ಬೆಂಗಳೂರು : ತುರ್ತು ಕಾಮಗಾರಿ ಹಿನ್ನೆಲೆಯಲ್ಲಿ ಜೂ.19ರ ಗುರುವಾರ ಬೆಳಗ್ಗೆ 6 ರಿಂದ ಜೂ.20ರ ಶುಕ್ರವಾರ ಬೆಳಗ್ಗೆ 6ರವರೆಗೆ ಇಡೀ ಬೆಂಗಳೂರಿಗೆ ನೀರಿನ ಪೂರೈಕೆ ಇರುವುದಿಲ್ಲ. ಅಗತ್ಯವಿರುವ ನೀರಿನ ಸಂಗ್ರಹಣೆ ಮಾಡಿಕೊಳ್ಳುವಂತೆ ಬೆಂಗಳೂರು ಜಲಮಂಡಳಿ ಕೋರಿದೆ.
ಟಿ.ಕೆ. ಹಳ್ಳಿಯಲ್ಲಿ ಕಾವೇರಿ 5ನೇ ಹಂತದ ಕೊಳವೆ ಮಾರ್ಗಕ್ಕೆ ಹೊಸ ಮೂರು ಸಾವಿರ ಮಿ.ಮೀ. ವ್ಯಾಸ ಕೊಳವೆ ಮಾರ್ಗದ ಜೋಡಣೆ ಹಾಗೂ ಕೆಪಿಟಿಸಿಎಲ್ನ ವಿದ್ಯುತ್ ಘಟಕಗಳ ವಾರ್ಷಿಕ ನಿರ್ವಹಣೆ, ತುರ್ತುನಿರ್ವಹಣಾ ಕಾಮಗಾರಿ ಕೈಗೊಳ್ಳುವ ಕಾವೇರಿ ನೀರು ಸರಬರಾಜು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗುತ್ತಿದೆ. ಕಾವೇರಿ ಯೋಜನೆಯ 1ನೇ ಹಂತದಿಂದ 5ನೇ ಹಂತದವರೆಗಿನ ಎಲ್ಲಾ ಜಲರೇಚಕ ಯಂತ್ರಾಗಾರಗಳನ್ನು ಸ್ಥಗಿತಗೊಳಿಸಲಾಗುತ್ತಿದೆ.
ಇದರಿಂದ ಬೆಂಗಳೂರು ನಗರದಲ್ಲಿ ಕಾವೇರಿ ನೀರಿನ ಸರಬರಾಜಿನಲ್ಲಿ ವ್ಯತ್ಯಯವಾಗಲಿರುವುದರಿಂದ ನಾಗರಿಕರು, ವಾಣಿಜ್ಯ, ಕೈಗಾರಿಕಾ ಪ್ರದೇಶಗಳಿಗೆ ಮುಂಜಾಗ್ರತೆಯಾಗಿ ಅಗತ್ಯವಿರುವ ನೀರನ್ನು ಸಂಗ್ರಹಣೆ ಮಾಡಿಕೊಳ್ಳುವಂತೆ ತಿಳಿಸಲಾಗಿದೆ.