ಮುನಿರತ್ನ ತಲೆಗೆ ಪೆಟ್ಟು ಬಿದ್ದು ಹುಚ್ಚರಾಗಿದ್ದಾರೆ: ಏಕವಚನದಲ್ಲೇ ಮಾಜಿ ಸಂಸದ ವಾಗ್ದಾಳಿ

ಸಾರಾಂಶ

ವಿಧಾನಸೌಧದಲ್ಲಿ ನಡೆದಿರುವ ಅತ್ಯಾಚಾರದ ಚಾರ್ಜ್‌ಶೀಟ್‌ನ್ನು ಮಂಗಳವಾರ ಬಿಚ್ಚಿಡುತ್ತೇನೆ’ ಎಂದು ಮಾಜಿ ಸಂಸದ ಡಿ.ಕೆ. ಸುರೇಶ್‌ ಹೇಳಿದ್ದಾರೆ.

 ಬೆಂಗಳೂರು : ‘ರಾಜರಾಜೇಶ್ವರಿನಗರ ಶಾಸಕ ಮುನಿರತ್ನ ತಲೆಗೆ ಪೆಟ್ಟು ಬಿದ್ದು ಹುಚ್ಚ ಆಗಿದ್ದಾನೆ. ಆತನ ಹೆಸರು ಹೇಳಲೂ ಅಸಹ್ಯ ಆಗುತ್ತದೆ. ಹೀಗಾಗಿ ಮಾತನಾಡುವುದು ಬೇಡ ಎಂದು ಸುಮ್ಮನಾಗಿದ್ದೆ. ಇನ್ನು ಸುಮ್ಮನಿರುವುದಿಲ್ಲ. ವಿಧಾನಸೌಧದಲ್ಲಿ ನಡೆದಿರುವ ಅತ್ಯಾಚಾರದ ಚಾರ್ಜ್‌ಶೀಟ್‌ನ್ನು ಮಂಗಳವಾರ ಬಿಚ್ಚಿಡುತ್ತೇನೆ’ ಎಂದು ಮಾಜಿ ಸಂಸದ ಡಿ.ಕೆ. ಸುರೇಶ್‌ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ. ಸುರೇಶ್‌, ‘ಆತನಿಗೆ ತಲೆ ಪೆಟ್ಟಾಗಿದೆ ಎಂದು ಸಂಸದರಾದ ಡಾ.ಮಂಜುನಾಥ್‌ ಅವರೇ ಹೇಳಿದ್ದಾರೆ. ಆ್ಯಸಿಡ್‌ ತಲೆಗೆ ಬಿದ್ದು ತಲೆಗೆ ಆ್ಯಸಿಡ್‌ ಹೋಗಿದೆ ಎಂದು ಹೇಳಿದ್ದರಲ್ಲ. ಹೀಗಾಗಿ ತಲೆ ಕೆಟ್ಟು ಮಾತನಾಡುತ್ತಿದ್ದಾನೆ. ಆತನ ವಿರುದ್ಧದ ಚಾರ್ಜ್‌ಶೀಟ್‌ ವರದಿಯನ್ನೇ ತಂದು ಓದುತ್ತೇನೆ. ನೀವು ವಿಧಾನಸೌಧದಲ್ಲಿ ನಡೆದಿರುವ ರೇಪ್‌ ಬಗ್ಗೆ ಸುದ್ದಿ ಹಾಕಬೇಕು. ಇಷ್ಟು ದಿನ ನಾನು ಮಾತನಾಡಿರಲಿಲ್ಲ. ಈಗ ಮಾತನಾಡುತ್ತೇನೆ ಕೇಳಿಸಿಕೊಳ್ಳಲಿ’ ಎಂದು ಹೇಳಿದರು.

ಮುನಿರತ್ನ ಅವರ ವಿರುದ್ಧ ಏಕವಚನದಲ್ಲೇ ಹರಿಹಾಯ್ದ ಅವರು, ಅವನ ಹೆಸರು ಹೇಳಲೂ ಅಸಹ್ಯ ಆಗುತ್ತದೆ. ಆದರೂ ಆತನ ಹೆಸರು ಹೇಗೆ ಕರೆಯುತ್ತೀರಿ ಎಂದು ಅರ್ಥವಾಗುತ್ತಿಲ್ಲ. ಅವನ ದುರ್ನತಡೆಗಳನ್ನು ಖಂಡಿಸದೆ ಇನ್ನೂ ವಿಜೃಂಭಿಸುತ್ತೀರಲ್ಲ ಅದರ ಬಗ್ಗೆ ಅಸಮಾಧಾನ ಇದೆ. ಬೇರೆಯವರ ಬಗ್ಗೆ ಹೇಗೆ ತೋರಿಸುತ್ತೀರಿ, ಇವರ ಬಗ್ಗೆ ಸುದ್ದಿಗಳನ್ನು ಹೇಗೆ ತೇಲಿಸುತ್ತೀರಿ ಎಂಬ ಬಗ್ಗೆ ಬೇಸರವಿದೆ ಎಂದು ಮಾಧ್ಯಮಗಳ ವಿರುದ್ಧವೂ ಹರಿಹಾಯ್ದರು.

ಜಾತಿಗಣತಿ ಬಗ್ಗೆ ಅಲ್ಪವಿರಾಮ: ಡಿಕೆಸು

ಜಾತಿಗಣತಿ ವರದಿ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಡಿ.ಕೆ.ಸುರೇಶ್‌, ಅದು ಜಾತಿಗಣತಿ ಅಲ್ಲ. ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ. ಒಟ್ಟು 53 ಮಾನದಂಡಗಳನ್ನು ಇಟ್ಟುಕೊಂಡು ಮಾಡಿದ್ದಾರೆ. ಆದರೆ ಅದು ಜಾತಿಗಣತಿ ಎಂದು ಆಗಿಬಿಟ್ಟಿದೆ. ಸಂಪುಟ ಸಭೆಯಲ್ಲೇ ಅದಕ್ಕೆ ಅಲ್ಪವಿರಾಮ ನೀಡಿದ್ದಾರಲ್ಲ. ಹೀಗಾಗಿ ಸದ್ಯಕ್ಕೆ ಆ ಬಗ್ಗೆ ಮಾತನಾಡುವುದಿಲ್ಲ. ಎಲ್ಲವನ್ನೂ ಒಟ್ಟಿಗೆ ಮಂಗಳವಾರ ಮಾತನಾಡುತ್ತೇನೆ ಎಂದು ಹೇಳಿದರು.

Share this article