ಅರಣ್ಯ ಇಲಾಖೆಯ ಸಫಾರಿ ಸೇರಿದಂತೆ ಎಲ್ಲ ರೀತಿಯ ಹಣ ಸ್ವೀಕೃತಿಗೆ ಆನ್ಲೈನ್ ಮತ್ತು ಕಂಪ್ಯೂಟರೈಸ್ಡ್ ಬಿಲ್ ನೀಡಲು ಹಾಗೂ ಚಾರಣ ತಾಣಗಳಿಗೆ ಹೋಗಲು ಆನ್ಲೈನ್ ಬುಕ್ಕಿಂಗ್ ಮಾಡಿಕೊಳ್ಳಲು ಹೊಸ ತಂತ್ರಾಂಶ ಸಿದ್ಧಪಡಿಸಲು ಇಲಾಖೆ ಮುಂದಾಗಿದೆ.
ಬೆಂಗಳೂರು : ಅರಣ್ಯ ಇಲಾಖೆಯ ಸಫಾರಿ ಸೇರಿದಂತೆ ಎಲ್ಲ ರೀತಿಯ ಹಣ ಸ್ವೀಕೃತಿಗೆ ಆನ್ಲೈನ್ ಮತ್ತು ಕಂಪ್ಯೂಟರೈಸ್ಡ್ ಬಿಲ್ ನೀಡಲು ಹಾಗೂ ಚಾರಣ ತಾಣಗಳಿಗೆ ಹೋಗಲು ಆನ್ಲೈನ್ ಬುಕ್ಕಿಂಗ್ ಮಾಡಿಕೊಳ್ಳಲು ಹೊಸ ತಂತ್ರಾಂಶ ಸಿದ್ಧಪಡಿಸಲು ಇಲಾಖೆ ಮುಂದಾಗಿದೆ.
ಕಳೆದ ಜನವರಿಯಲ್ಲಿ ಪುಷ್ಪಗಿರಿ ಅರಣ್ಯ ವ್ಯಾಪ್ತಿಯ ಕುಮಾರಪರ್ವತಕ್ಕೆ ಒಂದೇ ದಿನ ಸಾವಿರಾರು ಚಾರಣಿಗರು ಭೇಟಿ ನೀಡಿ, ವನ್ಯಜೀವಿಗಳಿಗೆ ಸಮಸ್ಯೆಯಾಗಿದ್ದಲ್ಲದೆ, ಪರಿಸರ ಹಾನಿಗೆ ಕಾರಣವಾಗಿತ್ತು. ಆ ಹಿನ್ನೆಲೆಯಲ್ಲಿ ಆನ್ಲೈನ್ ಬುಕ್ಕಿಂಗ್ ವ್ಯವಸ್ಥೆ ಇಲ್ಲದ ಚಾರಣ ತಾಣಗಳಿಗೆ ಚಾರಣಿಗರ ಪ್ರವೇಶವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಿತ್ತು. ಅದರಿಂದ 24 ಚಾರಣ ತಾಣಗಳಿಗೆ ಆನ್ಲೈನ್ ಬುಕ್ಕಿಂಗ್ ಇಲ್ಲದೆ ಪ್ರವೇಶ ನಿರ್ಬಂಧಿಸಲಾಗಿತ್ತು. ಇದೀಗ ಚಾರಣಿಗರ ಅನುಕೂಲಕ್ಕಾಗಿ ಪ್ರತ್ಯೇಕ ತಂತ್ರಾಂಶ ಮತ್ತು ವೆಬ್ಸೈಟ್ ಸಿದ್ಧಪಡಿಸಲು ಅರಣ್ಯ ಇಲಾಖೆ ಮುಂದಾಗಿದೆ. ಈ ಕುರಿತಂತೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಇತ್ತೀಚೆಗೆ ನಡೆದ ಅಧಿಕಾರಿಗಳೊಂದಿಗಿನ ಸಭೆಯಲ್ಲಿ ಸೂಚನೆ ನೀಡಿದ್ದು, ಮುಂದಿನ ಒಂದು ತಿಂಗಳಲ್ಲಿ ಚಾರಣಕ್ಕೆ ಆನ್ಲೈನ್ ಮೂಲಕ ಬುಕ್ಕಿಂಗ್ ಮಾಡಿಕೊಳ್ಳಲು ತಿಂಗಳೊಳಗೆ ವೆಬ್ಸೈಟ್ ಸಿದ್ಧಪಡಿಸುವಂತೆ ತಿಳಿಸಿದ್ದಾರೆ.
ಹಾಗೆಯೇ, ಸಫಾರಿ ಸೇರಿದಂತೆ ಅರಣ್ಯ ಇಲಾಖೆ ಜನರಿಂದ ಸ್ವೀಕರಿಸಲಾಗುವ ಹಣವನ್ನು ಆನ್ಲೈನ್ ಮೂಲಕ ಪಾವತಿಸುವುದಕ್ಕೆ ವ್ಯವಸ್ಥೆ ಹಾಗೂ ನಗದು ರೂಪದಲ್ಲಿ ಶುಲ್ಕ ನೀಡಿದರೆ ಅದಕ್ಕೆ ಬದಲಾಗಿ ಕಂಪ್ಯೂಟರೈಸ್ಡ್ ಬಿಲ್ ಪಾವತಿಸುವ ವ್ಯವಸ್ಥೆ ಜಾರಿಗೊಳಿಸಲು ಅರಣ್ಯ ಇಲಾಖೆ ನಿರ್ಧರಿಸಿದೆ. ಮುಂದಿನ ಒಂದು ತಿಂಗಳೊಳಗಾಗಿ ಈ ಎರಡೂ ವ್ಯವಸ್ಥೆಗಳನ್ನು ಜಾರಿಗೆ ತಂದು ಅರಣ್ಯ ಇಲಾಖೆಯ ಶುಲ್ಕ ಪಾವತಿ ವ್ಯವಸ್ಥೆಯಲ್ಲಿ ಪಾರದರ್ಶಕತೆ ಜಾರಿಗೆ ತರಲು ಕ್ರಮ ಕೈಗೊಳ್ಳಲಾಗುತ್ತಿದೆ.
====
ಚಾರಣ ತಾಣಗಳ ವಿವರ
* ಕೋಲಾರ ವಿಭಾಗದ ಅಂತರಗಂಗೆ, ಚಿಕ್ಕಬಳ್ಳಾಪುರ ವಿಭಾಗದ ಸ್ಕಂದಗಿರಿ, ಅವಲಬೆಟ್ಟ, ಕೈವಾರ, ಬೆಂಗಳೂರು ಗ್ರಾಮಾಂತರ ವಿಭಾಗದ ಮಾಕಳಿದುರ್ಗ, ಚಿಕ್ಕಮಗಳೂರು ವಿಭಾಗದ ಎತ್ತಿನಭುಜ, ಕೊಪ್ಪ ವಿಭಾಗದ ಬಲ್ಲಾಳರಾಯನದುರ್ಗದ ಕೋಟೆ, ಬಂಡಾಜೆ ಫಾಲ್ಸ್, ರಾಣಿಝರಿ, ರಾಮನಗರ ವಿಭಾಗದ ಸಾವನದುರ್ಗ, ಬಿದರಕಟ್ಟೆ, ತುಮಕೂರು ವಿಭಾಗದ ದೇವರಾಯನದುರ್ಗ, ಸಿದ್ದರಬೆಟ್ಟ, ಚಿನ್ನಗದಬೆಟ್ಟ, ರಾಮದೇವರ ಬೆಟ್ಟ, ಬೆಳಗಾವಿ ವಿಭಾಗದ ಧಾಮಣೆ-ತಿಳಾರಿ, ಕಾಡ ವ್ಯೂ ಪಾಯಿಂಟ್, ತಿಳಾರಿ ಹಿನ್ನೀರು, ಸೌತೇರಿಯಾ ಜಲಪಾತ, ಸಡಾ, ಹಂಪಿ ಹೆರಿಟೇಜ್ ಟ್ರೇಲ್ಸ್, ಬಳ್ಳಾರಿ ವಿಭಾಗದ ಸರ್ಮೋದಯ, ಹಾಲಸಾಗರ.