ಶಿವಮೊಗ್ಗ : ನಗರದ ಹೊರವಲಯದಲ್ಲಿರುವ ಸೋಗಾನೆಯ ಕೇಂದ್ರ ಕಾರಾಗೃಹದ ಕೈದಿಯೊಬ್ಬ ಮೊಬೈಲ್ ನುಂಗಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ದೌಲತ್ ಅಲಿಯಾಸ್ ಗುಂಡ (30) ಮೊಬೈಲ್ ನುಂಗಿದ ಕೈದಿ. ಜೂ.24ರಂದು ಜೈಲಿನ ಆಸ್ಪತ್ರೆಗೆ ಬಂದು, ತಾನು ಕಲ್ಲು ನುಂಗಿದ್ದೇನೆ ಎಂದು ವೈದ್ಯರಿಗೆ ತಿಳಿಸಿದ್ದ. ಪರೀಕ್ಷಿಸಿದ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಿದ್ದರು. ಎಕ್ಸ್ರೇ ಮಾಡಿದಾಗ ಕೈದಿ ದೌಲತ್ನ ಹೊಟ್ಟೆಯಲ್ಲಿ ಹೊರಗಿನ ವಸ್ತು ಇರುವುದು ಕಂಡುಬಂದಿದೆ. ಜೂ.27ರಂದು ಶಸ್ತ್ರಚಿಕಿತ್ಸೆ ನಡೆಸಿದಾಗ ಮೊಬೈಲ್ ಫೋನ್ ಪತ್ತೆಯಾಗಿದ್ದು, ಸದ್ಯ ನೋಕಿಯಾ ಮೊಬೈಲ್ ಫೋನ್ ಹೊರಗೆ ತೆಗೆಯಲಾಗಿದೆ. ಪ್ರಕರಣವೊಂದರಲ್ಲಿ ದೌಲತ್ ಅಲಿಯಾಸ್ ಗುಂಡನಿಗೆ ಶಿವಮೊಗ್ಗದ ನ್ಯಾಯಾಲಯ 10 ವರ್ಷ ಜೈಲು ಶಿಕ್ಷೆ ವಿಧಿಸಿದೆ.
ಜೈಲಿನೊಳಗೆ ಮೊಬೈಲ್ ಫೋನ್ ನಿಷೇಧವಿದ್ದರೂ, ಜೈಲಿನ ಒಳಗೆ ಮೊಬೈಲ್ ತಲುಪಿರುವ ಕುರಿತು ತನಿಖೆ ನಡೆಸುವಂತೆ ಕೇಂದ್ರ ಕಾರಾಗೃಹದ ಅಧೀಕ್ಷಕ ಪಿ.ರಂಗನಾಥ್ ಅವರು ತುಂಗಾನಗರ ಠಾಣೆಗೆ ದೂರು ನೀಡಿದ್ದಾರೆ. ತುಂಗಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.