ಸೂಕ್ತ ವಯಸ್ಸಿನಲ್ಲಿ ಶಾಸ್ತ್ರೀಯ ವಿವಾಹ ಜರುಗಿಸಲು ಪ್ರತಿ ಹವ್ಯಕರ ಮನೆಯಲ್ಲೂ ಸಂಕಲ್ಪ ಆಗಬೇಕು. ದಂಪತಿ ನಾಲ್ಕನೇ ಮಗು ಪಡೆದರೂ ಮಠ ಅದರ ಜವಾಬ್ದಾರಿ ವಹಿಸಿಕೊಳ್ಳಲು ಸಿದ್ಧವಾಗಿದೆ’ ಎಂದು ಸ್ವರ್ಣವಲ್ಲೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಹೇಳಿದ್ದಾರೆ.
ಬೆಂಗಳೂರು : ‘ಸೂಕ್ತ ವಯಸ್ಸಿನಲ್ಲಿ ಶಾಸ್ತ್ರೀಯ ವಿವಾಹ ಜರುಗಿಸಲು ಪ್ರತಿ ಹವ್ಯಕರ ಮನೆಯಲ್ಲೂ ಸಂಕಲ್ಪ ಆಗಬೇಕು. ದಂಪತಿ ನಾಲ್ಕನೇ ಮಗು ಪಡೆದರೂ ಮಠ ಅದರ ಜವಾಬ್ದಾರಿ ವಹಿಸಿಕೊಳ್ಳಲು ಸಿದ್ಧವಾಗಿದೆ’ ಎಂದು ಸ್ವರ್ಣವಲ್ಲೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಹೇಳಿದ್ದಾರೆ. ಜತೆಗೆ ವಿಚ್ಛೇದನ ತಡೆ ಸೇರಿ ಹವ್ಯಕತನ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಚಿಂತನೆ, ಕ್ರಮಗಳ ಅನುಷ್ಠಾನವಾಗಬೇಕು ಎಂದೂ ಅವರು ಕರೆ ನೀಡಿದ್ದಾರೆ.
ತೃತೀಯ ವಿಶ್ವ ಹವ್ಯಕ ಸಮ್ಮೇಳನದ ಕೊನೆಯ ದಿನವಾದ ಭಾನುವಾರ ನಡೆದ ‘ಸಹಸ್ರಚಂದ್ರಸಭಾ’ ಕಾರ್ಯಕ್ರಮದಲ್ಲಿ ಮಾತನಾಡಿ ಹವ್ಯಕರ ಉಳಿವಿಗೆ ಪಾರಮಾರ್ಥಿಕ, ವ್ಯವಹಾರಿಕವಾಗಿ ತೆಗೆದುಕೊಳ್ಳಬೇಕಾದ ಸೂತ್ರಗಳನ್ನು ತಿಳಿಸಿದರು.
ವೈದಿಕರು, ಅಡುಗೆಯವರು, ಕೃಷಿಕ ಯುವಕರನ್ನು ಯುವತಿಯರು ವಿವಾಹವಾಗಲು ಒಪ್ಪುತ್ತಿಲ್ಲ. ವಿವಾಹ ಹಾಗೂ ವಿಚ್ಛೇದನದ ಸಮಸ್ಯೆ ತೀವ್ರವಾಗಿದೆ. ಇಂಥವನ್ನು ತಡೆಯದಿದ್ದರೆ ಹವ್ಯಕ ಸಮಾಜ ಉಳಿವುದು ಕಷ್ಟ. ಹೀಗಾಗಿ ಸೂಕ್ತ ವಯಸ್ಸಿನಲ್ಲಿ ಶಾಸ್ತ್ರೀಯ ವಿವಾಹ ಏರ್ಪಡಿಸಬೇಕು. ವಿವಾಹಿತರಿಗೆ ಶಿಬಿರ ಏರ್ಪಡಿಸಿ ಮಾರ್ಗದರ್ಶನ ನೀಡಬೇಕಿದೆ. ದಾಂಪತ್ಯ ಗಟ್ಟಿಗೊಳಿಸಿಕೊಳ್ಳುವ, ಸಂತಾನ ಪಡೆವ, ಮಕ್ಕಳಿಗೆ ಸಂಸ್ಕಾರ ಕೊಡುವ ಬಗ್ಗೆ ಮನದಟ್ಟು ಮಾಡಿಕೊಡಬೇಕಿದೆ ಎಂದರು.
ಸಂಸ್ಕಾರ ಮತ್ತು ಜನಸಂಖ್ಯೆಯ ಕೊರತೆ ಹವ್ಯಕ ಸಮುದಾಯಕ್ಕೆ ಸವಾಲಾಗಿದೆ. ಯುವ ಸಮುದಾಯ ನಾಸ್ತಿಕತೆ, ಭೋಗದತ್ತ ಹೆಚ್ಚು ಒಲವು ತೋರುತ್ತಿದೆ. ಆಧುನಿಕ ವ್ಯವಸ್ಥೆ, ಧರ್ಮ ಪ್ರಜ್ಞೆ ಇಲ್ಲದ ವಿಜ್ಞಾನದಿಂದ ಪ್ರಭಾವಿತರಾದ ಯುವಕರು ವಿವಾಹ ವ್ಯವಸ್ಥೆಯಿಂದ ವಿಮುಖರಾಗಿ ಅನೈತಿಕ ಮಾರ್ಗ ಅನುಸರಿಸುತ್ತಿದ್ದಾರೆ. ಇದು ಹವ್ಯಕ ಸಮಾಜದ ಪತನಕ್ಕೆ ಕಾರಣವಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಹವ್ಯಕರು ಹೇಗೇಗೋ ಉಳಿದರೆ ಪ್ರಯೋಜನವಿಲ್ಲ. ಹವ್ಯಕ ಬ್ರಾಹ್ಮಣತನ ಉಳಿಸಿಕೊಳ್ಳುವ ನಿಟ್ಟಿನಲ್ಲಿ 21-18ರ ವಯಸ್ಸಿಗೆ ಯುವಕ, ಯುವತಿಯರಿಗೆ ವಿವಾಹ ಏರ್ಪಡಿಸಬೇಕು. ಆಡಂಬರದ ಬದಲು ಶಾಸ್ತ್ರೀಯ ವಿವಾಹಕ್ಕೆ ಆದ್ಯತೆ ದೊರೆಯಬೇಕು. ಕನಿಷ್ಠ ಮೂರು ಸಂತಾನ ಪಡೆಯುವಂತೆ ಪ್ರೇರೇಪಿಸಬೇಕು. ನಾಲ್ಕನೇ ಮಗುವಾದರೆ ಸ್ವರ್ಣವಲ್ಲೀ ಮಠಕ್ಕೆ ನೀಡಿ, ನಾವು ನೋಡಿಕೊಳ್ಳುತ್ತೇವೆ ಎಂದು ಹೇಳಿದರು.
ಸ್ವರ್ಣವಲ್ಲೀ ಮಠ ಹವ್ಯಕ ಕನ್ಯಾ ಸಂಸ್ಕಾರ ಶಿಬಿರ, ನವದಂಪತಿಗೆ ಶಿಬಿರ, ಉತ್ತರ ಭಾರತದ ಸಂಬಂಧ ಏರ್ಪಡಿಸುವ ಮೂಲಕ ಹವ್ಯಕ ಸಮಾಜದ ಒಳಿತಿಗಾಗಿ ಕೆಲಸ ಮಾಡುತ್ತಿದೆ. ಇನ್ನು, ಹವ್ಯಕ ಬ್ರಾಹ್ಮಣರಲ್ಲಿ ಒಗ್ಗಟ್ಟು ಮೂಡಿಸುವುದು ಇನ್ನೊಂದು ಸಮುದಾಯವನ್ನು ತುಳಿಯಲು ಅಲ್ಲ ಎಂಬುದನ್ನು ಎಲ್ಲರೂ ಮನದಟ್ಟು ಮಾಡಿಕೊಳ್ಳಬೇಕು ಎಂದರು.
ವೇದಿಕೆಯಲ್ಲಿ ಸ್ವರ್ಣವಲ್ಲೀ ಆನಂದಬೋಧೇಂದ್ರ ಸರಸ್ವತಿ ಸ್ವಾಮೀಜಿ, ಬೆಂಗಳೂರು ರಾಮಕೃಷ್ಣ ಮಠದ ಚಂದ್ರೇಶಾನಂದಜೀ ಮಹಾರಾಜ್, ಹೊರನಾಡು ಧರ್ಮಕರ್ತ ಡಾ.ಭೀಮೇಶ್ವರ ಜೋಷಿ, ಪುತ್ತೂರು ಶಾಸಕ ಅಶೋಕ ಕುಮಾರ ರೈ, ಅಖಿಲ ಹವ್ಯಕ ಮಹಾಸಭೆ ಅಧ್ಯಕ್ಷ ಡಾ.ಗಿರಿಧರ ಕಜೆ, ಸಮ್ಮೇಳನದ ಗೌರವಾಧ್ಯಕ್ಷ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಕಾರ್ಯದರ್ಶೊ ವೇಣುವಿಘ್ನೇಶ ಸೇರಿ ಇತರರಿದ್ದರು.
ಹವ್ಯಕರು ಅಡಕೆಯಿಂದ ಐಟಿಗೆ
ವಾಲಿದ್ದಾರೆ: ಎಚ್.ಕೆ.ಪಾಟೀಲ್
ಹವ್ಯಕರ ಯುವ ಸಮುದಾಯ ಅಡಕೆಯಿಂದ ಐಟಿ ಕ್ಷೇತ್ರದತ್ತ ವಾಲಿದೆ. ಪತ್ರಿಕೋದ್ಯಮದಂತೆ ಮುಂದಿನ ದಿನಗಳಲ್ಲಿ ಐಟಿ ಕ್ಷೇತ್ರದಲ್ಲಿ ಮುಂದಾಳತ್ವ ಪಡೆಯಲಿದೆ ಎಂಬುದು ನನ್ನ ನಿರೀಕ್ಷೆ ಎಂದು ಕಾನೂನು ಮತ್ತು ಸಂಸದೀಯ ಸಚಿವ ಎಚ್.ಕೆ.ಪಾಟೀಲ್ ಹೇಳಿದ್ದಾರೆ.
ಹವ್ಯಕರು ಬೆಂಗಳೂರಿನಲ್ಲಿ ಐಟಿ ಬೆಳೆಸುವುದು ಮುಖ್ಯವಲ್ಲ, ಅದನ್ನು ತಮ್ಮ ಉತ್ತರ ಕನ್ನಡ, ದಕ್ಷಿಣ ಕನ್ನಡ, ಶಿವಮೊಗ್ಗ ಜಿಲ್ಲೆಗಳಿಗೆ ತೆಗೆದುಕೊಂಡು ಹೋಗಿ ಅಲ್ಲಿ ಉದ್ಯಮ ಸ್ಥಾಪಿಸಬೇಕು. ಇನ್ನು, ಸಹಕಾರಿ ಸಂಘಗಳು ಯಶಸ್ವಿಯಾಗಿ ನಡೆದಿವೆ ಎಂದಾದರೆ ಅದಕ್ಕೆ ಹವ್ಯಕ ಸಮುದಾಯದ ಕೊಡುಗೆ ಸಾಕಷ್ಟಿದೆ. ಹವ್ಯಕ ಸಮುದಾಯದವರಲ್ಲಿ ಜಾತಿ, ಮತದ ಭೇದ ಭಾವ ಇಲ್ಲ. ಅಭಿಪ್ರಾಯ ಭೇದದ ನಡುವೆ ಯಾವುದೇ ಮನಸ್ತಾಪ ಮಾಡಿಕೊಳ್ಳದೆ ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗುವ ಮನಸ್ಸು ಎಲ್ಲರಲ್ಲಿದೆ ಎಂದು ಹೇಳಿದರು.
ಹವ್ಯಕ ಸಮ್ಮೇಳನದ 8 ನಿರ್ಣಯ
1)ಆಧುನಿಕತೆ ಅಳವಡಿಕೆ ಜತೆಗೆ ಹವ್ಯಕತ್ವವನ್ನು ಉಳಿಸಿ ಬೆಳೆಸುವಲ್ಲಿ ಬದ್ಧತೆ ಕಾಪಾಡಿಕೊಳ್ಳುವುದು, ವ್ಯಸನ ಮುಕ್ತ ಸಮಾಜವಾಗಿ ಸಾಗುವುದು.
2) ಹವ್ಯಕ ಕನ್ನಡವನ್ನು ಸಂರಕ್ಷಿಸುವಲ್ಲಿ ವಿಶೇಷ ಒತ್ತುಕೊಡುವ ದೃಷ್ಟಿಯಿಂದ ''ಹವ್ಯಕ ಅಧ್ಯಯನ ಪೀಠ''ವನ್ನು ಸ್ಥಾಪಿಸಲು ಸರ್ಕಾರಕ್ಕೆ ಆಗ್ರಹಿಸುವುದು.
3) ಗ್ರಾಮೀಣ ಭಾಗಗಳಲ್ಲಿ ಕೈಗಾರಿಕೆ ಪ್ರೋತ್ಸಾಹಿಸುವುದು, ಅವಶ್ಯ ತರಬೇತಿ ಇತ್ಯಾದಿ ಮೂಲ ಸೌಕರ್ಯ ಒದಗಿಸಬೇಕಿದೆ.
4) ಮಹಾಸಭೆಯಿಂದ ಹವ್ಯಕರ ಪ್ರಾಂತ್ಯಗಳಲ್ಲಿ ನಿರಂತರ ಕಾರ್ಯಕ್ರಮ ಆಯೋಜಿಸಿ ಸಂಘಟನೆ ಬಲಗೊಳಿಸುವುದು.
5) ಅಪರ ಕಾರ್ಯಗಳನ್ನು ಶಾಸ್ತ್ರೋಕ್ತವಾಗಿ ನೆರವೇರಿಸಲು ಬೆಂಗಳೂರಿನ ಪ್ರಮುಖ ಸ್ಥಳದಲ್ಲಿ ‘ತರ್ಪಣ ಭವನ’ ನಿರ್ಮಾಣ
6) ಹವ್ಯಕರ ಅವಿಭಾಜ್ಯ ಸಂಸ್ಕೃತಿ ಅಡಕೆ ಹಾಗೂ ಇತರ ಕೃಷಿಗೆ ಉಂಟಾಗುತ್ತಿರುವ ಸಮಸ್ಯೆ ಪರಿಹರಿಸುವ ಕುರಿತು ಸರ್ಕಾರ ಆಗ್ರಹಿಸುವುದು.
7) ಹವ್ಯಕ ವಿದ್ಯಾರ್ಥಿಗಳಿಗೆ ಶಿಕ್ಷಣ ಸಂಸ್ಥೆ ಸ್ಥಾಪನೆ. ಆಡಳಿತಾತ್ಮಕ ಕ್ಷೇತ್ರ ಸೇರಿ ಯುವ ಸಮುದಾಯವನ್ನು ಆಯಕಟ್ಟಿನ ಕ್ಷೇತ್ರದಲ್ಲಿ ಬೆಳೆಸಲು ಸಹಕಾರ.
8) ಜನಸಂಖ್ಯಾ ನಿಯಂತ್ರಣ ಮನಸ್ಥಿತಿಯಿಂದ ಯುವಜನರು ಹೊರಬರಲು ಪ್ರೇರೇಪಿಸುವುದು. ಹವ್ಯಕರ ಸಂಖ್ಯಾಬಲ ವೃದ್ಧಿ. ವಿಚ್ಛೇದನ ಪಿಡುಗು ನಿವಾರಣೆಗೆ ಶ್ರಮಿಸುವುದು