;Resize=(412,232))
ಬೆಂಗಳೂರು : ಇರಾನ್ ಯುದ್ಧದಿಂದ ಉಂಟಾಗಿದ್ದ ಎಲ್ಪಿಜಿ ಸಿಲಿಂಡರ್ ಪೂರೈಕೆ ಸಮಸ್ಯೆ ಕೊಂಚ ತಹಬದಿಗೆ ಬರುವ ಲಕ್ಷಣಗಳು ಗೋಚರಿಸಿವೆ, ‘ಕೇಂದ್ರ ಸರ್ಕಾರದ ನಿರ್ದೇಶನದಂತೆ ರಾಜ್ಯದಲ್ಲಿ ಕಳೆದ ಮೂರು ದಿನದಲ್ಲಿ ತೈಲ ಕಂಪನಿಗಳ ಅನಿಲ ಸಿಲಿಂಡರ್ ಸರಬರಾಜಿನಲ್ಲಿ ಶೇ.20 ರಷ್ಟು ಸುಧಾರಣೆಯಾಗಿದೆ’ ಎಂದು ರಾಜ್ಯದ ಆಹಾರ ಹಾಗೂ ನಾಗರಿಕ ಪೂರೈಕೆ ಇಲಾಖೆ ಭಾನುವಾರ ಹೇಳಿದೆ. ಇದರಲ್ಲಿ ಹೆಚ್ಚು ಬಾಧಿತವಾಗಿದ್ದ ವಾಣಿಜ್ಯ ಎಲ್ಪಿಜಿ ಪೂರೈಕೆಯೂ ಸೇರಿದೆ.
ಮಾ.12 ರಿಂದ 14 ರವರೆಗೂ ಒಟ್ಟಾರೆ 11,62,598 ಸಿಲಿಂಡರ್ ಪೂರೈಸಲಾಗಿದ್ದು, ಗೃಹ ಬಳಕೆ, ವಾಣಿಜ್ಯ ಬಳಕೆ, ಆಟೋ ಎಲ್ಪಿಜಿ ಸರಬರಾಜಿನಲ್ಲಿ ಶೇ.20 ರಷ್ಟು ಸುಧಾರಣೆಯಾಗಿದೆ. ಅಕ್ರಮ ದಾಸ್ತಾನು, ಗೃಹ ಬಳಕೆ ಸಿಲಿಂಡರ್ ಅನ್ನು ವಾಣಿಜ್ಯ ಉದ್ದೇಶಕ್ಕೆ ಬಳಕೆ, ಅಕ್ರಮ ಗ್ಯಾಸ್ ರಿಫಿಲ್ಲಿಂಗ್ಗೆ ಸಂಬಂಧಿಸಿದಂತೆ ರಾಜ್ಯಾದ್ಯಂತ 514 ಸಿಲಿಂಡರ್ ವಶಪಡಿಸಿಕೊಳ್ಳಲಾಗಿದೆ ಎಂದು ಆಹಾರ ಇಲಾಖೆ ತಿಳಿಸಿದೆ.
ಮಾ.12 ರಂದು ಗೃಹ ಬಳಕೆಯ 3,52,921 ಸಿಲಿಂಡರ್, ವಾಣಿಜ್ಯ ಬಳಕೆಯ 5,058 ಸಿಲಿಂಡರ್ ಸರಬರಾಜು ಮಾಡಲಾಗಿದೆ. ಮಾ.13 ರಂದು ಗೃಹ ಬಳಕೆಯ 3,86,363, ವಾಣಿಜ್ಯ ಬಳಕೆಯ 6,371 ಹಾಗೂ ಮಾ.14 ರಂದು ಗೃಹ ಬಳಕೆಯ 4,02,373, ವಾಣಿಜ್ಯ ಬಳಕೆಯ 9,512 ಸೇರಿದಂತೆ ಒಟ್ಟಾರೆ ಕಳೆದ ಮೂರು ದಿನದಲ್ಲಿ 11,62,598 ಸಿಲಿಂಡರ್ಗಳನ್ನು ಪೂರೈಕೆ ಮಾಡಲಾಗಿದೆ.
ಸಾರ್ವಜನಿಕರು, ಅಗತ್ಯ ಸೇವೆಗಳಾದ ಆಸ್ಪತ್ರೆ, ಶಿಕ್ಷಣ ಸಂಸ್ಥೆಗಳು, ವಿಮಾನ ನಿಲ್ದಾಣ, ರೈಲ್ವೆ ನಿಲ್ದಾಣ, ಬಸ್ ನಿಲ್ದಾಣಗಳ ಕ್ಯಾಂಟೀನ್ಗಳು, ಪ್ರಮುಖ ದೇವಸ್ಥಾನಗಳ ಪ್ರಸಾದ ವಿನಿಯೋಗ, ಸರ್ಕಾರಿ ಕಚೇರಿಗಳು, ವೃದ್ಧಾಶ್ರಮ ಸೇರಿದಂತೆ ಪ್ರಮುಖ ಖಾಸಗಿ ವಲಯದ ಕಚೇರಿಗಳಿಗೆ ಸಿಲಿಂಡರ್ ಸರಬರಾಜಿನಲ್ಲಿ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಇಲಾಖೆ ವಿವರಿಸಿದೆ.
ಸಿಲಿಂಡರ್ಗಳ ಅಕ್ರಮ ದಾಸ್ತಾನು, ಗೃಹ ಬಳಕೆ ಸಿಲಿಂಡರ್ ಅನ್ನು ವಾಣಿಜ್ಯ ಉದ್ದೇಶಕ್ಕೆ ಬಳಸುವುದು ಮತ್ತು ಅಕ್ರಮ ಗ್ಯಾಸ್ ರಿಫಿಲ್ಲಿಂಗ್ಗೆ ಸಂಬಂಧಿಸಿದಂತೆ ಶನಿವಾರದವರೆಗೂ ರಾಜ್ಯಾದ್ಯಂತ 514 ಸಿಲಿಂಡರ್ ವಶಪಡಿಸಿಕೊಳ್ಳಲಾಗಿದೆ. ದಾವಣಗೆರೆಯ ಎಪಿಎಂಸಿ ಪೊಲೀಸ್ ಠಾಣೆ, ಕೆಜಿಎಫ್ನ ಅಂಡರ್ಸನ್ ಪೇಟೆ, ಬೆಂಗಳೂರಿನ ಪೀಣ್ಯ, ಚಿಕ್ಕಜಾಲ, ಕೆಂಗೇರಿ ಪೊಲೀಸ್ ಠಾಣೆಗಳಲ್ಲಿ ಒಟ್ಟು 5 ಎಫ್ಐಆರ್ ದಾಖಲಿಸಲಾಗಿದೆ.
ಶಿವಮೊಗ್ಗ ಜಿಲ್ಲೆಯಲ್ಲಿ ಅಕ್ರಮಕ್ಕೆ ಸಂಬಂಧಿಸಿದಂತೆ 3 ಸಿಲಿಂಡರ್ ವಶಪಡಿಸಿಕೊಳ್ಳಲಾಗಿದೆ. ಯಾದಗಿರಿ–46, ದಾವಣಗೆರೆ–13, ಬೆಂಗಳೂರು ಗ್ರಾಮಾಂತರ–209, ಬೆಂಗಳೂರು ನಗರ–221, ಕೋಲಾರ–1, ರಾಯಚೂರು–4, ಬೆಳಗಾವಿ–12, ಧಾರವಾಡ–2 ಮತ್ತು ಚಿಕ್ಕಮಗಳೂರು ಜಿಲ್ಲೆಯಲ್ಲಿ 3 ಸಿಲಿಂಡರ್ಗಳನ್ನು ವಶಪಡಿಸಿಕೊಳ್ಳಲಾಗಿದೆ.
357979
411885