ಮಲ್ಪಿಪ್ಲೆಕ್ಸ್‌ಗಳ ನಟ್‌, ಬೋಲ್ಟ್‌ ಟೈಟ್‌ - ಟಿಕೆಟ್‌, ತಿನಿಸುಗಳಿಗೆ ದುಬಾರಿ ದರಕ್ಕೆ ಶೀಘ್ರ ಕಡಿವಾಣ : ಪರಂ

Sujatha NR | Published : Mar 7, 2025 10:03 AM

ಸಿನಿಮಾದವರ ನಟ್‌, ಬೋಲ್ಟ್‌ ಟೈಟ್‌ ಮಾಡುವುದಾಗಿ ಉಪ ಮುಖ್ಯಮಂತ್ರಿ ಎಚ್ಚರಿಕೆ ನೀಡಿದ ಬೆನ್ನಲ್ಲೇ, ಇದೀಗ ಮಲ್ಟಿಪ್ಲೆಕ್ಸ್‌ಗಳಲ್ಲಿ ಸಿನಿಮಾ ಟಿಕೆಟ್‌, ತಿನಿಸುಗಳಿಗೆ ವಿಧಿಸುತ್ತಿರುವ ದುಬಾರಿ ದರಕ್ಕೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಮುಂದಾಗಿದೆ.

 ವಿಧಾನ ಪರಿಷತ್‌ : ಸಿನಿಮಾದವರ ನಟ್‌, ಬೋಲ್ಟ್‌ ಟೈಟ್‌ ಮಾಡುವುದಾಗಿ ಉಪ ಮುಖ್ಯಮಂತ್ರಿ ಎಚ್ಚರಿಕೆ ನೀಡಿದ ಬೆನ್ನಲ್ಲೇ, ಇದೀಗ ಮಲ್ಟಿಪ್ಲೆಕ್ಸ್‌ಗಳಲ್ಲಿ ಸಿನಿಮಾ ಟಿಕೆಟ್‌, ತಿನಿಸುಗಳಿಗೆ ವಿಧಿಸುತ್ತಿರುವ ದುಬಾರಿ ದರಕ್ಕೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಮುಂದಾಗಿದೆ.

ಮಲ್ಟಿಫ್ಲೆಕ್ಸ್‌ಗಳಲ್ಲಿ ಸಿನಿಮಾ ಟಿಕೆಟ್‌ಗೆ ಏಕರೂಪದ ದರ ನಿಗದಿ ಕುರಿತು ಆದಷ್ಟು ಬೇಗ ಕ್ರಮ ಕೈಗೊಳ್ಳಲಾಗುವುದು, ಜತೆಗೆ ನೀರು, ತಿನಿಸು ಇತ್ಯಾದಿಗಳಿಗೆ ದುಬಾರಿ ದರ ದರ ವಿಧಿಸುತ್ತಿರುವ ಬಗ್ಗೆ ಪರಿಶೀಲಿಸಿ ಕ್ರಮ ಜರುಗಿಸಲಾಗುವುದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಹೇಳಿದರು.

ಜೆಡಿಎಸ್ ಸದಸ್ಯ ಗೋವಿಂದರಾಜು ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಚಿತ್ರಮಂದಿರಗಳ ಟಿಕೆಟ್‌ ದರಗಳನ್ನು ಚಿತ್ರಮಂದಿರಗಳ ಮಾಲೀಕರೇ ನಿರ್ಧರಿಸುವ ಪದ್ಧತಿ ಜಾರಿಯಲ್ಲಿದ್ದು, ಅವಶ್ಯವೆನಿಸಿದರೆ ದರ ನಿಗದಿ ಮಾಡುವ ಅಧಿಕಾರ ಸರ್ಕಾರಕ್ಕೆ ಇದೆ. ಸರ್ಕಾರ ಏಕರೂಪದ ಟಿಕೆಟ್‌ ದರ ನಿಗದಿ ಮಾಡದೆ ಹೋದರೆ ತಮಗೆ ಇಷ್ಟಬಂದಂತೆ ದರ ನಿಗದಿ ಮಾಡುತ್ತಾರೆ ಎಂದರು.

ಬದಲಾದ ಪರಿಸ್ಥಿತಿಯಲ್ಲಿ ಚಿತ್ರಗಳ ವೀಕ್ಷಣೆಗೆ ಬೇರೆ ಬೇರೆ ವೇದಿಕೆ ಸೃಷ್ಟಿಯಾಗಿರುವುದರಿಂದ ಚಿತ್ರ ಮಂದಿರಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಅನೇಕ ಕಡೆ ದೊಡ್ಡ ದೊಡ್ಡ ಚಿತ್ರಮಂದಿಗಳನ್ನು ಬಂದ್‌ ಮಾಡಲಾಗುತ್ತಿದೆ, ಇದಕ್ಕೆ ಬದಲಾಗಿ ಕಡಿಮೆ ಆಸನವಿರುವ ಐಷಾರಾಮಿ ಮಲ್ಟಿಪ್ಲೆಕ್ಸ್‌ಗಳು ಬಂದಿವೆ. ಹೀಗಾಗಿ ರಾಜ್ಯದಲ್ಲಿ ಏಕಪರದೆಯ 100 ಚಿತ್ರಮಂದಿರಗಳು ಸ್ಥಗಿತವಾಗಿವೆ. 150 ಚಿತ್ರಮಂದಿರಗಳು ಸ್ಥಗಿತ ಆಗುವ ಹಂತದಲ್ಲಿವೆ, ಬೆಂಗಳೂರಿನಲ್ಲಿ 41 ಮಲ್ಟಿಪ್ಲೆಕ್ಸ್‌ ಚಿತ್ರಮಂದಿರಗಳು ಇವೆ ಎಂದರು.

ಮಲ್ಟಿಪ್ಲೆಕ್ಸ್‌ಗಳಲ್ಲಿ ಕುಡಿಯುವ ನೀರು, ತಿನಿಸುಗಳಿಗೆ ಸಿಕ್ಕಾಪಟ್ಟೆ ದರ ವಿಧಿಸುವ ಮಾಹಿತಿ ಇದೆ. ಅಲ್ಲಿ ಜನರನ್ನು ಶೋಷಣೆ ಮಾಡಲಾಗುತ್ತಿದೆ. ಅದನ್ನೂ ನಿಯಂತ್ರಣ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಇದಕ್ಕೂ ಮುನ್ನ ಮಾತನಾಡಿದ ಗೋವಿಂದರಾಜು, ಟಿಕೆಟ್‌ ದರವನ್ನು 500 ರು.ನಿಂದ ಒಂದು ಸಾವಿರ ರು.ವರೆಗೆ ವಿಧಿಸಲಾಗುತ್ತಿದೆ. ಒಂದೊಂದು ಸಿನಿಮಾಕ್ಕೂ ಒಂದೊಂದು ರೀತಿ ದರ ನಿಗದಿ ಮಾಡಲಾಗುತ್ತಿದೆ. ಮಲ್ಟಿಪ್ಲೆಕ್ಸ್‌ ಚಿತ್ರಮಂದಿರಗಳಲ್ಲಿ 20 ರು. ಬೆಲೆಯ ಬಾಟಲ್‌ ನೀರಿಗೆ ನೂರಾರು ರು. ಸುಲಿಗೆ ಮಾಡಲಾಗುತ್ತಿದೆ. ಟಿಕೆಟ್‌ ದರ ಸಹ ಸಿಕ್ಕಾಪಟ್ಟೆ ಇರುತ್ತದೆ. ಇದಕ್ಕೆ ಸರ್ಕಾರ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು.

ಮಚ್ಚು, ಲಾಂಗ್‌ ತೋರಿದರೆ ಗೂಂಡಾ ಕಾಯ್ದೆ: ಪರಂ

 ವಿಧಾನ ಪರಿಷತ್‌: ಕಾನೂನು ಸುವ್ಯವಸ್ಥೆ ಹಾಳು ಮಾಡುವವರ ವಿರುದ್ಧ ಯಾವುದೇ ಮುಲಾಜಿಲ್ಲದೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಅಪರಾಧ ತಡೆಯಲು ಸಾಕಷ್ಟು ಕ್ರಮ ಜಾರಿಗೆ ತರಲಾಗಿದೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್‌ ಹೇಳಿದರು. ಜೆಡಿಎಸ್‌ನ ಎಸ್‌.ಎಲ್‌. ಭೋಜೇಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಕಳೆದ ಎರಡು-ಮೂರು ವರ್ಷಗಳ ಅವಧಿಯಲ್ಲಿ ನಡೆದಿರುವ ವಿವಿಧ ಅಪರಾಧ ಪ್ರಕರಣಗಳು, ಕೈಗೊಂಡ ಕ್ರಮ, ಅಪರಾಧಿಗಳ ಬಂಧನ ಕುರಿತು ಅಂಕಿ-ಅಂಶಗಳ ಸಹಿತ ವಿವರಿಸಿ, ಕಾನೂನು ಮತ್ತು ಸುವ್ಯವಸ್ಥೆ ಹದಗೆಡಲು ಅವಕಾಶ ನೀಡುವುದಿಲ್ಲ. ದಿನದ 24 ಗಂಟೆ ಕಾರ್ಯನಿರ್ವಹಿಸುವಂತಹ ವ್ಯವಸ್ಥೆ ಮಾಡಲಾಗಿದೆ. ಬೀಟ್‌ ವ್ಯವಸ್ಥೆ ಇನ್ನಷ್ಟು ಬಿಗಿಗೊಳಿಸಲಾಗಿದೆ. ಗೂಂಡಾಗಿರಿ ಮಾಡುವ, ಚಾಕು, ಚೂರಿ, ಲಾಂಗ್‌ ಹಿಡಿದು ಓಡಾಡುವ ಜನರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗಿದೆ ಎಂದರು.

2023ರಲ್ಲಿ 223 ವೀಲಿಂಗ್‌ ಪ್ರಕರಣದ ಸಂಬಂಧ 136 ಹಾಗೂ 2024ರಲ್ಲಿ 128 ಪ್ರಕರಣಗಳಲ್ಲಿ 176 ಜನರನ್ನು ಬಂಧಿಸಲಾಗಿದೆ. ಈ ವರ್ಷ 47 ಪ್ರಕರಣಗಳಲ್ಲಿ 37 ಜನರನ್ನು ಬಂಧಿಸಲಾಗಿದೆ. ಸಾರ್ವಜನಿಕವಾಗಿ ಮಚ್ಚು, ಲಾಂಗ್‌ ಮುಂತಾದ ಮಾರಕಾಸ್ತ್ರ ಹಿಡಿದುಕೊಂಡು ಓಡಾಡಿದ ಸಂಬಂಧ 2023ರಲ್ಲಿ 449 ಪ್ರಕರಣಗಳು ದಾಖಲಾಗಿದ್ದು, 225 ಮಂದಿಯನ್ನು ಬಂಧಿಸಲಾಗಿದೆ. ಗೂಂಡಾ ಕಾಯ್ದೆ ಅಡಿ ಪ್ರಕರಣ ದಾಖಲು ಮಾಡಲಾಗುತ್ತಿದೆ. ಆದರೆ ಸೈಬರ್‌ ಅಪರಾಧ ಪ್ರಕರಣಗಳು ಮಾತ್ರ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿವೆ. ಹಣದ ವಂಚನೆ, ಡಾಟಾ ಕಳ್ಳತನ ಪ್ರಕರಣಗಳು ಜಾಸ್ತಿಯಾಗುತ್ತಿವೆ. ಸಾವಿರಾರು ಕೋಟಿ ವಂಚನೆಯಾಗುತ್ತಿದೆ. ಈ ಬಗ್ಗೆ ಸಾಕಷ್ಟು ಜಾಗೃತಿ ಮೂಡಿಸಿದರೂ ಕಡಿಮೆಯಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಸೈಬರ್‌ ಅಪರಾಧ ಸಂಬಂಧ ಪ್ರತ್ಯೇಕವಾಗಿ ಡಿಜಿ, ಎಡಿಜಿಪಿ, ಏಳು ಎಸ್‌ಪಿಗಳನ್ನು ನೇಮಕ ಮಾಡಲಾಗಿದೆ ಎಂದು ಸಚಿವರು ವಿವರಿಸಿದರು.

ಆಧುನೀಕರಣ:

ಹೊಯ್ಸಳ ವಾಹನಗಳಿಗೆ ಆಧುನಿಕ ಉಪಕರಣ ಒದಗಿಸಲಾಗಿದೆ. ಮಹಿಳೆಯರ ರಕ್ಷಣೆಗಾಗಿ ಪಿಂಕ್‌ ವಾಹನ ನೀಡಲಾಗಿದೆ. ನಿಯಂತ್ರಣ ಕೊಠಡಿಗೆ ಯಾರೇ ದೂರವಾಣಿ ಕರೆ ಮಾಡಿದರೆ ಒಂಬತ್ತು ನಿಮಿಷದಲ್ಲಿ ಪೊಲೀಸರು ಸ್ಥಳಕ್ಕೆ ಹಾಜರಾಗಲಿದ್ದಾರೆ. ಬೆಂಗಳೂರು ನಗರವೊಂದರಲ್ಲಿ ಏಳು ಸಾವಿರ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ಇಷ್ಟೆಲ್ಲಾ ವ್ಯವಸ್ಥೆ ಮಾಡಿದ್ದರೂ ಅಪರಾಧ ಪ್ರಕರಣಗಳು ನಡೆಯುತ್ತಿವೆ. ಕರ್ತವ್ಯ ನಿರ್ಲಕ್ಷ್ಯದಿಂದ ಅಪರಾಧ ಕೃತ್ಯಗಳು ಜರುಗಲು ಕಾರಣರಾದ ಅಧಿಕಾರಿ/ಸಿಬ್ಬಂದಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಗೃಹ ಸಚಿವರು ತಿಳಿಸಿದರು.

ಸದಸ್ಯ ಎಲ್‌.ಎಸ್‌. ಭೋಜೇಗೌಡ ಮಾತನಾಡಿ, ತಡರಾತ್ರಿ ಶ್ರೀಮಂತರು, ಅಧಿಕಾರಿಗಳ ಮಕ್ಕಳು ಯಾವ ಹೆದರಿಕೆ ಇಲ್ಲದೆ ವಾಹನಗಳಲ್ಲಿ ಸಂಚರಿಸುತ್ತಾರೆ. ಇಂಥವರ ವಿರುದ್ಧ ಯಾರೂ ಕೂಡಾ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

- ಸಾರ್ವಜನಿಕವಾಗಿ ಮಚ್ಚು ತೋರಿದ್ದಕ್ಕೆ 449 ಕೇಸ್‌

- ಕರೆ ಮಾಡಿದ 9 ನಿಮಿಷಕ್ಕೆ ಪೊಲೀಸರು ಬರುತ್ತಾರೆ