ನಿಮ್ಮ ಮನೆಯ ಮುಂಭಾಗದ ಗೇಟ್ ತೆರೆದರೆ ಅದು ಪಾದಚಾರಿ ಮಾರ್ಗಕ್ಕೆ ಅಡ್ಡವಾಗುತ್ತಿದ್ದರೆ ಈಗಲೇ ಸರಿಪಡಿಸಿಕೊಂಡು ಬಿಡಿ, ಇಲ್ಲವಾದರೆ ಬಿಬಿಎಂಪಿಯ ಅಧಿಕಾರಿಗಳು ದಂಡ ವಿಧಿಸಲಿದ್ದಾರೆ.
ಬೆಂಗಳೂರು : ನಿಮ್ಮ ಮನೆಯ ಮುಂಭಾಗದ ಗೇಟ್ ತೆರೆದರೆ ಅದು ಪಾದಚಾರಿ ಮಾರ್ಗಕ್ಕೆ ಅಡ್ಡವಾಗುತ್ತಿದ್ದರೆ ಈಗಲೇ ಸರಿಪಡಿಸಿಕೊಂಡು ಬಿಡಿ, ಇಲ್ಲವಾದರೆ ಬಿಬಿಎಂಪಿಯ ಅಧಿಕಾರಿಗಳು ದಂಡ ವಿಧಿಸಲಿದ್ದಾರೆ.
ನಗರದ ಬಹುತೇಕ ಮನೆ ಸೇರಿದಂತೆ ಮೊದಲಾದ ಕಟ್ಟಡಗಳಲ್ಲಿ ಸ್ಥಳಾವಕಾಶದ ಕೊರತೆಯಿಂದ ಗೇಟ್ಗಳನ್ನು ಹೊರಭಾಗದ ಪಾದಚಾರಿ ಮಾರ್ಗದ ಕಡೆ ಮಾತ್ರ ತೆರೆಯುವುದಕ್ಕೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಈ ರೀತಿ ಗೇಟ್ ತೆಗೆಯುವುದರಿಂದ ಪಾದಚಾರಿಗಳ ಓಡಾಟಕ್ಕೆ ತೊಂದರೆ ಉಂಟಾಗಲಿದೆ ಎಂಬ ಕಾರಣಕ್ಕೆ ಬಿಬಿಎಂಪಿಯು ಇದೀಗ ದಂಡ ವಿಧಿಸುವಂತೆ ಬಿಬಿಎಂಪಿಯ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಶನಿವಾರ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಮಹದೇವಪುರ ವಲಯದಲ್ಲಿ ವಿವಿಧ ಕಡೆ ಶನಿವಾರ ಪರಿಶೀಲನೆ ವೇಳೆ ಈ ಸೂಚನೆ ನೀಡಿದರು. ಅಲ್ಲದೆ, ಪಾಲಿಕೆಯ ರಸ್ತೆ ಮೂಲ ಸೌಕರ್ಯ ವಿಭಾಗ, ಟ್ರಾಫಿಕ್ ಎಂಜಿನಿಯರಿಂಗ್ ಕೋಶ, ಒಎಫ್ಸಿ ಮತ್ತು ವಿದ್ಯುತ್ ವಿಭಾಗ ಒಟ್ಟಾಗಿ ‘ಸಮಗ್ರ ಸಂಚಾರಿ ವಿಭಾಗ’ ರಚಿಸಿಕೊಂಡು ರಸ್ತೆ ಮತ್ತು ಪಾದಚಾರಿ ಪಥಗಳ ಅಭಿವೃದ್ಧಿ ಹಾಗೂ ನಿರ್ವಹಣೆ ಹೊಣೆ ಹೊರುವಂತೆ ಸೂಚಿಸಿದರು.
ದಂಡ ವಿಧಿಸಲು ಸೂಚನೆ
ಗ್ರಾಫೈಟ್ ಇಂಡಿಯಾ ಮುಖ್ಯ ರಸ್ತೆಯ ರಾಯಲ್ ಬಿಲ್ಡಿಂಗ್ ಹೌಸ್ ಅಂಗಡಿಯ ತ್ಯಾಜ್ಯವನ್ನು ಪಾದಚಾರಿ ಮಾರ್ಗಕ್ಕೆ ಹಾಕಿರುವುದರಿಂದ ಪಾದಚಾರಿ ಸಂಚಾರಕ್ಕೆ ಅಡಚಣೆಯಾಗಿದೆ. ತೆರವುಗೊಳಿಸಿ ಜತೆಗೆ ಕಸ ಹಾಕಿದವರಿಗೆ ದಂಡ ವಿಧಿಸಲು ಸೂಚಿಸಿದರು.
ಪಾದಚಾರಿ ಮಾರ್ಗ ಖಾಸಗಿ ನಿರ್ವಹಣೆ ಅವಕಾಶ
ನಗರದಲ್ಲಿರುವ ಖಾಸಗಿ ಸಂಸ್ಥೆ, ಅಪಾರ್ಟ್ಮೆಂಟ್ ಕಾಂಪ್ಲೆಕ್ಸ್ ಸೇರಿದಂತೆ ಖಾಸಗಿ ಸಂಸ್ಥೆಗಳು ತಮ್ಮ ಆವರಣದ ಮುಂಭಾಗದಲ್ಲಿರುವ ಪಾದಾಚಾರಿ ಮಾರ್ಗಗಳನ್ನು ತಾವೇ ಸ್ವಯಂ ಪ್ರೇರಿತವಾಗಿ ಅಭಿವೃದ್ಧಿಪಡಿಸಿ, ನಿರ್ವಹಣೆ ಮಾಡಿಕೊಳ್ಳುವುದಕ್ಕೆ ಅವಕಾಶ ನೀಡುವುದಕ್ಕೆ ಸಂಬಂಧಿಸಿಂತೆ ಆದೇಶ ಹೊರಡಿಸುವುದಕ್ಕೆ ಅಧಿಕಾರಿಗಳಿಗೆ ಅವರು ಸೂಚಿಸಿದರು.ಪರಿಶೀಲನೆ ವೇಳೆ ವಲಯ ಆಯುಕ್ತ ರಮೇಶ್ ಸೇರಿದಂತೆ ಮೊದಲಾದ ಅಧಿಕಾರಿಗಳು ಉಪಸ್ಥಿತರಿದ್ದರು.