ಶಿಕಾರಿಪುರ: ಪ್ರಜಾಪ್ರಭುತ್ವ ದೇಶದಲ್ಲಿ ಕೋಮುವಾದಿ ಸಂಘಟನೆಗಳ ವಿರುದ್ಧ ಸಂವಿಧಾನದ ಉಳಿವಿಗಾಗಿ ನ.1ರಂದು ಭೀಮ್ ಆರ್ಮಿ ಸಹಿತ ವಿವಿಧ ಸಂಘಟನೆಗಳ ವತಿಯಿಂದ ತಾಲೂಕಿನ ಶಿರಾಳಕೊಪ್ಪ ಭೀಮಾ ಪಥಸಂಚಲನವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಾ.ದಲಿತ ಸಂಘರ್ಷ ಸಮಿತಿ ಸಂಚಾಲಕ ಜಗದೀಶ್ ಚುರ್ಚುಗುಂಡಿ ತಿಳಿಸಿದರು.
ಮಂಗಳವಾರ ಪಟ್ಟಣದ ಸುದ್ದಿಮನೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ದೇಶಕ್ಕೆ ಸ್ವಾತಂತ್ರ ಲಭಿಸಿ 78 ವರ್ಷ ಕಳೆದರೂ ದಲಿತರ ವಿರುದ್ಧ ದೌರ್ಜನ್ಯ, ಅತ್ಯಾಚಾರ, ಅಸೃಶ್ಯತೆ ಜೀವಂತವಾಗಿದೆ. ಈ ದಿಸೆಯಲ್ಲಿ 1974-75ರಲ್ಲಿ ನೋಂದಣಿಯಾದ ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ ದ.ಸಂ.ಸ ರಾಜ್ಯ ಸಂಚಾಲಕ ಗುರುಮೂರ್ತಿ ನೇತೃತ್ವದಲ್ಲಿ ರಾಜ್ಯಾದ್ಯಂತ ಹಲವು ಚಳವಳಿ, ಭೂಮಿ ಹಕ್ಕಿಗಾಗಿ ಹೋರಾಟ, ಚಂದ್ರಗುತ್ತಿ ಬೆತ್ತಲೆ ಸೇವೆ ವಿರುದ್ಧ ಹೋರಾಟ ಮತ್ತಿತರ ಹಲವು ಯಶಸ್ವಿ ಹೋರಾಟವನ್ನು ಹಮ್ಮಿಕೊಳ್ಳಲಾಗಿದ್ದು, ಇದೀಗ ಕೋಮುವಾದಿ ಸಂಘಟನೆಗಳ ವಿರುದ್ಧ ಸಂವಿಧಾನ ಉಳಿಸುವ ನಿಟ್ಟಿನಲ್ಲಿ ರಾಜ್ಯ ಸಂಚಾಲಕರ ಆದೇಶದ ಮೇರೆಗೆ ಇದೇ ನ.1 ರಂದು ಭೀಮಾಪಥ ಸಂಚಲನವನ್ನು ಶಿರಾಳಕೊಪ್ಪದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.ಅಂಬೇಡ್ಕರ್ರವರು ದೇಶದಲ್ಲಿನ ಪ್ರತಿಯೊಬ್ಬರ ನೆಮ್ಮದಿಗಾಗಿ ಸಂವಿಧಾನವನ್ನು ರಚಿಸಿದ್ದು, ಈ ದಿಸೆಯಲ್ಲಿ ಪ್ರತಿಯೊಂದು ಸಂಘಟನೆಗಳ ನೋಂದಣಿ ಕಡ್ಡಾಯವಾಗಿದೆ. ಆದರೆ ರಾ.ಸ್ವಂ.ಸೇ ಸಂಘ ನೋಂದಣಿ ಇಲ್ಲದೆ ಕಳೆದ 100 ವರ್ಷದಿಂದ ಜಾತಿಗಳ ಮಧ್ಯೆ ವಿಷಬೀಜ ಬಿತ್ತಿ ಪೊಳ್ಳು ದೇಶಾಭಿಮಾನ, ಜಾತಿ ಅಮಲಿನಲ್ಲಿ ವಿದ್ಯಾವಂತ ಯುವಕರ ದಿಕ್ಕು ತಪ್ಪಿಸುತ್ತಿದೆ ಎಂದು ಆರೋಪಿಸಿದರು.ನೋಂದಣಿಯಾಗದ ರಾಸ್ವಂಸೇ ಸಂಘದ ಕಾರ್ಯಕರ್ತರಿಗೆ ಪಥಸಂಚಲನಕ್ಕೆ ಶಿರಾಳಕೊಪ್ಪದಲ್ಲಿ ಇದೇ ನ.1 ರಂದು ತಾಲೂಕು ಆಡಳಿತ ನೀಡಿದ ಅನುಮತಿಯನ್ನು ವಾಪಾಸ್ ಪಡೆಯಬೇಕು. ನೀಲಿ ಶಾಲು, ಬಾವುಟ, ಕೋಲು, ಸಮವಸ್ತ್ರದ ಭೀಮ್ ಆರ್ಮಿ ಪಥಸಂಚಲನಕ್ಕೆ ಅದೇ ವೇಳೆ, ಮಾರ್ಗದಲ್ಲಿ ಪಥಸಂಚಲನಕ್ಕೆ ಅನುಮತಿ ನೀಡಬೇಕು. ಸಂವಿಧಾನ ಉಳಿವಿಗಾಗಿ ಹಮ್ಮಿಕೊಳ್ಳಲಾದ ಪಥಸಂಚಲನಕ್ಕೆ ಗುರುಮೂರ್ತಿ ಆಗಮಿಸುತ್ತಿದ್ದು ಸಂವಿಧಾನ ಗೌರವಿಸುವ ಪ್ರತಿಯೊಬ್ಬರೂ ಪಾಲ್ಗೊಳ್ಳುವಂತೆ ಕರೆ ನೀಡಿದರು.ಅಹಿಂದಾ ಹೋರಾಟಗಾರ ರಾಘವೇಂದ್ರ ನಾಯ್ಕ ಮಾತನಾಡಿ, ಶಿರಾಳಕೊಪ್ಪದ ರಾ.ಸ್ವಂ.ಸೇ ಸಂಘದ ಪಥಸಂಚಲನದಲ್ಲಿ ಖುದ್ದು ಸಂಸದರು, ಶಾಸಕರು ಪಾಲ್ಗೊಳ್ಳುತ್ತಿದ್ದು ತಾಲೂಕಿನಲ್ಲಿ ಅಶಾಂತಿ ವಾತಾವರಣ ನಿರ್ಮಾಣಕ್ಕೆ ನೇತೃತ್ವ ವಹಿಸುತ್ತಿರುವುದು ವಿಪರ್ಯಾಸ ಎಂದ ಅವರು, ಸರ್ಕಾರಿ ಜಾಗ, ಸಾರ್ವಜನಿಕ ಸ್ಥಳದಲ್ಲಿ ಸಂಘದ ಚಟುವಟಿಕೆಗೆ ಅನುಮತಿ ಅಗತ್ಯ ಎಂದ ಸಚಿವ ಪ್ರಿಯಾಂಕ ರವರ ತೇಜೋವಧೆಯನ್ನು ದಸಂಸ ತೀವ್ರವಾಗಿ ಖಂಡಿಸುತ್ತದೆ. ಶಿರಾಳಕೊಪ್ಪದಲ್ಲಿ ಕಾನೂನು ಮೀರಿ ಅನುಮತಿ ನೀಡಿದಲ್ಲಿ ತೀವ್ರವಾಗಿ ವಿರೋಧಿಸುವುದಾಗಿ ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ತಾ.ಆದಿಜಾಂಬವ ಸಮಾಜದ ಅಧ್ಯಕ್ಷ ನಿಂಗಪ್ಪ, ಅಂಬಾರಗೊಪ್ಪ ಗ್ರಾ.ಪಂ ಅಧ್ಯಕ್ಷ ಮಂಜಾನಾಯ್ಕ, ಸಾಲೂರು ಗ್ರಾ.ಪಂ ಅಧ್ಯಕ್ಷ ಹನುಮಂತನಾಯ್ಕ, ಯುವ ಕಾಂಗ್ರೆಸ್ ಅಧ್ಯಕ್ಷ ಮಂಜುನಾಯ್ಕ, ಕಾರ್ಮಿಕ ಘಟಕದ ಅಧ್ಯಕ್ಷ ಸುನೀಲ್ ಬನ್ನೂರು, ಪುನೀತ್ ನಾಯ್ಕ, ಸಮೀರ್ ಮತ್ತಿತರರಿದ್ದರು.