ಭದ್ರಾ ನದಿ ನೀರಿನ ಮಟ್ಟ ಕುಸಿತ

KannadaprabhaNewsNetwork |  
Published : Jun 23, 2026, 01:15 AM IST
ಹಹಹ | Kannada Prabha

ಸಾರಾಂಶ

ಚಿಕ್ಕಮಗಳೂರುಕಾಫಿನಾಡಿನಲ್ಲಿ ಮುಂಗಾರು ಮುನಿಸಿನಿಂದ ಬಯಲು ಸೀಮೆ ಜನರ ಜೀವನಾಡಿಯಾದ ಭದ್ರಾ ನದಿಯಲ್ಲಿ ನೀರಿನ ಮಟ್ಟ ತೀರಾ ಇಳಿಕೆಯಾಗಿದೆ. ಹಲವು ವರ್ಷಗಳ ಬಳಿಕ ಭದ್ರೆ ಒಡಲು ಸಂಪೂರ್ಣ ಬರಿದಾಗುವ ಹಂತ ತಲುಪಿದೆ. ಪ್ರತಿ ವರ್ಷ ಜೂನ್ ನಲ್ಲಿ ಭೋರ್ಗರೆದು ಹರಿಯುತ್ತಾ ಪ್ರವಾಹದ ಪರಿಸ್ಥಿತಿ ನಿರ್ಮಿಸುತ್ತಿದ್ದ ಜೀವನದಿಯ ಇಂದಿನ ಸ್ಥಿತಿ ಕಂಡ ಸ್ಥಳೀಯರಲ್ಲಿ ತೀವ್ರ ಆತಂಕ ಎದುರಾಗಿದೆ.

ಇಂದಿನ ಸ್ಥಿತಿ ಕಂಡ ಸ್ಥಳೀಯರಲ್ಲಿ ತೀವ್ರ ಆತಂಕ

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಕಾಫಿನಾಡಿನಲ್ಲಿ ಮುಂಗಾರು ಮುನಿಸಿನಿಂದ ಬಯಲು ಸೀಮೆ ಜನರ ಜೀವನಾಡಿಯಾದ ಭದ್ರಾ ನದಿಯಲ್ಲಿ ನೀರಿನ ಮಟ್ಟ ತೀರಾ ಇಳಿಕೆಯಾಗಿದೆ. ಹಲವು ವರ್ಷಗಳ ಬಳಿಕ ಭದ್ರೆ ಒಡಲು ಸಂಪೂರ್ಣ ಬರಿದಾಗುವ ಹಂತ ತಲುಪಿದೆ. ಪ್ರತಿ ವರ್ಷ ಜೂನ್ ನಲ್ಲಿ ಭೋರ್ಗರೆದು ಹರಿಯುತ್ತಾ ಪ್ರವಾಹದ ಪರಿಸ್ಥಿತಿ ನಿರ್ಮಿಸುತ್ತಿದ್ದ ಜೀವನದಿಯ ಇಂದಿನ ಸ್ಥಿತಿ ಕಂಡ ಸ್ಥಳೀಯರಲ್ಲಿ ತೀವ್ರ ಆತಂಕ ಎದುರಾಗಿದೆ.

ಒಂದು ಕಾಲದಲ್ಲಿ ಭೋರ್ಗರೆವ ನೀರಿನ ರಭಸಕ್ಕೆ ಕಾಲಿಡಲೂ ಜನರು ಭಯ ಪಡುತ್ತಿದ್ದ ನದಿಯ ಒಡಲು, ಇಂದು ನೀರಿಲ್ಲದೆ ವಾಲಿಬಾಲ್ ಹಾಗೂ ಕ್ರಿಕೆಟ್ ಆಡುವ ಸ್ಥಳವಾಗಿ ಮಾರ್ಪಟ್ಟಿದೆ. ನದಿ ಮಧ್ಯಭಾಗದಲ್ಲೇ ಸ್ಥಳೀಯರು ವಾಲಿಬಾಲ್ ಆಡುತ್ತಿರು ವುದು ಬರದ ಪರಿಸ್ಥಿತಿಗೆ ಹಿಡಿದ ಕನ್ನಡಿಯಾಗಿದೆ. ನದಿ ವೀಕ್ಷಿಸಲು ಬರುತ್ತಿರುವ ಪ್ರವಾಸಿಗರು ಕೂಡ ನದಿಯ ಈ ದಯನೀಯ ಸ್ಥಿತಿ ಕಂಡು ಆಘಾತಕ್ಕೊಳಗಾಗಿದ್ದಾರೆ.

ದಿನ ಕಳೆದಂತೆ ನೀರಿನ ಮಟ್ಟ ಮತ್ತಷ್ಟು ಕುಸಿಯುತ್ತಿದೆ. ಮುಂದಿನ ದಿನಗಳಲ್ಲಿ ಶೀಘ್ರ ಮಳೆ ಬಾರದೇ ಇದ್ದರೆ ಭದ್ರಾ ನದಿ ಸಂಪೂರ್ಣ ಬರಿದಾಗುವ ಭೀತಿ ಎದುರಾಗಿದೆ. ಜೂನ್ ನಲ್ಲಿ ಆರಂಭವಾಗಬೇಕಾಗಿದ್ದ ಮುಂಗಾರು ಇನ್ನು ಸರಿಯಾಗಿ ಆರಂಭವೇ ಆಗಿಲ್ಲ.

ಕೆರೆ ನದಿ ಹಳ್ಳಗಳಲ್ಲಿ ನೀರಿನ ಅಭಾವ ಉಂಟಾಗಿದೆ. ಮಳೆ ಕೊರತೆಯಿಂದ ಚಿಕ್ಕಮಗಳೂರು ಜಿಲ್ಲೆಯ ಜೀವನಾಡಿಯಾಗಿರುವ ಭದ್ರಾ ನದಿಯಲ್ಲಿ ನೀರಿನ ಮಟ್ಟ ತೀವ್ರವಾಗಿ ಕುಸಿದಿದೆ. ಸುಮಾರು 3 ದಶಕಗಳ ಬಳಿಕ ಭದ್ರಾ ನದಿ ಒಡಲು ಬರಿದಾಗಿರುವುದು ಸ್ಥಳೀಯ ಜನರಲ್ಲಿ ಆತಂಕ ಮೂಡಿಸಿದೆ.

ಸಾಮಾನ್ಯವಾಗಿ ಮುಂಗಾರು ಆರಂಭದ ಜೂನ್ ವೇಳೆಗೆ ಭರ್ತಿಯಾಗಿ ಹರಿಯುವ ಭದ್ರಾ ನದಿ ಈ ಬಾರಿ ನೀರಿನ ಕೊರತೆ ಯಿಂದ ಸಂಕಷ್ಟ ಎದುರಿಸುತ್ತಿದೆ. ಮಳೆ ಕೊರತೆಯಿಂದ ನದಿಯ ನೀರಿನ ಮಟ್ಟ ತೀವ್ರ ಕುಸಿದು ಕುಡಿಯುವ ನೀರು, ಕೃಷಿ ಮತ್ತು ಪರಿಸರದ ಮೇಲೆ ಪರಿಣಾಮ ಬೀಳುವ ಭೀತಿ ಕಾಡಿದೆ. ಹವಾಮಾನ ತಜ್ಞರ ಪ್ರಕಾರ, ಈ ಬಾರಿ ಸೂಪರ್ ಎಲ್ ನಿನೋ ಪರಿಣಾಮದಿಂದ ನಿರೀಕ್ಷಿತ ಪ್ರಮಾಣದಲ್ಲಿ ಮುಂಗಾರು ಮಳೆ ಸುರಿಯದಿರುವುದು ಈ ಸ್ಥಿತಿಗೆ ಪ್ರಮುಖ ಕಾರಣ ಎಂದು ಹೇಳಲಾಗುತ್ತಿದೆ.

ಮಳೆ ಕಸಿದು ಭದ್ರಾ ನದಿಗೆ ಹರಿದುಬರುವ ನೀರಿನ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ. ನದಿಯಲ್ಲಿ ನೀರು ಕಡಿಮೆ ಯಾಗಿರುವುದರಿಂದ ಕೆಳಭಾಗದಲ್ಲಿದ್ದ ಕಲ್ಲು-ಬಂಡೆಗಳು ಈಗ ಸ್ಪಷ್ಟವಾಗಿ ಗೋಚರಿಸುತ್ತಿವೆ.

ಬಾಳೆಹೊನ್ನೂರು ಸಮೀಪದ ಸೇತುವೆ ಬಳಿ ನೀರಿನ ಮಟ್ಟ ಸಂಪೂರ್ಣ ಕೆಳಮಟ್ಟಕ್ಕೆ ಕುಸಿದಿದೆ. ಒಂದು ಕಾಲದಲ್ಲಿ ನದಿಯ ಪ್ರಬಲ ಹರಿವಿನಿಂದ ಕಾಲಿಡಲು ಸಹ ಹೆದರುತ್ತಿದ್ದ ಸ್ಥಳ ಇದೀಗ ಆಟದ ಮೈದಾನವಾಗಿ ಪರಿವರ್ತನೆಯಾಗಿದೆ. ಯುವಕರು ನದಿ ಮಧ್ಯಭಾಗದಲ್ಲೇ ವಾಲಿಬಾಲ್ ಮತ್ತು ಕ್ರಿಕೆಟ್ ಆಡುತ್ತಿರುವ ದೃಶ್ಯಗಳು ಕಂಡುಬರುತ್ತಿದೆ. ಇದು ಪರಿಸ್ಥಿತಿಯ ಗಂಭೀರತೆ ಎತ್ತಿ ತೋರಿಸುತ್ತಿದೆ. ಕಳಸ ತಾಲೂಕಿನ ಕುದುರೆಮುಖ ಪ್ರದೇಶದಲ್ಲಿ ಹುಟ್ಟುವ ಭದ್ರಾ ನದಿ ಚಿಕ್ಕಮಗಳೂರು ಸೇರಿದಂತೆ ಹಲವು ಭಾಗಗಳ ಸಾವಿರಾರು ಜನರ ಕುಡಿಯುವ ನೀರು, ಕೃಷಿ ಹಾಗೂ ಪರಿಸರ ವ್ಯವಸ್ಥೆಗೆ ಪ್ರಮುಖ ಆಧಾರ. ನದಿಯ ನೀರಿನ ಮಟ್ಟ ಕುಸಿತದಿಂದ ರೈತರು ಹಾಗೂ ಸ್ಥಳೀಯರು ಭವಿಷ್ಯದ ಬಗ್ಗೆ ಚಿಂತೆಗೀಡಾಗಿದ್ದಾರೆ.

ತಜ್ಞರು ಎಚ್ಚರಿಸಿರುವಂತೆ ಮುಂದಿನ ದಿನಗಳಲ್ಲಿ ಉತ್ತಮ ಪ್ರಮಾಣದ ಮಳೆಯಾಗದಿದ್ದರೆ ಭದ್ರಾ ನದಿ ನೀರಿನ ಮಟ್ಟ ಇನ್ನಷ್ಟು ಕುಸಿಯುವ ಸಾಧ್ಯತೆ ಇದೆ. ಇದರಿಂದ ಕೃಷಿ ಚಟುವಟಿಕೆ, ಕುಡಿಯುವ ನೀರಿನ ಪೂರೈಕೆ ಹಾಗೂ ಪರಿಸರ ಸಮತೋಲನದ ಮೇಲೆ ಗಂಭೀರ ಪರಿಣಾಮ ಉಂಟಾಗಬಹುದು ಎಂದು ಹೇಳಲಾಗಿದೆ.

ಪ್ರಸ್ತುತ ಕಂಡು ಬರುತ್ತಿರುವ ಈ ಪರಿಸ್ಥಿತಿ ಕೇವಲ ಒಂದು ನದಿ ಸಮಸ್ಯೆಯಾಗಿರದೆ ಹವಾಮಾನ ವೈಪರೀತ್ಯ ಮತ್ತು ಮಳೆಯ ಅಸ್ಥಿರತೆ ಗಂಭೀರ ಎಚ್ಚರಿಕೆಯಾಗಿದೆ. ಆದ್ದರಿಂದ ಜಲ ಸಂರಕ್ಷಣೆ ಹಾಗೂ ಪರಿಸರ ಸಂರಕ್ಷಣೆಯತ್ತ ಹೆಚ್ಚಿನ ಗಮನ ಹರಿಸುವ ಅಗತ್ಯತೆ ಮತ್ತೊಮ್ಮೆ ಸ್ಪಷ್ಟವಾಗಿದೆ. ಮಳೆ ಕೊರತೆ ಹೀಗೆ ಮುಂದುವರಿದರೆ ಜನಸಾಮಾನ್ಯರ ಮೇಲೆ ಮಾತ್ರವಲ್ಲದೆ ಪರಿಸರ ಪ್ರಾಣಿ-ಪಕ್ಷಿಗಳ ಮೇಲೆ ಕೂಡಾ ಗಂಭೀರವಾದ ಪರಿಣಾಮ ಬೀರುವ ಸಾಧ್ಯತೆಗಳಿವೆ.

---ಬಾಕ್ಸ್‌---ಜಿಲ್ಲೆಯ ಮುಂಗಾರು ಅವಧಿಯ ಮಳೆಯ ವಿವರ

ತಾಲೂಕು ವಾಡಿಕೆ ಮಳೆ ಬಿದ್ದ ಮಳೆ ಶೇ.

ಚಿಕ್ಕಮಗಳೂರು74.675.5+1

ಕಡೂರು56.744.1-22

ಕೊಪ್ಪ335.0111.6-67

ಮೂಡಿಗೆರೆ294.4142.4-52

ಎನ್‌.ಆರ್‌. ಪುರ163.967.9-59

ಶೃಂಗೇರಿ448.9209.7-53

ತರೀಕೆರೆ76.042.7-44

ಅಜ್ಜಂಪುರ62.629.0-54

ಕಳಸ423.8213.5-50

ಒಟ್ಟು208.388.2-58ಫೋಟೋ

ಬಾಳೆಹೊನ್ನೂರು ಬಳಿಕ ಭದ್ರಾ ನದಿಯ ಸೇತುವೆ ಬಳಿಕ ಕುಸಿದಿರುವ ನೀರಿನ ಮಟ್ಟ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಯೋಧರ ಕಲ್ಯಾಣಕ್ಕೆ ನಿವೃತ್ತ ಶಿಕ್ಷಕಿ ₹10 ಲಕ್ಷ ದೇಣಿಗೆ!
ವಿದ್ಯುತ್ ಖಾಸಗೀಕರಣ ವಿರೋಧಿಸಿ ಬೆಸ್ಕಾಂಗೆ ರೈತರ ಮುತ್ತಿಗೆ