ಭಾರತಪ್ರಪಂಚವಿಶೇಷರಾಜಕೀಯಮನರಂಜನೆಅಪರಾಧಕ್ರೀಡೆಕರ್ನಾಟಕಇ- ಪೇಪರ್

ಅಟ್ಲಾಂಟಾದಲ್ಲಿ ಕೃಷ್ಣಮಂದಿರಕ್ಕೆ ಭೂಮಿಪೂಜೆ

KannadaprabhaNewsNetwork | Updated : Nov 08 2023, 01:01 AM IST

ಅಮೆರಿಕಾದ ಅಟ್ಲಾಂಟಾ ನಗರದಲ್ಲಿ ಭಕ್ತಜನರ ಸಹಕಾರದೊಂದಿಗೆ ಬೃಹತ್ ಶ್ರೀಕೃಷ್ಣ ಮಂದಿರ ನಿರ್ಮಾಣಕ್ಕೆ ಭೂಮಿಪೂಜೆ

ಕನ್ನಡಪ್ರಭ ವಾರ್ತೆ ಉಡುಪಿ

ವಿಶ್ವಾದ್ಯಂತ ಶ್ರೀ ಕೃಷ್ಣಭಕ್ತಿ ಪ್ರಸಾರ ಸಂಕಲ್ಪ ಮಾಡಿರುವ ಉಡುಪಿ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಮಂಗಳವಾರ ಅಮೆರಿಕಾದ ಅಟ್ಲಾಂಟಾ ನಗರದಲ್ಲಿ ಭಕ್ತಜನರ ಸಹಕಾರದೊಂದಿಗೆ ಬೃಹತ್ ಶ್ರೀಕೃಷ್ಣ ಮಂದಿರ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಸಂದೇಶ ನೀಡಿದ ಶ್ರೀಗಳು, ಇಲ್ಲಿ ಮಂದಿರಕ್ಕಾಗಿ ಸುಮಾರು 6 ಎಕ್ರೆ ಜಮೀನನನ್ನು ಖರೀದಿಸಲಾಗಿದ್ದು, ಮುಂದಿನ 2 ವರ್ಷಗಳಲ್ಲಿ ತಾವು ಉಡುಪಿ ಕೃಷ್ಣಮಠದಲ್ಲಿ ಶ್ರೀ ಕೃಷ್ಣನ ಪರ್ಯಾಯವನ್ನು ಮುಗಿಸಿ ಮರಳಿ ಬರುವಷ್ಟರಲ್ಲಿ, ಇಲ್ಲಿ ಶ್ರೀಕೃಷ್ಣ ಪ್ರತಿಷ್ಠೆಯ ಮೂಲಕ ಮಂದಿರದ ವಿದ್ಯುಕ್ತ ಉದ್ಘಾಟನೆಗೆ ಸಂಕಲ್ಪ ಮಾಡಲಾಗಿದೆ ಎಂದವರು ಹೇಳಿದರು.

ಈ ಸಂಕಲ್ಪಿತ ಶ್ರೀ ಕೃಷ್ಣ ಮಂದಿರದ ಗರ್ಭಗುಡಿಯ ಕೆಳಗೆಡೆ ಗೀತೆಯ 700 ಶ್ಲೋಕಗಳನ್ನು ಕೆತ್ತಿದ ಇಟ್ಟಿಗೆಗಳನ್ನು ಭಕ್ತರ ಹೆಸರಿನಲ್ಲಿ ಇರಿಸಲಾಗುವುದು.

ತನ್ಮೂಲಕ ಶ್ರೀಗಳ ಕೋಟಿಗೀತಾ ಲೇಖನ ಯೋಜನೆಯ ಸ್ಮಾರಕವಾಗಿ ಅಮೆರಿಕಾದಲ್ಲಿ ಈ ಮಂದಿರ ಮೂಡಿಬರಲಿದೆ ಎಂದರು.

ಭೂಮಿ ಪೂಜೆಯ ವೈದಿಕ ಕಾರ್ಯಕ್ರಮಗಳನ್ನು ಉಡುಪಿಯ ಹೆರ್ಗ ವೇದವ್ಯಾಸ ಭಟ್ ನೆರವೇರಿಸಿದರು. ಮಠದ ಪ್ರಧಾನ ಅರ್ಚಕ ಜಯ ಪ್ರಸಾದ್ ಅಮ್ಮಣ್ಣಾಯ ಮುಂದಾಳುತ್ವದಲ್ಲಿ ನಡೆಯುತ್ತಿರುವ ಈ ಯೋಜನೆಯ ವಿವರವನ್ನು ಪ್ರಧಾನ ಕಾರ್ಯದರ್ಶಿ ಪ್ರಸನ್ನಾಚಾರ್ಯ ನೀಡಿದರು.

ವಿದ್ವಾನ್ ಕೇಶವ ರಾವ್ ತಡಿಪಾತ್ರಿ, ಬಾಲಕೃಷ್ಣ ಭಟ್, ಹರೀಶ್ ಭಟ್, ಅಜಯ್, ಮುರಳಿ, ಶ್ರೀಕಾಂತ್ ಮೊದಲಾಗಿ ನೂರಾರು ಭಕ್ತಜನರು ಈ ಐತಿಹಾಸಿಕ ಭೂಮಿಪೂಜಾ ಕಾರ್ಯಕ್ರಮದಲ್ಲಿ ಅತ್ಯುತ್ಸಾಹದಿಂದ ಪಾಲ್ಗೊಂಡರು.

ಅಮೆರಿಕಾದಲ್ಲಿ ಪುತ್ತಿಗೆ ಶ್ರೀಗಳು ಸ್ಥಾಪಿಸಿರುವ 11 ಶಾಖಾ ಮಠಗಳಲ್ಲಿ ಇದು 6ನೇ ಮಠವಾಗಿದ್ದು, ಇದೀಗ ಸಣ್ಣ ಜಾಗದಲ್ಲಿ ಕಾರ್ಯನಿರ್ವಹಿಸುತ್ತಿದೆ.