ಡೆಹ್ರಾಡೂನ್: ಬೆಂಗಳೂರು ಮೂಲದ ಕುಟುಂಬವೊಂದರ ಮೂವರು ಸದಸ್ಯರು ಭಾರತದ 3 ರಕ್ಷಣಾ ಪಡೆಗಳಾದ ಭಾರತೀಯ ಸೇನೆ, ವಾಯುಪಡೆ ಹಾಗೂ ನೌಕಾದಳದಲ್ಲಿ ಸೇವೆ ಸಲ್ಲಿಸುವ ಮೂಲಕ ಅಪರೂಪದ ಸಾಧನೆ ಮಾಡಿದ್ದಾರೆ.
ಏರ್ ಕಮೋಡೋರ್ ವಸಂತ ನಾವಡ್ ವಾಯುಪಡೆಯಲ್ಲಿ, ಅವರ ಹಿರಿಯ ಪುತ್ರ ಆರ್ಯನ್ ನಾವಡ ನೌಕಾಪಡೆಯಲ್ಲಿ ಈಗಾಗಲೇ ಸೇವೆ ಸಲ್ಲಿಸುತ್ತಿದ್ದರೆ, ಕಿರಿಯ ಮಗ ಅನ್ಮೋಲ್ ನವಾಡ್ ಅವರು ಈಗ ಭಾರತೀಯ ಸೇನೆಗೆ ಸೇರ್ಪಡೆ ಆಗಿದ್ದಾರೆ. ಈ ವೇಳೆ, ಏರ್ ಕಮೊಡೋರ್ ವಸಂತ್ ನಾವಡ್ ಹಾಗೂ ಅವರ ಪುತ್ರ ಆರ್ಯನ್ ನಾವಡ್ ಅವರು ಶನಿವಾರ ಅನ್ಮೋಲ್ ಸೇನೆಗೆ ಸೇರ್ಪಡೆಯಾಗುವ ಹೆಮ್ಮೆಯ ಕ್ಷಣವನ್ನು ಕಣ್ತುಂಬಿಕೊಂಡಿದ್ದಾರೆ.
ಡೆಹ್ರಾಡೂನ್ನ ಭಾರತೀಯ ಮಿಲಿಟರಿ ಅಕಾಡೆಮಿಯಲ್ಲಿ ನಡೆದ ಸಮಾರಂಭದಲ್ಲಿ ಆರ್ಯನ್ ಅವರು ಸೇನಾಪಡೆಗೆ ಅಧಿಕೃತವಾಗಿ ಸೇರ್ಪಡೆಗೊಂಡರು.
ಈ ವೇಳೆ ಮಾತನಾಡಿದ ಲೆಫ್ಟಿನೆಂಟ್ ಅನ್ಮೋಲ್ ನಾವಡ್, ‘ನನ್ನ ತಂದೆ ನನ್ನ ಸ್ಫೂರ್ತಿಯ ಮೂಲ. ನನ್ನ ಅಣ್ಣ ಗಟ್ಟಿ ಕಲ್ಲಿನಂತಹ ಮಾರ್ಗದರ್ಶಿ ಸ್ತಂಭ. ಈ ಇಬ್ಬರು ವ್ಯಕ್ತಿಗಳು ದೇಶಕ್ಕಾಗಿ ಏನಾದರೂ ಅರ್ಥಪೂರ್ಣ ಕೊಡುಗೆ ನೀಡುವಂತೆ ನಿರಂತರವಾಗಿ ನನಗೆ ಪ್ರೇರಣೆ ನೀಡುತ್ತಾ ಬಂದಿದ್ದಾರೆ’ ಎಂದರು.
ಇದೇ ವೇಲೆ, ರಾಷ್ಟ್ರವನ್ನು ರಕ್ಷಿಸುವಲ್ಲಿ ಅವರ ಕುಟುಂಬದ ಪ್ರತಿಯೊಬ್ಬ ಸದಸ್ಯರು ವಹಿಸುವ ವಿಶಿಷ್ಟ ಪಾತ್ರಗಳ ಬಗ್ಗೆ ಪ್ರತಿಕ್ರಿಯೆ ನೀಡಿದ ಏರ್ ಕಮೊಡೋರ್ ವಸಂತ್ ನಾವಡ್ ಅವರು, ‘ವಿಜಯ ಸಾಧಿಸಲು ಮೂರು ಸಶಸ್ತ್ರ ಪಡೆಗಳ ನಡುವೆ ನಿರ್ಣಾಯಕ ಸಮನ್ವಯತೆ ಅಗತ್ಯವಿದೆ. ಆಪರೇಷನ್ ಸಿಂದೂರದ ಯಶಸ್ಸೇ ಇದಕ್ಕೆ ಉದಾಹರಣೆ’ ಎಂದರು.
ತಾಯಿ ಹರ್ಷ:
ಅನ್ಮೋಲ್ ಅವರ ತಾಯಿ ಪೂನಂ ನಾವಡ್ ಮಾತನಾಡಿ, ‘ನಮ್ಮ ಪುರುಷರು ಯಾವಾಗಲೂ ಮಾತೃಭೂಮಿಗೆ ಸೇವೆ ಸಲ್ಲಿಸಲು ಸಿದ್ಧರಿರುವುದನ್ನು ನಾನು ನೋಡಿದ್ದೇನೆ. ಈಗ ನನ್ನ ಮಗನೂ ಸೇನೆಗೆ ಸೇರ್ಪಡೆ ಆಗಿದ್ದಾನೆ. ನಮ್ಮ ಇಡೀ ಕುಟುಂಬವೇ ಸೇಯಲ್ಲಿದೆ. ಈ ಕ್ಷಣಕ್ಕಿಂತ ನನಗೆ ಸಂತೋಷಕರವಾದದ್ದೇನೂ ಇಲ್ಲ’ ಎಂದರು.