ಇನ್ನು ಶಾಲೆ ವಿದ್ಯಾರ್ಥಿಗಳಿಗೆ ಪ್ರತಿದಿನ ಮೊಟ್ಟೆ: 4 ದಿನ ಅಜೀಂ ಪ್ರೇಮ್‌ಜೀ ಪ್ರತಿಷ್ಠಾನದಿಂದ ವಿತರಣೆ

Published : Jul 21, 2024, 12:49 PM IST
egg yolk

ಸಾರಾಂಶ

ಶಾಲಾ ಮಕ್ಕಳಿಗೆ ಸಮಾನ ಮತ್ತು ಗುಣಮಟ್ಟದ ಶಿಕ್ಷಣ ನೀಡುವ ಜೊತೆಗೆ ಉತ್ತಮ ಆರೋಗ್ಯವನ್ನು ನೀಡು ವುದು ಸರ್ಕಾರದ ಬದ್ಧತೆಯಾಗಿದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಬೆಂಗಳೂರು   : ಶಾಲಾ ಮಕ್ಕಳಿಗೆ ಸಮಾನ ಮತ್ತು ಗುಣಮಟ್ಟದ ಶಿಕ್ಷಣ ನೀಡುವ ಜೊತೆಗೆ ಉತ್ತಮ ಆರೋಗ್ಯವನ್ನು ನೀಡು ವುದು ಸರ್ಕಾರದ ಬದ್ಧತೆಯಾಗಿದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ನಗರದ ಖಾಸಗಿ ಹೊಟೇಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ 'ಅಜೀಂ ಪ್ರೇಮ್‌ಜೀ ಪ್ರತಿಷ್ಠಾನ -ರಾಜ್ಯ ಸರ್ಕಾರದ ನಡುವೆ 3 ವರ್ಷಗಳ ಅವಧಿಗೆ ಪೂರಕ ಪೌಷ್ಠಿಕ ಆಹಾರ ವಿತರಣೆ ಒಪ್ಪಂದ ದಾಖಲೆಗಳ ವಿನಿಮಯದ ಬಳಿಕ ಮುಖ್ಯಮಂತ್ರಿಯವರು ಮಾತನಾಡಿದರು.

ರಾಜ್ಯದ 53,080 ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಸುಮಾರು 55 ಲಕ್ಷ ಮಕ್ಕಳಿಗೆ ವಾರಕ್ಕೆ ನಾಲ್ಕು ದಿನ ಪೂರಕ ಪೌಷ್ಠಿಕ ಆಹಾರ ನೀಡಲು ಮುಂದೆ ಬಂದಿರುವ ಅಜೀಂ ಪ್ರೇಮ್‌ಜೀ ಪ್ರತಿಷ್ಠಾನದ ಅಧ್ಯಕ್ಷ ಅಜೀಂ ಪ್ರೇಮ್‌ಜೀ ಅವರದ್ದು ದೊಡ್ಡ ಮನಸ್ಸು. ಪ್ರೇಮ್‌ಜೀ ಮತ್ತು ಕುಟುಂಬಕ್ಕೆ ಸರ್ಕಾರದ ಪರವಾಗಿ ಧನ್ಯವಾದ. ಇಂತಹ ಅನೇಕ ಜನಪರ ಕೆಲಸಗಳು, ದಾನ ಧರ್ಮ ಕಾರ್ಯಗಳನ್ನು ಮಾಡುತ್ತಾ ಬಂದಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಆರೋಗ್ಯ ಚೆನ್ನಾಗಿದ್ದರೆ ಶಿಕ್ಷಣ ತಲೆಗೆ ಹತ್ತುತ್ತದೆ. ಆರೋಗ್ಯ ಚೆನ್ನಾಗಿರಲು ಪೌಷ್ಠಿಕ ಆಹಾರ ಸೇವಿಸ ಬೇಕಾಗುತ್ತದೆ.

ಅದಕ್ಕಾಗಿ ಮಕ್ಕಳಿಗೆ ಮಧ್ಯಾಹ್ನದ ಊಟದ ಜೊತೆಗೆ ವಾರಕ್ಕೆ 2 ದಿನ ಮೊಟ್ಟೆ, ಚಿಕ್ಕಿ ಬಾಳೆ ಹಣ್ಣು ನೀಡಲಾಗುತ್ತಿತ್ತು. ಇನ್ನು ಮುಂದೆ ಪ್ರೇಮ್‌ ಜೀ ಫೌಂಡೇಷನ್ ನೆರವಿನಿಂದ ವಾರದ ನಾಲ್ಕು ದಿನ ಸೇರಿಸಿದರೆ ವಾರದ ಎಲ್ಲಾ ದಿನವೂ ಪೂರಕ ಪೌಷ್ಠಿಕ ಆಹಾರ ಲಭಿಸಲಿದೆ. ಎಲ್ಲಾ ಮಕ್ಕಳಿಗೆ ಒಳ್ಳೆಯ ಆಹಾರ ಸಿಗಬೇಕು ಎಂಬುದು ನಮ್ಮ ಸರ್ಕಾರದ ಆಶಯ. ಅದಕ್ಕಾಗಿಯೇ ಈ ಹಿಂದೆ ಸಿಎಂ ಆಗಿದ್ದಾಗ ಮಕ್ಕಳಿಗೆ ಹಾಲು, ಶೂ ಭಾಗ್ಯ ಆರಂಭಿಸಲಾಗಿತ್ತು ಎಂದು ಮುಖ್ಯಮಂತ್ರಿ ಹೇಳಿದರು. ಅಜೀಂ ಪ್ರೇಮ್‌ಜೀ ಮಾತನಾಡಿ, ಸರ್ಕಾರದ ಜೊತೆ ನಮ್ಮ ಸಹಯೋಗ ಕಳೆದ 30 ವರ್ಷಗಳಿಂದ ಇದೆ.

ಅದರಿಂದ ಸಮಾಜಕ್ಕೆ ಸಾಧ್ಯವಾದಷ್ಟು ಒಳಿತು ಮಾಡುವಪ್ರಯತ್ನ ಮಾಡಲಾಗಿದೆ.ಈಗಮತ್ತೊಂದು ಹೊಸ ಯೋಜನೆಯ ಮೂಲಕ ಮಕ್ಕಳಲ್ಲಿ ಪೌಷ್ಠಿಕತೆ ಪ್ರಮಾಣ ಉತ್ತಮಗೊಳಿಸುವುದು ನಮ್ಮ ಉದ್ದೇಶ ವಾಗಿದೆ. ಇದರಿಂದ ಮಕ್ಕಳ ಬೆಳವಣಿಗೆ ಮತ್ತು ಭವಿಷ್ಯಕ್ಕೆ ಅನುಕೂಲವಾಗುತ್ತದೆ ಎಂದು ಹೇಳಿದರು. ಸಚಿವ ಮಧು ಬಂಗಾರಪ್ಪ ಮಾತನಾಡಿದರು. ಕಾರ್ಯಕ್ರಮದಲ್ಲಿ ಯಾಸ್ಮಿನ್ ಪ್ರೇಮ್‌ಜೀ, ಶಾಸಕರಾದ ರಿಜ್ವಾನ್ ಅರ್ಷದ್, ನಜೀರ್‌ಅಹ್ಮದ್, ಶಾಲಾ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ರಿತೀಶ್ ಕುಮಾರ್‌ಸಿಂಗ್ ಉಪಸ್ಥಿತರಿದ್ದರು.

1,500 ಕೋಟಿ ರು. ವೆಚ್ಚ: ಪೂರಕ ಪೌಷ್ಠಿಕ ಆಹಾರ ನೀಡಲು 3 ವರ್ಷಗಳಿಗೆ ಅಜೀಂ ಪ್ರೇಮ್‌ಜಿ ಫೌಂಡೇಷನ್‌ಗೆ ಸುಮಾರು 1500 ರು. ಖರ್ಚಾಗಲಿದೆ ಎಂದು ಅಂದಾಜಿಸಲಾಗಿದೆ. ಮೊಟ್ಟೆ ಸೇವಿಸದ ಮಕ್ಕಳಿಗೆ ಬಾಳೆಹಣ್ಣು ಅಥವಾ ಶೇಂಗಾ ಚಿಕ್ಕಿ ನೀಡಲಾಗುತ್ತದೆ.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.

Recommended Stories

ಕೋಗಿಲು ನಿರಾಶ್ರಿತರಿಗೆ 5ರ ನಂತರ ವಸತಿ ಭಾಗ್ಯ
ಹೊಸ ವರ್ಷಕ್ಕೆ ಶೇ.40 ಮದ್ಯ ಮಾರಾಟ ಹೆಚ್ಚಳ!