ಹೊಸಕೋಟೆ: ಭರತ ನಾಟ್ಯ ನೃತ್ಯ ಕಲಿಕೆ ಕೇವಲ ಕಲೆ ಮಾತ್ರ ಅಲ್ಲ, ಅದೊಂದು ಕಲಾ ವಿದ್ಯಾರ್ಥಿಗಳ ಅಪ್ರತಿಮ ಸಾಧನೆ ಎಂದು ಮಾಜಿ ಸಂಸದ ಬಿ.ಎನ್.ಬಚ್ಚೇಗೌಡ ತಿಳಿಸಿದರು.
ನಗರದ ವಿವೇಕಾನಂದ ವಿದ್ಯಾಕೇಂದ್ರದ ಸಭಾಂಗಣದಲ್ಲಿ ನವಚೇತನ ನೃತ್ಯ ಅಕಾಡೆಮಿ ಹಮ್ಮಿಕೊಂಡಿದ್ದ ಗುರುವಂದನಾ ನೃತ್ಯವೈಭವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಳೆದ 17 ವರ್ಷಗಳಿಂದ ಅಕಾಡೆಮಿ ವಿದ್ಯಾರ್ಥಿಗಳಿಗೆ ಭರತ ನಾಟ್ಯ ಕಲಿಸುತ್ತಿದ್ದು, ಸಾವಿರಾರು ನೃತ್ಯ ಪಟುಗಳಿಗೆ ತರಬೇತಿ ನೀಡಿ ದೇಶ ವಿದೇಶಗಳಲ್ಲಿ ನಮ್ಮ ಕಲೆ ಸಂಸ್ಕೃತಿ ಪ್ರದರ್ಶಿಸುವ ಮೂಲಕ ನಮ್ಮ ನಾಡಿಗೆ ಹೆಮ್ಮೆ ತರುವ ಕೆಲಸ ಮಾಡಿದೆ. ಇನ್ನೂ ಕೆಲ ವಿದ್ಯಾರ್ಥಿಗಳು ದೇಶದ ವಿವಿಧ ಭಾಗಗಳಲ್ಲಿ ಹಾಗೂ ಹೊರದೇಶಗಳಲ್ಲಿ ಭರತ ನಾಟ್ಯ ಕಲಿಕಾ ಕೇಂದ್ರಗಳನ್ನು ತೆರೆದು ಅಲ್ಲಿಯ ಸ್ಥಳೀಯರಿಗೆ ನೃತ್ಯ ಹೇಳಿಕೊಡುತ್ತಿದ್ದಾರೆ. ಈ ತಂಡದ ನೃತ್ಯ ಪಟುಗಳು ಹಂಪಿ ಉತ್ಸವ, ಕದಂಬ ಉತ್ಸವಗಳಲ್ಲಿ ಕಾರ್ಯಕ್ರಮ ನೀಡುತ್ತಿರುವುದು ಶ್ಲಾಘನೀಯ ಎಂದರು.ವಿದ್ವಾನ್ ಕೋಲಾರ ರಮೇಶ್ ಮಾತನಾಡಿ, ಬಚ್ಚೇಗೌಡರು ರಾಜ್ಯ ಸಚಿವರಾಗಿದ್ದ ಸಂದರ್ಭದಲ್ಲಿ ದೆಹಲಿಯ ಕನ್ನಡ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ದೆಹಲಿ ಕನ್ನಡ ಸಂಘದ 75ನೇ ವಾರ್ಷಿಕೋತ್ಸವದಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಿದ್ದರು. ಅಲ್ಲದೆ, ನೃತ್ಯ ಪಟುಗಳಿಗೆ ವಿಮಾನದಲ್ಲಿ ದೆಹಲಿಗೆ ಪ್ರಯಾಣದ ವ್ಯವಸ್ಥೆಯನ್ನೂ ಕಲ್ಪಿಸಿಕೊಟ್ಟಿದ್ದರು. ಅವರು ಕಲಾ ಸೇವೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದು ಪ್ರೋತ್ಸಾಹಿಸುತ್ತಿರುವುದು ಪ್ರಶಂಸನೀಯ. ಈ ೧೭ನೇ ಗುರುವಂದನಾ ನೃತ್ಯವೈಭವ ಕಾರ್ಯಕ್ರಮದಲ್ಲಿ ಒಂದು ಸಾವಿರ ವಿದ್ಯಾರ್ಥಿಗಳು ನೃತ್ಯಾಭ್ಯಾಸದ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದು ಅವರಿಗೆ ಪ್ರಮಾಣ ಪತ್ರ ನೀಡಲಾಗುವುದು ಎಂದರು.
ಇದೇ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಗಾಯಕ ಹಾಗೂ ಸಂಗೀತ ನೃತ್ಯ ಕಲಾ ಅಕಾಡೆಮಿ ಸದಸ್ಯ ಡಿ.ಆರ್.ರಾಜಪ್ಪ ಹಾಗೂ ಖ್ಯಾತ ರಂಗಕರ್ಮಿ ರಾಮಕೃಷ್ಣ ಅವರಿಗೆ ಗುರುವಂದನೆ ಸಲ್ಲಿಸಲಾಯಿತು.ಕಾರ್ಯಕ್ರಮದಲ್ಲಿ ನವಚೇತನ ನೃತ್ಯ ಕಲಾ ಅಕಾಡೆಮಿಯ ಗೌರವಾಧ್ಯಕ್ಷ ಡಿ.ಎಸ್.ರಾಜ್ಕುಮಾರ್, ಅಧ್ಯಕ್ಷ ಬಚ್ಚಣ್ಣ, ಉಪಾಧ್ಯಕ್ಷ ನಾಗರಾಜ್ ಗುಪ್ತಾ, ಕಾರ್ಯದರ್ಶಿ ಸೋಮಣ್ಣ, ಯೋಜನಾ ಪ್ರಾಧಿಕಾರದ ನಿರ್ದೇಶಕ ಡಾ ಎಚ್ಎಂ ಸುಬ್ಬರಾಜ್, ಮಾಜಿ ಅಧ್ಯಕ್ಷ ಡಾ.ಸಿ.ಜಯರಾಜ್, ವಿಜಯ್ ಕುಮಾರ್, ಉದ್ಯಮಿ ಸುಭಾಷ್ ಗೌಡ, ಉದ್ಯಮಿ ಒಕ್ಕಲಿಗರ ಸಂಘದ ಜಿಲ್ಲಾಧ್ಯಕ್ಷ ನಟರಾಜ್, ಎಲ್ಜಿ ಫೌಂಡೇಷನ್ ಅಧ್ಯಕ್ಷ ಲಕ್ಷ್ಮಣಗೌಡ, ರಾಷ್ಟ್ರಪತಿ ಪ್ರಶಸ್ತಿ ಪುರಸ್ಕೃತ ಡಿವೈಎಸ್ಪಿ ಮಲ್ಲೇಶ್, ರೋಟರಿ ಸಂಸ್ಥೆ ಅದ್ಯಕ್ಷ ಸುಬ್ರಹ್ಮಣಿ, ಮುಖಂಡ ಹರಳೂರು ರವಿ ಸೇರಿ ಹಲವರು ಹಾಜರಿದ್ದರು.
ಫೋಟೋ: 8 ಹೆಚ್ಎಸ್ಕೆ 1ಹೊಸಕೋಟೆಯಲ್ಲಿ ನವಚೇತನ ನೃತ್ಯ ಅಕಾಡೆಮಿ ಹಮ್ಮಿಕೊಂಡಿದ್ದ ಗುರುವಂದನಾ ನೃತ್ಯ ವೈಭವ ಕಾರ್ಯಕ್ರಮದಲ್ಲಿ ಸಂಗೀತ ನೃತ್ಯ ಕಲಾ ಅಕಾಡೆಮಿ ಸದಸ್ಯ ಡಿ.ಆರ್.ರಾಜಪ್ಪ ಹಾಗೂ ಖ್ಯಾತ ರಂಗಕರ್ಮಿ ರಾಮಕೃಷ್ಣ ಅವರಗೆ ಗುರುವಂದನೆ ಸಲ್ಲಿಸಲಾಯಿತು.