;Resize=(412,232))
ವಸಂತಕುಮಾರ್ ಕತಗಾಲ
ಕಾರವಾರ : ರಾಜ್ಯದಲ್ಲಿ ಈಗಾಗಲೇ ಕೈಗಾ ಅಣುಸ್ಥಾವರ ಇದೆ. ಇದರ ಇದೇ ವೇಳೆ, ಇನ್ನೂ 5 ಪರಮಾಣು ಸ್ಥಾವರ ನಿರ್ಮಾಣಕ್ಕೆ ರಾಜ್ಯದ 5 ಜಿಲ್ಲೆಗಳಲ್ಲಿನ ಸಂಭಾವ್ಯ ಜಾಗದಲ್ಲಿ ಸ್ಥಳ ಸೂಕ್ತತೆ, ಭೂ ವೈಜ್ಞಾನಿಕ ಅಧ್ಯಯನಕ್ಕೆ ಎನ್ಟಿಪಿಸಿ (ನ್ಯಾಶನಲ್ ಥರ್ಮಲ್ ಪವರ್ ಕಾರ್ಪೋರೇಷನ್) ಮುಂದಾಗಿದೆ.
ಈ ಪರಮಾಣು ಸ್ಥಾವರಗಳಿಗಾಗಿ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಭಾವಿಕೇರಿ, ಶಿವಮೊಗ್ಗ ಜಿಲ್ಲೆಯ ಬೇಸೂರು, ವಿಜಯಪುರ ಜಿಲ್ಲೆಯ ಮಣ್ಣೂರು, ಕೊಪ್ಪಳ ಜಿಲ್ಲೆಯ ಬನ್ನಿಕುಂಟ, ರಾಯಚೂರು ಜಿಲ್ಲೆಯ ಹಲ್ಕವಟಗಿಗಳಲ್ಲಿ ಸಂಭಾವ್ಯ ಜಾಗ ಗುರುತಿಸಲಾಗಿದೆ.
2000 ಮೆಗಾ ವ್ಯಾಟ್ಗೆ 1200 ಎಕರೆ, 4000 ಮೆಗಾ ವ್ಯಾಟ್ಗೆ 1600 ಎಕರೆ ಮತ್ತು 6000 ಮೆಗಾ ವ್ಯಾಟ್ಗೆ 2000 ಎಕರೆ ಹಾಗೂ ಕಾಲನಿ ಸ್ಥಾಪಿಸಲು ಹೆಚ್ಚುವರಿಯಾಗಿ 100-150 ಎಕರೆ ಭೂಮಿಯ ಅವಶ್ಯಕತೆ ಇದೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಆದರೆ ಇದಕ್ಕೆ ಸ್ಥಳೀಯರ ವಿರೋಧ ಎದುರಾಗುವ ಸಾಧ್ಯತೆ ಇದೆ. ಈಗಾಗಲೇ ಬಾವಿಕೇರಿಯಲ್ಲಿ ಸ್ಥಾವರ ಸೂಕ್ತ ಅಲ್ಲ ಎಂದು ಉತ್ತರ ಕನ್ನಡ ಜಿಲ್ಲಾಧಿಕಾರಿ ಹೇಳಿದ್ದಾರೆ.
ಪರಮಾಣು ವಿದ್ಯುತ್ ಸ್ಥಾವರ ಸ್ಥಾಪಿಸಲು ಎನ್ಟಿಪಿಸಿ ಗುರುತಿಸಿರುವ ಸಂಭಾವ್ಯ ಜಾಗಗಳಲ್ಲಿ ಸ್ಥಳ ಸೂಕ್ತತೆ ತಿಳಿದುಕೊಳ್ಳಲು ಪ್ರಾಥಮಿಕ ಅಧ್ಯಯನ ಹಾಗೂ ಬೋರ್ ಹೋಲ್ ಕೊರೆಯುವ ಮೂಲಕ ಭೂ ವೈಜ್ಞಾನಿಕ ತನಿಖೆ ಕೈಗೊಳ್ಳುವ ಪ್ರಸ್ತಾವನೆ ಬಗ್ಗೆ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಕಂದಾಯ ಇಲಾಖೆ ಇವರ ಅಧ್ಯಕ್ಷತೆಯಲ್ಲಿ ಫೆ.3ರಂದು ಸಂಬಂಧಪಟ್ಟ ಜಿಲ್ಲಾಧಿಕಾರಿಗಳ ಸಭೆ ಆಯೋಜಿಸಲಾಗಿತ್ತು.
1. ಬಾವಿಕೇರಿ (ಅಂಕೋಲಾ ತಾಲೂಕು)
2. ಬೇಸೂರು (ಶಿವಮೊಗ್ಗ ಜಿಲ್ಲೆ)
3. ಮಣ್ಣೂರು (ವಿಜಯಪುರ ಜಿಲ್ಲೆ)
4, ಬನ್ನಿಕುಂಟ (ಕೊಪ್ಪಳ ಜಿಲ್ಲೆ)
5. ಹಲ್ಕವಟಗಿ (ರಾಯಚೂರು ಜಿಲ್ಲೆ)
ಅಂಕೋಲಾ ತಾಲೂಕಿನ ಬಾವಿಕೇರಿ ಸಮೀಪ ಐಎನ್ಎಸ್ ಕದಂಬ ನೌಕಾನೆಲೆ ಇದೆ. ಬೇಲೆಕೇರಿ ಬಂದರು ಇದೆ. ಜೊತೆಗೆ ಉದ್ದೇಶಿತ ಕೇಣಿ ಗ್ರೀನ್ ಫೀಲ್ಡ್ ಬಂದರು ನಿರ್ಮಾಣ ಸ್ಥಳವೂ ಇದೆ. ಬಾವಿಕೇರಿ ಅಂಕೋಲಾ ಪಟ್ಟಣದ ಸಮೀಪ ಇರುವ ಜನವಸತಿ ಪ್ರದೇಶವಾಗಿದೆ. ಇಷ್ಟೊಂದು ಯೋಜನೆಗಳು ಸುತ್ತುವರಿದಿರುವ ಜನವಸತಿ ಪ್ರದೇಶದಲ್ಲಿ ಸಂಭಾವ್ಯ ಸ್ಥಳ ಗುರುತಿಸಲಾಗಿದೆ. ಇಲ್ಲಿ ಅಣು ವಿದ್ಯುತ್ ಸ್ಥಾವರ ಸ್ಥಾಪನೆಗೆ ನಡೆಸುವ ಪೂರ್ವಭಾವಿ ಕ್ರಮಕ್ಕೂ ವ್ಯಾಪಕ ವಿರೋಧ ವ್ಯಕ್ತವಾಗುವ ಸಾಧ್ಯತೆ ಇದೆ.
ಈಗಾಗಲೆ ಕಾರವಾರ ತಾಲೂಕಿನ ಕೈಗಾದಲ್ಲಿ ಅಣು ವಿದ್ಯುತ್ನ 4 ಘಟಕಗಳಿವೆ. ತಲಾ 700 ಮೆಗಾ ವ್ಯಾಟ್ನ 5 ಹಾಗೂ 6ನೇ ಘಟಕ ನಿರ್ಮಾಣ ಕಾರ್ಯ ಆರಂಭವಾಗಿದೆ. ಕೈಗಾ ಅಣು ವಿದ್ಯುತ್ ಸ್ಥಾವರ ನಿರ್ಮಾಣಕ್ಕೂ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಈಗ ಅದೇ ಪಕ್ಕದ ತಾಲೂಕಿನಲ್ಲಿ ಅಣು ವಿದ್ಯುತ್ ಸ್ಥಾವರ ನಿರ್ಮಾಣಕ್ಕೆ ಸ್ಥಳ ಸೂಕ್ತತೆ ಗುರುತಿಸಲು ಇಂಧನ ಇಲಾಖೆ ಪ್ರಸ್ತಾಪಿಸಿದೆ.
ಉತ್ತರ ಕನ್ನಡ ಸೂಕ್ತ ಅಲ್ಲ
ಬಾವಿಕೇರಿಯಲ್ಲಿ 1200-1500 ಎಕರೆ ಭೂಮಿ ಲಭ್ಯತೆ ಬಗ್ಗೆ ಎನ್ಟಿಪಿಸಿಯಿಂದ ವಿನಂತಿ ಪತ್ರ ಬಂದಿತ್ತು. ಆದರೆ ಅಲ್ಲಿ ಕಂದಾಯ ಭೂಮಿ ಇಲ್ಲ. ಭೂಮಿ ಬೇಕಾದರೆ ಕೃಷಿ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಬೇಕು. ಜೊತೆಗೆ ಪಕ್ಕದಲ್ಲಿ ನೌಕಾನೆಲೆ ಇದೆ. ಶಸ್ತ್ರಾಸ್ತ್ರ ಸಂಗ್ರಹಣಾಗಾರ ಇದೆ. ಬೇರೆ ಬೇರೆ ಯೋಜನೆಗಳೂ ಬರುತ್ತಿವೆ. ಹೀಗಾಗಿ ಬಾವಿಕೇರಿ ಅಣು ವಿದ್ಯುತ್ ಯೋಜನೆಗೆ ಸೂಕ್ತ ಅಲ್ಲ ಎಂದು ತಿಳಿಸಲಾಗಿದೆ. ಕಂದಾಯ ಇಲಾಖೆಯಿಂದ ಕೂಡ ಇದೇ ರೀತಿ ವರದಿ ಹೋಗಿದೆ. ಹಾಗಾಗಿ ಈ ಯೋಜನೆ ಡ್ರಾಪ್ ಆಗಲಿದೆ.
- ಲಕ್ಷ್ಮೀಪ್ರಿಯಾ, ಉತ್ತರ ಕನ್ನಡ ಜಿಲ್ಲಾಧಿಕಾರಿ