ಹುಬ್ಬಳ್ಳಿ:
ಮುಖ್ಯಮಂತ್ರಿ ಜಾಗದಲ್ಲಿ ಕುಳಿತಿರುವುದು ಟಗರು. ಟಗರಿಗೆ ಯಾರೂ ಟಕ್ಕರ್ ಕೊಡಲು ಸಾಧ್ಯವಿಲ್ಲ ಎಂದು ಸಚಿವ ಜಮೀರ್ ಅಹಮದ್ ಹೇಳಿದರು.ಭಾನುವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಖುರ್ಚಿ 2028ರ ವರೆಗೂ ಖಾಲಿ ಇಲ್ಲ. ಸಿದ್ದರಾಮಯ್ಯ ಅವರೇ ಸಿಎಂ ಆಗಿರಲಿದ್ದಾರೆ. ಕೆಪಿಸಿಸಿ ಹುದ್ದೆಯೂ ಖಾಲಿ ಇಲ್ಲ. 2028ಕ್ಕೆ ಡಿ.ಕೆ. ಶಿವಕುಮಾರ ಅವರು ಸಿಎಂ ಆಗಲಿ ಎನ್ನುವುದು ಅಭಿಮಾನಿಗಳು, ನನ್ನದೂ ಅಭಿಲಾಷೆ. ಅವರೂ ಪಕ್ಷಕ್ಕಾಗಿ ದುಡಿದಿದ್ದಾರೆ. ದಲಿತ ಮುಖ್ಯಮಂತ್ರಿ ಆಗಬೇಕು ಎಂಬ ಆಸೆ ನಮಗೂ ಇದೆ. ಇದು ಕೇವಲ ನಮ್ಮ ಅಭಿಪ್ರಾಯ. ಈ ಕುರಿತು ತೀರ್ಮಾನವನ್ನು ಹೈಕಮಾಂಡ್ ಮಾಡುತ್ತದೆ ಎಂದರು.
ನಾನು ಪಕ್ಷದ ಶಿಸ್ತಿನ ಸಿಪಾಯಿ. ಪಕ್ಷ ಯಾವ ಜವಾಬ್ದಾರಿ ನೀಡುತ್ತೋ ಅದನ್ನು ನಿಭಾಯಿಸುತ್ತೇನೆ. ಪಕ್ಷ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಪಕ್ಷದ ಕೆಲಸ ಮಾಡು ಎಂದರೆ ಅದಕ್ಕೂ ಸಿದ್ಧನಿದ್ದೇನೆ ಎಂದ ಅವರು, ದಲಿತರ ಸಮಾವೇಶ ಮಾಡಲಿ, ಅದಕ್ಕೆ ನಮ್ಮ ಬೆಂಬಲವಿದೆ, ನಾವೂ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದೇವೆ. ನಾನು ಅಲ್ಪಸಂಖ್ಯಾತ ಸಮಾವೇಶ ಮಾಡಿದ್ದೇನೆ. ಎಲ್ಲ ಸಮಾಜಗಳಿಗೂ ಕಾರ್ಯಕ್ರಮ ಮಾಡುವ ಆಸೆ ಇರುತ್ತದೆ. ಆ ಕಾರ್ಯಕ್ರಮಕ್ಕೆ ನಮ್ಮೆಲ್ಲರ ಬೆಂಬಲವಿದೆ. ಈ ಸಮಾವೇಶ ಯಾವುದೇ ಸಂದೇಶ ನೀಡಲು ಅಲ್ಲ ಎಂದರು.ಅಬ್ಬಯ್ಯ ಮಂತ್ರಿಯಾಗಲಿ:
ಸಚಿವ ಸಂಪುಟ ವಿಸ್ತರಣೆಯಲ್ಲಿ ಪ್ರಸಾದ ಅಬ್ಬಯ್ಯ ಅವರಿಗೆ ಸಚಿವ ಸ್ಥಾನ ಸಿಗಲಿದೆಯೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಅಬ್ಬಯ್ಯ 3ನೇ ಬಾರಿ ಶಾಸಕರಾಗಿದ್ದಾರೆ. ಅವರು ಈ ಬಾರಿ ಮಂತ್ರಿಯಾಗಲೇಬೇಕು ಎನ್ನುವುದು ಬಹಳ ಜನರ ಆಸೆ. ನಾವು ಸಚಿವರಾಗಲಿ ಎಂದು ಹೇಳಬಹುದು. ಅಂತಿಮವಾಗಿ ಹೈಕಮಾಂಡ್ ನಿರ್ಧಾರ ಮಾಡಲಿದೆ. ಅಬ್ಬಯ್ಯ ಅವರನ್ನು ಸಚಿವರನ್ನಾಗಿ ಮಾಡುವುದಾದರೆ ನನ್ನದೇ ಸಚಿವ ಸ್ಥಾನ ಬಿಟ್ಟುಕೊಡುತ್ತೇನೆ ಎಂದರು.ರಾಜ್ಯದಲ್ಲಿ ಗ್ಯಾರಂಟಿ ಟೀಕಿಸಿದ್ದ ಬಿಜೆಪಿ ಬಿಹಾರದಲ್ಲಿ ಗ್ಯಾರಂಟಿ ಕೊಟ್ಟು ಖಾತೆಗೆ ನೇರವಾಗಿ ಹಣ ಹಾಕಿದೆ. ಮಹಾರಾಷ್ಚ್ರದಲ್ಲೂ ಅನೇಕ ಭರವಸೆ ನೀಡಿ, ಅವುಗಳಲ್ಲಿ ಬಹಳಷ್ಟು ಸೌಲಭ್ಯಗಳನ್ನು ನಿಲ್ಲಿಸಿದ್ದಾರೆ. ಚುನಾವಣೆ ವೇಳೆಯಲ್ಲಿ ಮಾತ್ರ ಇವರಿಗೆ ಬಡವರ ನೆನಪಾಗುತ್ತದೆ. ಆ ಮೂಲಕ ಜನರಿಗೆ ಮೋಸ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.ನಾವು ಚುನಾವಣೆಯಲ್ಲಿ ನಮ್ಮ ಪಕ್ಷದ ಸಾಧನೆ ಹೇಳಿಕೊಳ್ಳುತ್ತೇವೆ. ಆದರೆ ಬಿಜೆಪಿಯವರು ಯಾವಗಲಾದರೂ ತಮ್ಮ ಸಾಧನೆ ಹೇಳಿದ್ದಾರಾ? ಅವರ ಸಾಧನೆ ಸೊನ್ನೆ. ಬರೀ ಹಿಂದೂ-ಮುಸ್ಲಿಂ ಎನ್ನುತ್ತಾರೆ. ಅವರಿಗೆ ಹಿಂದೂನೂ ಬೇಡ, ಮುಸ್ಲಿಮರೂ ಬೇಡ, ಖುರ್ಚಿ ಮಾತ್ರ ಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.ಬಿಜೆಪಿಗರಿಗೆ ಕೆಲಸವಿಲ್ಲದೆ ಸಿಎಂ ಬದಲಾವಣೆ ಕುರಿತು ಇಲ್ಲಸಲ್ಲದ ಹೇಳಿಕೆ ನೀಡುತ್ತಿದ್ದಾರೆ. ಅವರ ಪಕ್ಷದಲ್ಲಿ ಮೊದಲು ಮೂರು ಗುಂಪಿತ್ತು. ಇದೀಗ ಐದಾಗಿದೆ. ಮೊದಲು ಅವರ ಪಕ್ಷದಲ್ಲಿ ಒಡಕು ಸರಿಪಡಿಸಿಕೊಳ್ಳಲಿ.
ಜಮೀರ್ ಅಹಮದ್ ಸಚಿವ