ಕನ್ನಡಪ್ರಭ ವಾರ್ತೆ ಮೂಲ್ಕಿ
ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಸಮೂಹ ವಿದ್ಯಾಸಂಸ್ಥೆಗಳ ಸಂಯೋಜನೆಯಲ್ಲಿ ನ.22ರಿಂದ 24ರ ವರೆಗೆ ಮೂರು ದಿನಗಳ ಕಾಲ ‘ಭ್ರಮರ ಇಂಚರ’ ನುಡಿಹಬ್ಬ ನಡೆಯಲಿದೆ.ಖ್ಯಾತ ಚಿಂತಕ ಲಕ್ಷ್ಮೀಶ ತೋಳ್ಪಾಡಿ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ನಾಲ್ಕನೇ ವರ್ಷದ ಈ ಸಮ್ಮೇಳನವನ್ನು 22ರಂದು ಶುಕ್ರವಾರ ಮಾಜಿ ಸಂಸದ ನಳಿನ್ ಕುಮಾರ್ ಉದ್ಘಾಟಿಸಲಿದ್ದಾರೆ. ಬೆಳಗ್ಗೆ ಪದವಿ ಕಾಲೇಜಿನಿಂದ ಸಮ್ಮೇಳನ ನಡೆಯುವ ಪದವಿ ಪೂರ್ವ ಕಾಲೇಜುವರೆಗೆ ಮೆರವಣಿಗೆ ನಡೆಯಲಿದೆ.
ನೂತನ ಒಳಾಂಗಣ ಕ್ರೀಡಾಂಗಣ ಹಾಗೂ ಸಭಾಭವನವನ್ನು ಡಾ.ಎ.ಜೆ. ಶೆಟ್ಟಿ ಉದ್ಘಾಟಿಸಲಿದ್ದಾರೆ. ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ ವಸ್ತು ಪ್ರದರ್ಶನವನ್ನು ಉದ್ಘಾಟಿಸಲಿದ್ದು, ಇಂಚರ, ಭ್ರಮರವಾಣಿ ಸಂಚಿಕೆಗಳನ್ನು ಶಾಸಕ ಉಮಾನಾಥ ಕೋಟ್ಯಾನ್ ಬಿಡುಗಡೆಗೊಳಿಸುವರು. ಖ್ಯಾತ ಪತ್ರಕರ್ತ ಅಜಿತ್ ಹನಮಕ್ಕನವರ್ ದಿಕ್ಸೂಚಿ ಭಾಷಣ ಮಾಡಲಿದ್ದಾರೆ.ನಾಲ್ಕು ನುಡಿಹಬ್ಬಗಳ ಸಮ್ಮೇಳನಾಧ್ಯಕ್ಷರಾದ ಲಕ್ಷ್ಮೀಶ ತೋಳ್ಪಾಡಿ, ನಾಡೋಜ ಕೆ.ಪಿ. ರಾವ್, ಶ್ರೀಧರ ಡಿ.ಎಸ್, ಪಾದೇಕಲ್ ವಿಷ್ಣು ಭಟ್ಟರ ಉಪಸ್ಥಿತಿಯಲ್ಲಿ ಗೋಷ್ಠಿಗಳು ನಡೆಯಲಿಲವೆ. ಖ್ಯಾತ ಟಿವಿ ನಿರೂಪಕಿ ಅನುಶ್ರೀ ಅವರು ಸಾಧನೆಗಳೆಡೆ ಸಾಗುವ ಬಗೆಯ ಬಗ್ಗೆ ಮಾತನಾಡಲಿದ್ದಾರೆ.
ನ.23ರಂದು ಶನಿವಾರ ಲಕ್ಷ್ಮೀಶ ತೋಳ್ಪಾಡಿ ಅವರೊಂದಿಗೆ ಸಂವಾದ ನಡೆಯಲಿದೆ. ಭಾಷಾ ಸೊಗಡು ಗೋಷ್ಠಿಯಲ್ಲಿ ಸಂಸ್ಕೃತದ ಅವಕಾಶಗಳು ಬಗ್ಗೆ ಅವಿನಾಶ ಕೊಡಂಕಿರಿ ಹಾಗೂ ತುಳು ಕಲಿಕೆಯ ಬಗ್ಗೆ ಡಾ.ವಿ.ಕೆ. ಯಾದವ್ ಮಾತನಾಡಲಿದ್ದಾರೆ. ಯಕ್ಷಗಾನದ ಸೌಂದರ್ಯ ಗೋಷ್ಠಿಯಲ್ಲಿ ಮುರಳೀ ಕಡೇಕಾರ್, ಪು. ಗುರುಪ್ರಸಾದ ಭಟ್ ಮಾತನಾಡಲಿದ್ದಾರೆ. ಜನಸಾಮಾನ್ಯ ಸಾಧಕರಾದ ಧನ್ಯಾ ಪುತ್ತೂರು, ರವಿ ಕಟಪಾಡಿ, ಈಶ್ವರ ಮಲ್ಪೆ, ಕೃಷ್ಣ ಮೂಲ್ಯ, ಶೀನ ಶೆಟ್ಟಿ ಮಾತನಾಡುವರು.ನ.24ರಂದು ಡಾ. ಅನಂತಪ್ರಭು ಜಿ. ಸಾಮಾಜಿಕ ಜಾಲತಾಣಗಳ ಬಗ್ಗೆ, ಗಿರಿಜಾ ಸಿದ್ದಿ ರಂಗಭೂಮಿ ಸಿನಿಮಾ ಬಗ್ಗೆ, ನಮ್ಮ ಹೆಮ್ಮೆಯ ಇತಿಹಾಸದ ಬಗ್ಗೆ ಮಾಜಿ ಸಂಸದ ಪ್ರತಾಪಸಿಂಹ, ಕನ್ನಡ ಭಾಷೆಯ ಸೊಗಸು ಕುರಿತು ಮನು ಹಂದಾಡಿ ಮಾತನಾಡಲಿದ್ದಾರೆ.
ಸಮಾರೋಪ ಸಮಾರಂಭ: ಸಮಾರೋಪ ಸಮಾರಂಭದಲ್ಲಿ ರಾಜ್ಯಸಭಾ ಸದಸ್ಯ ಕೆ.ಸಿ. ರಾಮಮೂರ್ತಿ, ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ರಾಮಪ್ರಕಾಶ ಹೊಳ್ಳ, ಡಾ.ಎಂ.ಪಿ. ಶ್ರೀನಾಥ್ ಗಣೇಶ್ ಸಂಕಮಾರ್, ಮಹಾಬಲ ಪೂಜಾರಿ ಭಾಗವಹಿಸಲಿದ್ದು, ಸಾಧಕ ಹಿರಿಯ ವಿದ್ಯಾರ್ಥಿಗಳಾದ ಸಿಎ ಚಂದ್ರಶೇಖರ ಶೆಟ್ಟಿ, ಕುಡ್ತಿಮಾರುಗುತ್ತು ಭಾಸ್ಕರ ಶೆಟ್ಟಿಯವರಿಗೆ ಹಾಗೂ ರಾಜ್ಯ, ರಾಷ್ಟ್ರಮಟ್ಟದ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ ನಡೆಯಲಿದೆ. ಕಟೀಲಿನಲ್ಲಿ ನಾಳೆಯಿಂದ ನಡೆಯಲಿರುವ ನುಡಿಹಬ್ಬ ಸಮ್ಮೇಳನದ ಆಕರ್ಷಣೆಗಾಗಿ ವಿದ್ಯಾರ್ಥಿಗಳು ಪ್ಲಾಸ್ಟಿಕ್ ಕ್ಯಾನ್ಗಳಲ್ಲಿ ಅಲಂಕೃತ ಹೂವಿನ ಗಿಡಗಳನ್ನು ಬೆಳೆಸಿದ್ದಾರೆ.