;Resize=(412,232))
ಬೆಂಗಳೂರು : ನಗರದ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆಗೆ ಪೂರ್ವಸಿದ್ಧತೆ ಪೂರ್ಣಗೊಂಡಿದ್ದು, 1500 ಮಕ್ಕಳಿಂದ ನೃತ್ಯ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದ ಭದ್ರತೆಗೆ 1100 ಮಂದಿ ಪೊಲೀಸರ ನಿಯೋಜನೆ ಜೊತೆಗೆ 110 ಸಿಸಿಟಿವಿ ಕ್ಯಾಮರಾ ಕಣ್ಗಾವಲು ಇಡಲಾಗಿದೆ.
ಶುಕ್ರವಾರ ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಹಾಗೂ ಜಿಬಿಎ ಆಯುಕ್ತ ಮಹೇಶ್ವರರಾವ್ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಈ ವಿವರ ನೀಡಿ, ಧ್ವಜಾರೋಹಣ, ಕವಾಯತು ಹಾಗೂ ಸಾಂಸ್ಕೃತಿಕ ಸಮಾರಂಭದ ಉದ್ಘಾಟನೆಯನ್ನು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೆರವೇರಿಸಲಿದ್ದಾರೆ ಎಂದು ತಿಳಿಸಿದರು.
ಗೌರವರಕ್ಷೆ ಸ್ವೀಕರಿಸಲು ಕೆಎಸ್ ಆರ್ ಪಿ, ಸಿಆರ್ ಪಿಎಫ್,ಬಿಎಸ್ಎಫ್, ಸಿಎಆರ್, ಗೋವಾ ಪೊಲೀಸ್, ಕೆಎಸ್ ಐಎಸ್ಎಫ್, ಟ್ರಾಫಿಕ್ ಪೊಲೀಸ್, ಮಹಿಳಾ ಪೊಲೀಸ್, ಹೋಂ ಗಾರ್ಡ್ಸ್, ಟ್ರಾಫಿಕ್ ವಾರ್ಡನ್, ಅಗ್ನಿಶಾಮಕ ದಳ ಸಿಬ್ಬಂದಿ, ಶ್ವಾನದಳ, ಬ್ಯಾಂಡ್, ವಿಶೇಷ ಅತಿಥಿ ತುಕಡಿಯಾಗಿ ತೆಲಂಗಾಣ ರಾಜ್ಯ ಪೊಲೀಸ್ ಪಡೆ, ರಮಣ ಮಹರ್ಷಿ ಶಾಲೆ ಹಾಗೂ ಸಮರ್ಥನಂ ಶಾಲೆಯ ಅಂಗವಿಕಲ ವಿದ್ಯಾರ್ಥಿಗಳು ಒಟ್ಟು 37 ತುಕಡಿಗಳಲ್ಲಿ ಸುಮಾರು 1,360 ಮಂದಿ ಭಾಗಿಯಾಗಲಿದ್ದಾರೆ.
ಶಾಲಾ ಹಾಗೂ ಕಾಲೇಜು ವಿದ್ಯಾರ್ಥಿಗಳಿಂದ ಒಟ್ಟು ಮೂರು ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು, ಸುಮಾರು 2200 ಮಕ್ಕಳು ಭಾಗವಹಿಸಲಿದ್ದಾರೆ.
ನಗರದ ಎಲ್ಲ ವಿಭಾಗಗಳಿಂದ ಪೊಲೀಸ್ ಅಧಿಕಾರಿ, ಸಿಬ್ಬಂದಿಯನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜಿಸಲಾಗಿದೆ. ಸಂಚಾರ ನಿರ್ವಹಣೆಗಾಗಿ 1583 ಅಧಿಕಾರಿ ಹಾಗೂ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಮೈದಾನದ ಒಳ ಮತ್ತು ಹೊರ ಭಾಗದಲ್ಲಿ ಒಟ್ಟು 110 ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ ಎಂದು ವಿವರಿಸಿದರು.
ಕಾರ್ಯಕ್ರಮವನ್ನು ವೀಕ್ಷಿಸಲು ಸುಮಾರು 8000 ಜನ ಆಗಮಿಸಲಿದ್ದು, ಈ ಪೈಕಿ ಅತಿಗಣ್ಯರು, ಗಣ್ಯರು, ಇತರೇ ಆಹ್ವಾನಿತರು ಹಾಗೂ ಸಾರ್ವಜನಿಕರಿಗೆ ಪ್ರತ್ಯೇಕವಾಗಿ ಆಸನ ವ್ಯವಸ್ಥೆ ಕಲ್ಪಿಸಲಾಗಿದೆ. 576 ಇ-ಪಾಸ್ ಆನ್ಲೈನ್ ಮೂಲಕ ನೀಡಲಾಗಿದೆ. ಕಾರ್ಯಕ್ರಮಕ್ಕೆ ಆಗಮಿಸುವವರು ಪ್ರವೇಶ ದ್ವಾರದಲ್ಲಿ ಆಹ್ವಾನ ಪತ್ರಿಕೆಯೊಂದಿಗೆ ಕಡ್ಡಾಯವಾಗಿ ಅರ್ಹ ಗುರುತಿನ ಚೀಟಿಯೊಂದಿಗೆ ಹಾಜರಾಗತಕ್ಕದ್ದು. ಸಾರ್ವಜನಿಕರಿಗಾಗಿ ಇರುವ ವೀಕ್ಷಣಾ ಗ್ಯಾಲರಿಯನ್ನು ವಿಸ್ತರಿಸಿ ಹೆಚ್ಚು ಸಾರ್ವಜನಿಕರು ಕಾರ್ಯಕ್ರಮ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ.
ನಾಡಗೀತೆ ಮತ್ತು ರೈತ ಗೀತೆ, ವಂದೇ ಮಾತರಂ ಶಾಂತಿ ಮಂತ್ರ ನೃತ್ಯ ರೂಪಕವನ್ನು ಧಣಿಸಂದ್ರದ ಸರ್ಕಾರಿ ಪ್ರೌಢ ಶಾಲೆಯ ಮಕ್ಕಳು ಪ್ರದರ್ಶಿಸಲಿದ್ದಾರೆ. ಸ್ವಾತಂತ್ರ್ಯ ಸಂಗ್ರಾಮದ ವೈಭವ ಕಾರ್ಯಕ್ರಮ ಪಿಳ್ಳಣ್ಣ ಗಾರ್ಡನ್ನ ಬೆಂಗಳೂರು ಉತ್ತರ ನಗರ ಪಾಲಿಕೆ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಸುಮಾರು 750 ವಿದ್ಯಾರ್ಥಿಗಳಿಂದ ಪ್ರಸ್ತುತ ಪಡಿಸಲಿದ್ದಾರೆ. ಅಕ್ಕ ಪಡೆಯ ಕಾರ್ಯಕ್ರಮ ಬೀದರ್ ಜಿಲ್ಲೆಯ 70 ಮಹಿಳಾ ಸಿಬ್ಬಂದಿ ಹಾಗೂ ಬೆಂಗಳೂರು ನಗರದ 100 ಮಹಿಳಾ ಪೊಲೀಸ್ ಸಿಬ್ಬಂದಿಗಳ ಜಂಟಿ ತಂಡ ಪ್ರದರ್ಶಿಸಲಿದೆ. ಭಾರತ ಜೋಡೋ ಯುವ ಸಂಘ ಯೋಜನೆ ಕಾರ್ಯಕ್ರಮದಲ್ಲಿ ಶೇಷಾದ್ರಿಪುರಂ, ರಾಜೀವ್ ಗಾಂಧಿ ಯೂನಿವರ್ಸಿಟಿ, ರೇವಾ ಯೂನಿವರ್ಸಿಟಿ, ಬೆಂಗಳೂರು ಸಿಟಿ ಯೂನಿವರ್ಸಿಟಿ ಹಾಗೂ ವಿ.ಟಿ.ಯು ಕಾಲೇಜುಗಳ ಒಟ್ಟು ಸುಮಾರು 600 ವಿದ್ಯಾರ್ಥಿಗಳು ಭಾಗಿಯಾಗಲಿದ್ದಾರೆ.