ಮಂಗಳೂರು: ಮಂಗಳೂರಿನ ಕಂಕನಾಡಿಯ ನಾಗುರಿಯಲ್ಲಿ ಬುಧವಾರ ಮನೆ ಕುಸಿತ ಘಟನೆಯಲ್ಲಿ ಮೃತಪಟ್ಟ ಬಿಹಾರ ಮೂಲದ ಇಬ್ಬರು ಮಕ್ಕಳ ಅಂತ್ಯಕ್ರಿಯೆಯನ್ನು ನಗರದ ಹಿಂದು ರುದ್ರಭೂಮಿಯಲ್ಲಿ ಗುರುವಾರ ನಡೆಸಲಾಯಿತು. ಈ ದುರಂತದಲ್ಲಿ ಬಿರಾದ ಮೂಲದ 8 ವರ್ಷದ ಅನಾಮಿಕ ಚೌರಾಸಿಯ ಹಾಗೂ 4 ವರ್ಷದ ಪರಿ (ತನು) ಮತ್ತು ಉಡುಪಿ ಮೂಲದ ಶಾಂತಾ ಮಣ್ಣಿನಡಿ ಸಿಲುಕಿ ಮೃತಪಟ್ಟಿದ್ದರು. ಈ ಪೈಕಿ ಶಾಂತಾ ಅವರ ಮೃತದೇಹವನ್ನು ಅವರ ಊರಿಗೆ ಕಳುಹಿಸಲಾಗಿದೆ. ಮಕ್ಕಳಿಬ್ಬರ ಮೃತದೇಹವನ್ನು ಗುರುವಾರ ಮಧ್ಯಾಹ್ನ ನಂದಿಗುಡ್ಡೆಯ ರುದ್ರಭೂಮಿಗೆ ತರಲಾಯಿತು. ಬಳಿಕ ಅಲ್ಲಿ ವಿಧಿವಿಧಾನ ನೆರವೇರಿಸಿ ಅಂತ್ಯಸಂಸ್ಕಾರ ನೆರವೇರಿಸಲಾಯಿತು. ಅಂತ್ಯಸಂಸ್ಕಾರಕ್ಕೂ ಮುನ್ನ ಮನೆ ಬಳಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು.
ಈ ಮಕ್ಕಳಿಬ್ಬರ ಪೋಷಕರು ಬಿಹಾರ ಮೂಲದವರಾದರೂ ಕಳೆದ 20 ವರ್ಷಗಳ ಹಿಂದೆ ಇವರ ಪೋಷಕರು ಮಂಗಳೂರಿಗೆ ಆಗಮಿಸಿ ಇಲ್ಲಿಯೇ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ಈ ದುರಂತದಲ್ಲಿ ತಂದೆ-ತಾಯಿ ಇಬ್ಬರೂ ಮಕ್ಕಳನ್ನು ಕಳೆದುಕೊಂಡು ದುಃಖ ಸಾಗರದಲ್ಲಿ ಮುಳುಗುವಂತಾಗಿದೆ.
---------------