ಆಲಮೇಲ: ಕಳೆದ 15 ದಿನಗಳಿಂದ ಅಪಾಯದ ಮಟ್ಟದಲ್ಲಿ ಹರಿಯುತ್ತಿದ್ದ ಭೀಮಾ ನದಿ ಪ್ರವಾಹ ಭಾನುವಾರ ಇಳಿಮುಖವಾಗಿದೆ. ಪ್ರವಾಹದಿಂದಾಗಿ ಆತಂಕಗೊಂಡಿದ್ದ ಜನರು ಇದೀಗ ನಿಟ್ಟುಸಿರು ಬಿಟ್ಟಿದ್ದಾರೆ. ಭೀಮಾ ನದಿಯಲ್ಲಿ ಸ್ವಲ್ಪಮಟ್ಟಿಗೆ ಕಡಿಮೆಯಾಗಿ ರವಿವಾರ ನದಿಯಲ್ಲಿ 2.80 ಲಕ್ಷ ಕ್ಯೂಸೆಕ್ಸ್ ನೀರು ಹರಿಯುತ್ತಿದೆ. ಆಲಮೇಲ ತಾಲೂಕಿನ ದೇವಣಗಾಂವ ಸಮೀಪದ ಸೊನ್ನ ಬ್ಯಾರೇಜ್ನಲ್ಲಿ ಒಟ್ಟು 28 ಗೇಟ್ಗಳ ಮೂಲಕ 2.80 ಲಕ್ಷ ಕ್ಯೂಸೆಕ್ಸ್ ನೀರನ್ನು ಹೊರ ಬಿಡಲಾಗುತ್ತಿದೆ. ಬ್ಯಾರೇಜ್ಗೆ ಅಷ್ಟೇ ಪ್ರಮಾಣದ ಒಳಹರಿವಿದೆ ಎಂದು ಅಫಜಲಪುರ ಕೆಎನ್ಎನ್ಎಲ್ ಎಇಇ ಸಂತೋಷಕುಮಾರ ಸಜ್ಜನ ತಿಳಿಸಿದ್ದಾರೆ.ಉಜನಿ ಜಲಾಶಯದಿಂದ ಬಿಡಲಾಗಿರುವ 1 ಲಕ್ಷ ಕ್ಯೂಸೆಕ್, ಸೀನಾ ನದಿಯಿಂದ 1.50 ಲಕ್ಷ ಕ್ಯೂಸೆಕ್ಸ್, ಬೋರಿ ಹಳ್ಳ ಮತ್ತು ಕರ್ನಾಟಕ- ಮಹಾರಾಷ್ಟ್ರದ ಭೀಮಾ ನದಿ ಪಾತ್ರದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ 30 ಸಾವಿರ ಕ್ಯೂಸೆಕ್ಸ್ ನೀರು ನದಿ ಸೇರುತ್ತಿದೆ. ಭೀಮಾ ನದಿಯ ಪ್ರವಾಹಕ್ಕೆ ಒಳಗಾಗಿರುವ ಗ್ರಾಮಗಳಾದ ತಾರಾಪುರ, ತಾವರಖೇಡ, ದೇವಣಗಾಂವ, ಕುಮಸಗಿ, ಶಂಭೇವಾಡ, ಗ್ರಾಮಗಳಲ್ಲಿ ಪ್ರವಾಹ ಸಂತ್ರಸ್ತರು ಈಗಲೂ ಕಾಳಜಿ ಕೇಂದ್ರದಲ್ಲಿ ಇದ್ದಾರೆ. ನೀರಿನಿಂದ ಜಮೀನುಗಳು ನಾಶವಾಗಿದ್ದು, ಇನ್ನು ಮುಂದೆ ಮಳೆಯ ಪ್ರಮಾಣ ಕಡಿಮೆಯಾದರೆ ಸಂತ್ರಸ್ತರು ಹೊರಗೆ ಬರಲು ಸಾಧ್ಯವಿದೆ.