರಿ ಹೇಮಂತ್ ಕುಮಾರ್, ಕೆಇಬಿ ಅಧಿಕಾರಿ ಅಂಬಿಕಾ ಮತ್ತಿತರಿದ್ದರು.