ಕನ್ನಡಪ್ರಭ ವಾರ್ತೆ ಎಚ್.ಡಿ. ಕೋಟೆ ಪ್ರತಿಭೆ, ಯಶಸ್ಸು ಹಾಗೂ ಕೀರ್ತಿ ಯಾರ ಮನೆಯ ಸ್ವತ್ತಲ್ಲ. ವರ್ಣ, ಜಾತಿ ಭೇಧವಿಲ್ಲದೇ ಈ ಮೇಲಿನ ಮೂರನ್ನು ಯಾರು ಬೇಕಾದರೂ ಗಳಿಸಬಹುದು ಎಂದು ಮೈಸೂರು ವಿಶ್ವ ವಿದ್ಯಾಲಯದಲ್ಲಿನ ಗಾಂಧಿ ಭವನದ ವಿಶ್ರಾಂತ ನಿರ್ದೇಶಕ ಪ್ರೊ.ಎಸ್. ಶಿವರಾಜಪ್ಪ ಹೇಳಿದರು.ಪಟ್ಟಣದ ಬಿಜಿಎಸ್ ಸಮುದಾಯ ಭವನದಲ್ಲಿ ಪಟ್ಟಣದ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ನ ಆದಿಚುಂಚನಗಿರಿ ಪ್ರಥಮ ದರ್ಜೆ ಕಾಲೇಜು ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಸಾಂಸ್ಕೃತಿಕ, ಕ್ರೀಡೆ, ಎನ್ಎಸ್ಎಸ್ ಕಾರ್ಯಚಟುವಟಿಕೆಗಳ ಸಮಾರೋಪಸಮಾರಂಭ ಮತ್ತು ತೃತೀಯ ಬಿ.ಎ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.ಆದಿಚುಂಚನಗಿರಿ ಕಾಲೇಜಿನಲ್ಲಿ ವ್ಯಾಸಾಂಗ ಮಾಡಿದ ವಿದ್ಯಾರ್ಥಿಗಳಲ್ಲಿ ಬಹುತೇಕ ವಿದ್ತಾರ್ಥಿನಿಯರು ಉನ್ನತ ವ್ಯಾಸಂಗ ಮಾಡುತ್ತಿದ್ದಾರೆ. ದೇಶದಲ್ಲಿ, ಜಾತಿ, ಧರ್ಮ, ಅಜ್ಞಾನ, ಅನಾಗರಿಕತೆ, ಅನಾಚರಗಳು ತಾಂಡವವಾಡುತ್ತಿದೆ, ಆದರೆ ವಿದ್ಯಾರ್ಥಿಗಳಾದ ನೀವು ಇವೆಲ್ಲವನ್ನು ಮೆಟ್ಟಿನಿಂತ ಭವ್ಯ ಭಾರತವನ್ನು ನಿರ್ಮಾಣ ಮಾಡುವ ಜವಾಬ್ದಾರಿ ತಮ್ಮ ಮೇಲಿದೆ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.ಮೈಸೂರು ವಿಶ್ವವಿದ್ಯಾಲಯದ ಉಪ ಕುಲಸಚಿವ ಕೆ.ಎನ್. ಮಂಜುನಾಥ್ಮಾತನಾಡಿ ತಾಲೂಕಿನಲ್ಲಿನ ಬಹುತೇಕ ವಿದ್ಯಾರ್ಥಿಗಳು ಗ್ರಾಮೀಣ ಭಾಗದವರೇ ಆಗಿದ್ದು, ತಾವು ಪದವಿ ಪಡೆದ ಬಳಿಕ ತಮ್ಮ ತಮ್ಮ ಗ್ರಾಮಗಳಿಗೆ ತೆರಳಿದಾಗ ತಾವು ಪಡೆದ ಜ್ಞಾನವನ್ನು ಅಲ್ಲಿನ(ಗ್ರಾಮೀಣ) ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ತಿಳಿಸುವ ಮೂಲಕ ಸುಭದ್ರ ಭಾರತವನ್ನು ಕಟ್ಟಲು ಸಾಧ್ಯ ಎಂದರು.ಕನ್ನಡ ಭಾಷಾ ವಿಷಯದಲ್ಲಿ ಚಿನ್ನದ ಪದಕ ಪಡೆದ ವಿದ್ಯಾರ್ಥಿನಿ ನಗ್ಮಾ ಅವರನ್ನು ಅಭಿನಂಧಿಸಲಾಯಿತು. ಜೊತೆಗೆ ವಿವಿಧ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸಾಧನೆ ತೋರಿದ ವಿದ್ಯಾರ್ಥಿಗಳನ್ನು ಸಹ ಅಭಿನಂದಿಸಲಾಯಿತು.ಆದಿಚುಂಚನಗಿರಿ ಮೈಸೂರು ಶಾಖಾ ಮಠದ ಕಾರ್ಯದರ್ಶಿ ಸೋಮೇಶ್ವರನಾಥ ಸ್ವಾಮೀಜಿ ಆಶೀರ್ವಚನ ನೀಡಿದರು.ಮಹಾರಾಜ ಕಾಲೇಜಿನ ವಿಶ್ರಾಂತ ಪ್ರಾಧ್ಯಾಪಕ ಚಂದ್ರೇಗೌಡ, ವಿವಿಧ ಕಾಲೇಜಿನ ಪ್ರಾಂಶುಪಾಲ ಸಂತೋಷ್, ಗುರುಸಿದ್ಧ, ಪೂರ್ಣತೇಜಸ್ವಿ, ಬಿ. ಭೈರೇಗೌಡ, ಎ.ಸಿ. ಭೈರಪ್ಪ, ಮುಖಂಡರಾದ ಕೃಷ್ಣೇಗೌಡ, ಸುರೇಂದ್ರ ಡಿ. ಗೌಡ, ಕಾಳೇಗೌಡ, ನರಸಿಂಹೇಗೌಡ, ಉಪನ್ಯಾಸಕರಾದ ಕಲ್ಲೇಶ್ ಗೌಡ, ರಾಮಚಂದ್ರ, ರಾಜೇಶ್, ಚನ್ನಕೇಶವ, ಮಹೇಂದ್ರ ಇದ್ದರು.