ರಾಜಧಾನಿ ಬೆಂಗಳೂರಿನಲ್ಲಿ ಹಿಂದಿ ಸೇರಿದಂತೆ ಪರಭಾಷಿಕರ ಮತ್ತು ಕನ್ನಡ, ಕನ್ನಡಿಗರ ನಡುವಣ ಬಿಕ್ಕಟ್ಟು ಹೆಚ್ಚಾಗುತ್ತಿದ್ದು, ವಲಸಿಗರು ಅದರಲ್ಲೂ ವಿಶೇಷವಾಗಿ ಉತ್ತರ ಭಾರತೀಯರ ಸಂಖ್ಯಾಬಲ ವಿಪರೀತ ಹೆಚ್ಚಾಗುತ್ತಿದೆ.
ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ಹಿಂದಿ ಸೇರಿದಂತೆ ಪರಭಾಷಿಕರ ಮತ್ತು ಕನ್ನಡ, ಕನ್ನಡಿಗರ ನಡುವಣ ಬಿಕ್ಕಟ್ಟು ಹೆಚ್ಚಾಗುತ್ತಿದ್ದು, ವಲಸಿಗರು ಅದರಲ್ಲೂ ವಿಶೇಷವಾಗಿ ಉತ್ತರ ಭಾರತೀಯರ ಸಂಖ್ಯಾಬಲ ವಿಪರೀತ ಹೆಚ್ಚಾಗುತ್ತಿದೆ. ಪರಿಸ್ಥಿತಿ ಇದೇ ರೀತಿ ಮುಂದುವರೆದರೆ ತಮ್ಮ ರಾಜ್ಯದ ರಾಜಧಾನಿಯಲ್ಲೇ ಕನ್ನಡಿಗರು ಅಲ್ಪಸಂಖ್ಯಾತರಾಗಿ ಪರಿವರ್ತಿತರಾಗಬಹುದು.
ಅಷ್ಟೇ ಅಲ್ಲ, ಸರ್ಕಾರ ಹಾಗೂ ಕನ್ನಡ ಜನ ಮಾನಸ ಒಗ್ಗೂಡಿ ಕನ್ನಡತನ ಉಳಿಸಿಕೊಳ್ಳುವ ಪ್ರಯತ್ನ ಮಾಡದಿದ್ದರೆ ಸ್ಥಳೀಯ ಉದ್ಯೋಗ, ವ್ಯಾಪಾರ ಸೇರಿದಂತೆ ಪ್ರತಿಯೊಂದು ಅವಕಾಶಗಳಿಂದಲೂ ಕನ್ನಡಿಗರು ವಂಚಿತರಾಗಿ ನಗರದಲ್ಲಿ ಇದ್ದ ಕನ್ನಡ ಸಂಸ್ಕೃತಿ ಸಂಪೂರ್ಣವಾಗಿ ನಶಿಸುವ ಭೀತಿ ಎದುರಾಗಬಹುದು ಎಂದು ಕನ್ನಡದ ಬುದ್ದಿಜೀವಿಗಳು ಹಾಗೂ ಹೋರಾಟಗಾರರು ಎಚ್ಚರಿಕೆ ನೀಡುತ್ತಿದ್ದಾರೆ.
ಇದಕ್ಕೆ ಪೂರಕವಾಗಿ ಕಳೆದ ಮೂರು ದಶಕದಲ್ಲಿ ಬೆಂಗಳೂರಿನ ಕನ್ನಡಿಗರು ಹಾಗೂ ಕನ್ನಡೇತರರ ಸಂಖ್ಯೆಯನ್ನು ಹೋಲಿಸಿದರೆ ಆಘಾತವಾಗುವಷ್ಟು ಹೊರಗಿನವರ ಅದರಲ್ಲೂ ವಿಶೇಷವಾಗಿ ಉತ್ತರ ಭಾರತೀಯರ ಸಂಖ್ಯೆ ಬೆಳೆದಿರುವುದು ಮೇಲು ನೋಟಕ್ಕೆ ಕಾಣುತ್ತಿದೆ. ಈ ಬಗ್ಗೆ ಅಧಿಕೃತ ಅಂಕಿ-ಅಂಶ ಲಭ್ಯವಿಲ್ಲದಿದ್ದರೂ ಕನ್ನಡಿಗರ ಸಂಖ್ಯೆ ಶೇ.40ರಿಂದ 45ಕ್ಕೆ ಇಳಿದಿದ್ದು, ಪರಭಾಷಿಕರ ಸಂಖ್ಯೆ ಅದರಲ್ಲೂ ಹಿಂದಿವಾಲಾಗಳ ಸಂಖ್ಯೆ ರಾಕೆಟ್ ವೇಗದಲ್ಲಿ ಹೆಚ್ಚುತ್ತಿದೆ ಎಂದೇ ಹೇಳಲಾಗುತ್ತಿದೆ.
ಯಾವುದೇ ಭಾಷೆಯು ಕೇವಲ ಸಂವಹನಕ್ಕೆ ಮಾತ್ರ ಸೀಮಿತವಾಗಿರುವುದಿಲ್ಲ. ಅಸ್ಮಿತೆ, ಬಾಂಧವ್ಯ, ಸಂಸ್ಕೃತಿ, ಪರಂಪರೆ, ವ್ಯಾಪಾರ ಎಲ್ಲದರಲ್ಲೂ ಭಾಷೆಯ ಪ್ರಭಾವ ಅತೀ ಮುಖ್ಯ ಪಾತ್ರ ವಹಿಸುತ್ತದೆ. ಭಾಷಾ ಬಾಂಧವ್ಯವನ್ನು ಬೆಸೆಯುವುದಕ್ಕೆ ಇರುವುದೇ ಹೊರತು ಸಂಘರ್ಷಕ್ಕಲ್ಲ. ರಾಜ್ಯದಲ್ಲಿ ಇತ್ತೀಚಿಗೆ ಭಾಷೆಯ ಕಾರಣಕ್ಕೆ ಆಟೋ ಚಾಲಕರು, ಹೋಟೆಲ್, ಅಂಗಡಿಗಳು, ಕಾರ್ಖಾನೆಗಳು ಸೇರಿದಂತೆ ಇತರೆಡೆ ಪರಭಾಷಿಕರ ಸಂಘರ್ಷದ ಘಟನೆಗಳು ನಡೆಯುತ್ತಿದ್ದು, ಕನ್ನಡಿಗರನ್ನು ವಿಲನ್ಗಳೆಂದು ಬಿಂಬಿಸುವ ಪ್ರಯತ್ನಗಳು ನಡೆಯುತ್ತಲೇ ಇವೆ.
ಟೀ ಮಾರುವವರಿಂದ ಆರಂಭಗೊಂಡು ಐಟಿಬಿಟಿ ಕಂಪನಿಗಳ ಉದ್ಯೋಗಿಗಳವರೆಗೂ ಉತ್ತರ ಭಾರತೀಯರು ಅದರಲ್ಲೂ ಹಿಂದಿ ಪ್ರಾಬಲ್ಯದ ರಾಜ್ಯದವರೇ ತುಂಬಿಕೊಂಡಿದ್ದಾರೆ. ಇದರಿಂದ ಸ್ಥಳೀಯರಾದ ಕನ್ನಡಿಗರು ಉದ್ಯೋಗಕ್ಕಾಗಿ ಪರಿದಾಡುವಂತ ಪರಿಸ್ಥಿತಿ ನಿರ್ಮಾಣಗೊಂಡಿದೆ. ಉತ್ತರ ಭಾರತೀಯರಿಂದಲೇ ಬೆಂಗಳೂರು ವಿಶ್ವಮಟ್ಟಕ್ಕೆ ಬೆಳೆದಿದೆ. ನಾವು ಇಲ್ಲದಿದ್ದರೆ ಬೆಂಗಳೂರೇ ಇಲ್ಲವೆನ್ನುವಂತ ಹಿಂದಿವಾಲಾಗಳ ದುರಹಂಕಾರದ ಮಾತುಗಳನ್ನು ಕೇಳಿಸಿಕೊಳ್ಳುವಂತಹ ದುಸ್ಥಿತಿ ಬಂದಿದೆ. ಆದರೆ, ಅದರ ನಿಯಂತ್ರಣಕ್ಕೆ ಮಾತ್ರ ಸರ್ಕಾರವಾಗಲೀ, ಕನ್ನಡಿಗರಾಗಲೀ ಇಲ್ಲವೇ ಇದೇ ನೆಲದ ಎಲ್ಲ ಸವಲತ್ತನ್ನು ಹೀರಿಕೊಂಡು ಬೆಳೆಯುತ್ತಿರುವ ಕಂಪನಿಗಳಾಗಲೀ ಮಾಡದಿರುವುದು ವಿಷಾದನೀಯ.
ಜೀವನ ಹುಡುಕುತ್ತಾ ಕನ್ನಡದ ನೆಲದಲ್ಲಿ ನೆಲೆಯೂರಿದ ಹಿಂದಿ ಭಾಷಿಕರು, ಇಲ್ಲಿನ ಭಾಷೆ, ಸಂಸ್ಕೃತಿ, ಪರಂಪರೆ, ಅಸ್ಮಿತೆಯನ್ನೇ ಅವಹೇಳನ ಮಾಡುವ ಮಟ್ಟಕ್ಕೆ ಬೆಳೆದಿದ್ದಾರೆ. ಇದಕ್ಕೆ ತಮ್ಮ ಭಾಷೆ, ನೆಲದ ಮೇಲೆ ಕನ್ನಡಿಗರಿಗೆ ಇರುವ ಅಸಡ್ಡೆಯೂ ಒಂದು ಕಾರಣವಿರಬಹುದು. ಸ್ಫರ್ಧಾತ್ಮಕ ಆರ್ಥಿಕತೆಯ ಹಿಂದೆ ಬಿದ್ದಿರುವ ಜನರಿಗೆ ಭಾಷೆ ಮತ್ತು ಸಾಹಿತ್ಯ ಬೇಡವಾಗಿದೆ.
ನಮ್ಮದೇ ರಾಜ್ಯದ ಉದ್ಯಮಗಳಲ್ಲಿ ಕನ್ನಡಿಗರಿಗೆ ಸಿಗಬೇಕಾದ ಸ್ಥಾನ ಸಿಗುತ್ತಿಲ್ಲ. ನಮ್ಮದೇ ನೆಲದಲ್ಲಿ ಕಟ್ಟಿರುವ ಅಪಾರ್ಟ್ಮೆಂಟ್ಗಳಲ್ಲಿ ಕನ್ನಡಿಗರೇ ಅಲ್ಪಸಂಖ್ಯಾತರು. ಈ ನಡುವೆ ಇಲ್ಲಿನ ನೆಲ, ಜಲ, ಗಾಳಿ, ಸಂಪತ್ತು ಎಲ್ಲವನ್ನೂ ಉಪಯೋಗಿಸಿ ಬೆಳೆಯುತ್ತಿರುವ ಹಿಂದಿವಾಲಾಗಳು, ಪರಭಾಷಿಕರು ನಮ್ಮದೇ ಭಾಷೆ, ನೆಲ ಮತ್ತು ಸಂಸ್ಕೃತಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನ ಮಾಡುತ್ತಿದ್ದರೂ, ಸರ್ಕಾರಗಳು ಮಾತ್ರ ಯಾವುದೇ ಕಠಿಣ ಜರುಗಿಸುತ್ತಿಲ್ಲ. ಹೀಗಾಗಿ ವಿಶ್ವಮಟ್ಟದಲ್ಲಿ ಕನ್ನಡ ನಾಡಿನ ಪ್ರತಿಷ್ಠೆ ಮಣ್ಣುಪಾಲಾಗುತ್ತಿದೆ. ಇದೆಲ್ಲದಕ್ಕೂ ಕಡಿವಾಣ ಹಾಕಲು ಕಾನೂನಿನ ಬಲ ಬೇಕೇ ಬೇಕು ಎಂಬ ಹಕ್ಕೋತ್ತಾಯ ಆರಂಭವಾಗಿದೆ.
ದೇಶದ ವಿರುದ್ಧ ಮಾನತಾಡುವುದು ಹೇಗೆ ದೇಶದ್ರೋಹವೋ ಅದೇ ರೀತಿ ಕರುನಾಡಿನಲ್ಲಿ ನೆಲೆನಿಂತು ಕನ್ನಡ ಸಂಸ್ಕೃತಿ ಹಾಗೂ ಇಲ್ಲಿನ ಜನ ಜೀವನವನ್ನು ಹೀಗಳೆಯುವವರ ಮೇಲೆ ದೇಶದ್ರೋಹ ಕಾನೂನಿಗೆ ಸಮನಾದ ಕಾನೂನು ರೂಪಗೊಳ್ಳಬೇಕು ಎಂಬ ಒತ್ತಾಯ ತೀವ್ರವಾಗಿದೆ.
ಕನ್ನಡ ಕಡ್ಡಾಯಕ್ಕೆ ಸಂಸದರ ನಿರ್ಲಕ್ಷ್ಯ: ಕರ್ನಾಟಕ ಸರ್ಕಾರವು ಕನ್ನಡವನ್ನು ಪ್ರಾಥಮಿಕ ಹಂತದಲ್ಲಿ ಕಡ್ಡಾಯ ಮಾಡ ಹೊರಟಾಗ ಸುಪ್ರಿಂಕೋರ್ಟ್ ಅದನ್ನು 2015ರಲ್ಲಿಯೇ ತಿರಸ್ಕರಿಸಿದೆ. ಈ ಕುರಿತು ಸಂವಿಧಾನದಲ್ಲಿಯೇ ಸೂಕ್ತವಾದ ಬದಲಾವಣೆ ತರಲು ಯಾರೂ ಯೋಚಿಸುತ್ತಿಲ್ಲ. ರಾಜ್ಯದಿಂದ ಆಯ್ಕೆಯಾಗಿ ಹೋಗಿರುವ 28 ಸಂಸದರು ಭಾಷಾ ಸ್ವಾಭಿಮಾನದ ವಿಚಾರದಲ್ಲಿ ತಮಿಳುನಾಡಿನ ಸಂಸದರನ್ನು ನೋಡಿ ಕಲಿಯುವುದು ಬಹಳಷ್ಟಿದೆ. ರಾಜ್ಯದ ಹಿತಕ್ಕಾಗಿ ದ್ರಾವಿಡ ನೆಲದ ತಮಿಳು ಸಂಸದರು ಸಂಘಟಿತರಾಗುತ್ತಿದ್ದಾರೆ, ಅದೇ ನೆಲದ ಕರುನಾಡಿನ ಸಂಸದರು ರಾಜಕೀಯದ ಕೆಸರೆರೆಚಿಕೊಂಡು ಸಮಯ ವ್ಯರ್ಥ ಮಾಡುತ್ತಿದ್ದಾರೆ ಎಂಬ ಆರೋಪ ಸುಳ್ಳಲ್ಲ.
ಸರೋಜಿನಿ ಮಹಿಷಿ ವರದಿ ಜಾರಿ ಅಗತ್ಯ: ಉದ್ಯಮಗಳಲ್ಲಿ ಕನ್ನಡಿಗರಿಗೆ ಸ್ಥಾನಮಾನ ಸಿಗಲು ಸರೋಜಿನಿ ಮಹಿಷಿ ವರದಿ ಜಾರಿಯಾಗಬೇಕು. ನಮ್ಮ ನುಡಿಗೆ ಅನ್ಯ ಭಾಷಿಕರಿಂದ ದಿನೇ ದಿನೇ ಅಪಾಯ ಹೆಚ್ಚುತ್ತಿದೆ. ಇಲ್ಲಿರುವ ಪ್ರತಿಯೊಬ್ಬರೂ ಕಡ್ಡಾಯವಾಗಿ ಕನ್ನಡ ಕಲಿಯಬೇಕು. ಕನ್ನಡದಲ್ಲೇ ವ್ಯವಹರಿಸಬೇಕು, ಕನ್ನಡ ಭಾಷೆಯನ್ನೇ ಬಳಸಬೇಕು ಇದಕ್ಕೆ ಎಲ್ಲರೂ ಕೈ ಜೋಡಿಸಬೇಕು.
ಕಾರ್ಖಾನೆಗಳು, ಕಂಪನಿಗಳು, ಅಂಗಡಿಮುಂಗಟ್ಟುಗಳ ಎಲ್ಲ ನಾಮಫಲಕಗಳು ಕನ್ನಡದಲ್ಲೇ ಇರುವಂತೆ ಮಾಡಬೇಕು. ಸಾಮಾಜಿಕ ಜಾಲತಾಣಗಳಲ್ಲಿ ಕರ್ನಾಟಕ, ಕನ್ನಡಿಗರನ್ನು ಅವಹೇಳನ ಮಾಡುವವರಿಗೆ ಕಡಿವಾಣ ಹಾಕಿ ಕಾನೂನು ರೀತ್ಯ ಶಿಕ್ಷೆಗೊಳಪಡಿಸಬೇಕು. ಜೊತೆಗೆ ವಲಸೆ ಬರುವವರ ಮೇಲೆ ನಿಯಂತ್ರಣ ಹೇರದಿದ್ದರೆ ಮುಂದೊಂದು ದಿನ ಕನ್ನಡನಾಡು ಹಿಂದಿಭಾಷಿಕರ ನಾಡಾದರೂ ಆಶ್ಚರ್ಯ ಪಡಬೇಕಿಲ್ಲ ಎಂದು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಪ್ರವೀಣ್ ಶೆಟ್ಟಿ ಆತಂಕ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಕನ್ನಡಿಗರು ಒಂದಾಗದಿದ್ದರೆ ಹಿಂದಿ ಹೇರಿಕೆಯನ್ನು ತಡೆಯಲಾಗದು. ಸರೋಜಿನಿ ಮಹಿಷಿ ವರದಿ ಜಾರಿಗೊಳಿಸಿ ಉದ್ಯೋಗದಲ್ಲಿ ಕನ್ನಡಿಗರಿಗೆ ಮೀಸಲಾತಿ ಸಿಗುವಂತೆ ಮಾಡಬೇಕಿದೆ. ಭಾರತದ ಒಕ್ಕೂಟ ವ್ಯವಸ್ಥೆ ಬಲಿಷ್ಠವಾಗಬೇಕಾದರೆ ಎಲ್ಲ ಭಾಷೆಗಳಿಗೂ ಸಮಾನ ಅವಕಾಶಗಳು ದೊರೆಯಲೇಬೇಕು.
-ಡಾ। ಪುರುಷೋತ್ತಮ ಬಿಳಿಮಲೆ, ಅಧ್ಯಕ್ಷ, ಕನ್ನಡ ಅಭಿವೃದ್ಧಿ ಪ್ರಾಧಿಕಾರ