ಪ್ರೆಸ್​ ಕ್ಲಬ್​ ಕೌನ್ಸಿಲ್ ರಾಜ್ಯಾಧ್ಯಕ್ಷೆ ಹುದ್ದೆ ಆಮಿಷವೊಡ್ಡಿ ಮಹಿಳೆಗೆ ₹20 ಲಕ್ಷ ವಂಚನೆ

Published : Nov 30, 2025, 09:04 AM IST
Money

ಸಾರಾಂಶ

ಕರ್ನಾಟಕ ಪ್ರೆಸ್​ ಕ್ಲಬ್​ ಕೌನ್ಸಿಲ್​ನ ಮಹಿಳಾ ರಾಜ್ಯಾಧ್ಯಕ್ಷೆ ಮತ್ತು ವಿಶ್ವ ಕನ್ನಡ ಹಬ್ಬಕ್ಕೆ ನಿರ್ದೇಶಕಿಯನ್ನಾಗಿ ಮಾಡುವುದಾಗಿ ಮಹಿಳೆಗೆ ನಂಬಿಸಿ ಲಕ್ಷಾಂತರ ರು. ವಂಚಿಸಿದ್ದ ಆರೋಪಿಯನ್ನು ಗೋವಿಂದರಾಜ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

 ಬೆಂಗಳೂರು :  ಕರ್ನಾಟಕ ಪ್ರೆಸ್​ ಕ್ಲಬ್​ ಕೌನ್ಸಿಲ್​ನ ಮಹಿಳಾ ರಾಜ್ಯಾಧ್ಯಕ್ಷೆ ಮತ್ತು ವಿಶ್ವ ಕನ್ನಡ ಹಬ್ಬಕ್ಕೆ ನಿರ್ದೇಶಕಿಯನ್ನಾಗಿ ಮಾಡುವುದಾಗಿ ಮಹಿಳೆಗೆ ನಂಬಿಸಿ ಲಕ್ಷಾಂತರ ರು. ವಂಚಿಸಿದ್ದ ಆರೋಪಿಯನ್ನು ಗೋವಿಂದರಾಜ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ವಿಜಯನಗರದ ಅಮರಜ್ಯೋತಿನಗರದ ನಿವಾಸಿ, ಕಣ್ಣು ಪತ್ರಿಕೆ ಸಂಪಾದಕ ಹಾಗೂ ಕರ್ನಾಟಕ ಪ್ರೆಸ್‌ ಕ್ಲಬ್‌ ಕೌನ್ಸಿಲ್‌ ಅಧ್ಯಕ್ಷ ಶಿವಕುಮಾರ್ ನಾಗರನವಿಲೆ ಬಂಧಿತ ಆರೋಪಿ.

ಹೊಂಗಸಂದ್ರ ಮುಖ್ಯ ರಸ್ತೆಯಲ್ಲಿನ ನ್ಯೂ ಮೈಕೋ ಲೇಔಟ್‌ ನಿವಾಸಿ ಬಿ. ಮೀನಾಕ್ಷಿ ಎಂಬುವರು ನೀಡಿದ ದೂರಿನನ್ವಯ ಆರೋಪಿಯನ್ನು ಬಂಧಿಸಿ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆರೋಪಿ ಶಿವಕುಮಾರ್ ವಿರುದ್ಧ ನ.13 ರಂದು ಮಹಿಳೆ ದೂರು

ಆರೋಪಿ ಶಿವಕುಮಾರ್ ವಿರುದ್ಧ ನ.13 ರಂದು ಮಹಿಳೆ ದೂರು ನೀಡಿದ್ದರು. ಪೊಲೀಸರು ಆರೋಪಿಗೆ ಲುಕ್‌ಔಟ್‌ ನೋಟಿಸ್‌ ಜಾರಿ ಮಾಡಿದ್ದರು. ಗುರುವಾರ ರಾತ್ರಿ ವಿದೇಶಕ್ಕೆ ಪರಾರಿಯಾಗಲು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದ್ದ ಆರೋಪಿ ಶಿವಕುಮಾರ್‌ನನ್ನು ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

ಪ್ರಕರಣದ ವಿವರ: ತನ್ನನ್ನು ತಾನು ಕರ್ನಾಟಕ ಪ್ರೆಸ್ ಕ್ಲಬ್ ಅಧ್ಯಕ್ಷನೆಂದು ಮೀನಾಕ್ಷಿ ಅವರಿಗೆ ಪರಿಚಯಿಸಿಕೊಂಡಿದ್ದ ಆರೋಪಿಯು, ನಾನು ವಿದೇಶಗಳಲ್ಲಿ ವಿಶ್ವ ಕನ್ನಡ ಹಬ್ಬ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುತ್ತೇನೆ ಎಂದು ಹೇಳಿಕೊಂಡಿದ್ದ. ನಿಮ್ಮನ್ನು ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್‌ನ ಮಹಿಳಾ ರಾಜ್ಯಾಧ್ಯಕ್ಷೆ ಹಾಗೂ ಸಿಂಗಾಪುರದಲ್ಲಿ ಆಯೋಜಿಸುವ 2024 ರ 2ನೇ ಆವೃತ್ತಿಯ ವಿಶ್ವ ಕನ್ನಡ ಹಬ್ಬಕ್ಕೆ ನಿಮ್ಮನ್ನು ನಿರ್ದೇಶಕಿಯನ್ನಾಗಿ ಮಾಡುತ್ತೇನೆ ಎಂದು ನಂಬಿಸಿದ್ದ. ಇದಕ್ಕಾಗಿ ಆರಂಭದಲ್ಲಿ 11 ಸಾವಿರ ರು. ಪಡೆದಿದ್ದ ಆರೋಪಿ ನಂತರ ಸಚಿವ ಶಿವರಾಜ್‌ ತಂಗಡಗಿ ಅವರಿಂದ ಆದೇಶ ಪತ್ರ ಕೊಡಿಸುವುದಾಗಿ 20 ಸಾವಿರ ರು. ಪಡೆದುಕೊಂಡಿದ್ದ. ಬಳಿಕ ವಿಶ್ವ ಕನ್ನಡ ಹಬ್ಬದ ಖರ್ಚುಗಳಿಗಾಗಿ ಹಂತಹಂತವಾಗಿ ಮಹಿಳೆ ಹಾಗೂ ಇತರರಿಂದ ಒಟ್ಟು 20 ಲಕ್ಷಕ್ಕೂ ಹೆಚ್ಚು ಹಣ ಪಡೆದಿದ್ದ. ಅದನ್ನು ಹಿಂದಿರುಗಿಸುವುದಾಗಿಯೂ ನಂಬಿಸಿದ್ದ. ನನ್ನ ಮಾವನ ಚಿಕಿತ್ಸೆಗೆ ಕೂಡಿಟ್ಟಿದ್ದ ಹಣ ಮಾತ್ರವಲ್ಲದೆ, ಮಾಂಗಲ್ಯಸರ ಮತ್ತು ಇತರೆ ಚಿನ್ನಾಭರಣ ಅಡವಿಟ್ಟು ಶಿವಕುಮಾರ್‌ಗೆ ಹಣ ನೀಡಿದ್ದೆ ಎಂದು ಮಹಿಳೆ ದೂರಿನಲ್ಲಿ ಆರೋಪಿಸಿದ್ದಾರೆ‌.

ಸಿಂಗಾಪುರದಲ್ಲಿ ನಡೆದ ವಿಶ್ವ ಕನ್ನಡ ಹಬ್ಬದಲ್ಲಿ ಭಾಗವಹಿಸಿದ್ದ ಮಹಿಳೆಯು ಹಣ ವಾಪಸ್‌ ನೀಡುವಂತೆ ಕೇಳಿದ್ದು, ಆರೋಪಿ ಅವರಿಗೆ ಬೆದರಿಕೆ ಹಾಕಿದ್ದ. ಜತೆಗೆ ನಿಮ್ಮನ್ನು ಸಿಂಗಾಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ವೇದಿಕೆ ಮೇಲೆ ಕೂರಿಸಿದ್ದೇನೆ. ಅದಕ್ಕೆ ನೀವೇ 25 ಲಕ್ಷ ರು. ನೀಡಬೇಕು ಅಲ್ಲಿಗೆ ನಿಮ್ಮ ಹಣ ಸರಿ ಹೋಗಿದೆ. ನಿಮಗೆ ನಾನು ಯಾವುದೇ ಹಣ ಕೊಡಬೇಕಾಗಿಲ್ಲ ಎಂದು ಸಬೂಬು ಹೇಳಿದ್ದ. ನೊಂದ ಮಹಿಳೆ ನ್ಯಾಯಕ್ಕಾಗಿ ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದರು.

 ಮಸ್ಕಾಟ್‌ಗೆ ತೆರಳುತ್ತಿದ್ದ ವೇಳೆ ಸೆರೆ

ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿಗಾಗಿ ಹುಡುಕಾಟ ಆರಂಭಿಸಿದ್ದರು. 2025 ನೇ ಸಾಲಿನ ವಿಶ್ವ ಕನ್ನಡ ಹಬ್ಬ ಕಾರ್ಯಕ್ರಮದಲ್ಲಿ ಭಾಗವಹಿಸಲು ಓಮನ್‌ ದೇಶದ ಮಸ್ಕಾಟ್‌ಗೆ ತೆರಳಲು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಗುರುವಾರ ರಾತ್ರಿ ಬಂದಿದ್ದ ಆರೋಪಿಯನ್ನು ಬಂಧಿಸಲಾಗಿದೆ.

ಆರೋಪಿಯು ಕೃತ್ಯಕ್ಕೆ ಬಳಸಿದ ಮೊಬೈಲ್‌ ಅನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಯನ್ನು ನಾಲ್ಕು ದಿನಗಳ ಕಾಲ ಪೊಲೀಸ್‌ ಕಸ್ಟಡಿಗೆ ಪಡೆಯಲಾಗಿದ್ದು, ಆರೋಪಿ ಹಣಕಾಸಿನ ವ್ಯವಹಾರದ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ. ಆರೋಪಿಯು ಇದೇ ರೀತಿ ಹಲವರಿಗೆ ವಂಚಿಸಿರುವುದು ಪ್ರಾಥಮಿಕ ತನಿಖೆ ವೇಳೆ ಕಂಡು ಬಂದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ಗುತ್ತಿಗೆದಾರರು ಗುಣಮಟ್ಟದ ರಸ್ತೆ ನಿರ್ಮಾಣಕ್ಕೆ ಆದ್ಯತೆ ನೀಡಿ
ಜಾಗತಿಕ ಸವಾಲಿಗೆ ನವೋದ್ಯಮ ಉತ್ತರ : ರಾಧಾಕೃಷ್ಣನ್‌